ಜಾಗ್ವಾರ್ ಚಿತ್ರದ ಚಿತ್ರೀಕರಣದ ಸಲುವಾಗಿ ಕಳೆದ ಮೂರು ವಾರಗಳಿಂದ ವಿದೇಶ ಪ್ರವಾಸದಲ್ಲಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಳೆ ಮುಂಜಾನೆ ನಗರಕ್ಕೆ ಮರಳಲಿದ್ದಾರೆ. ಈಗಾಗಲೇ ವಿಧಾನಸಭೆ ಕಲಾಪ ಆರಂಭವಾಗಿದ್ದು, ಕಳೆದ ಎರಡು ದಿನಗಳಿಂದ ಪಾಲ್ಗೊಳ್ಳದ ಕುಮಾರಸ್ವಾಮಿಯವರು ಸೋಮವಾರದಿಂದ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಜೂ.12ರಂದು ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಗೌಡರ ಚಿತ್ರ ಜಾಗ್ವಾರ್ ಚಿತ್ರೀಕರಣಕ್ಕಾಗಿ ತೆರಳಿದ್ದರು. ಕುಮಾರಸ್ವಾಮಿ ಪ್ರವಾಸ ಕೈಗೊಂಡ ನಂತರ ರಾಜ್ಯದಲ್ಲಿ ನಡೆದ ರಾಜಕೀಯ ವಿದ್ಯಮಾನಗಳು ಮೂರು ಪ್ರಮುಖ ಪಕ್ಷಕ್ಕೂ ಮುಜುಗರವನ್ನು ಉಂಟು ಮಾಡಿವೆ. ಬಲ್ಗೇರಿಯಾದಿಂದಲೇ ಕುಮಾರಸ್ವಾಮಿಯವರು ದೈನಂದಿನ ರಾಜಕೀಯ ವಿದ್ಯಮಾನಗಳ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕುಮಾರಸ್ವಾಮಿಯವರನ್ನು ತಮ್ಮ ವಶಕ್ಕೆ ಬಿಟ್ಟುಕೊಟ್ಟರೆ ಮುಖ್ಯಮಂತ್ರಿ ಮಾಡುವುದಾಗಿ ಅಮಾನತುಗೊಂಡ ಶಾಸಕರು ಹೇಳಿಕೆ ಕೂಡ ನೀಡಿದ್ದರು.ಬಂಡಾಯ ಶಾಸಕರ ವಿರುದ್ಧ ಶಿಸ್ತು ಕ್ರಮ ಅಥವಾ ಬಂಡಾಯ ಶಮನಗೊಳಿಸಿ ಮತ್ತೆ ಒಂದಾಗುತ್ತಾರೋ ಎಂಬುದು ಸದ್ಯದಲೇ ನಿರ್ಧಾರವಾಗಲಿದೆ. ಕುಮಾರಸ್ವಾಮಿ ಪ್ರವಾಸದಲ್ಲಿದ್ದರಿಂದ ಈ ವಿಚಾರದಲ್ಲಿ ಜೆಡಿಎಸ್ ತೀರ್ಮಾನ ಕೈಗೊಳ್ಳುವುದು ವಿಳಂಬವಾಗಿತ್ತು. ಅಲ್ಲದೆ ಅಮಾನತುಗೊಳಿಸಿದ ಎಂಟು ಮಂದಿ ಶಾಸಕರಿಗೂ ನೋಟಿಸ್ ನೀಡಿ ವಿಚಾರಣೆಗಾಗಿ ಶಿಸ್ತು ಸಮಿತಿಯನ್ನು ರಚಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
