ನವದೆಹಲಿ: ಕಳೆದ ತಿಂಗಳು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ನಡೆದ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತಯಬಾ ಉಗ್ರ ಸಂಘಟನೆ ಹೊತ್ತು ಕೊಂಡಿದೆ.
ಕಳೆದ ಸೆ.18ರಂದು ಉರಿ ಸೇನಾ ಶಿಬಿರದ ಮೇಲೆ ದಾಳಿಗೈದ ತನ್ನ ನಾಲ್ವರು ಉಗ್ರರ ಪೈಕಿ ಒಬ್ಟಾತನ ಅಂತ್ಯಕ್ರಿಯೆಯನ್ನು ಅ.25ರಂದು (ಇಂದು) ತಾನು ಕೈಗೊಳ್ಳುತ್ತಿದ್ದು ಈ ಸಂದರ್ಭದಲ್ಲಿ ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಾಫೀಜ್ ಮೊಹಮ್ಮದ್ ಸಯೀದ್ ಪ್ರಾರ್ಥನೆಯ ಬಳಿಕ ವಿಶೇಷ ಭಾಷಣ ಮಾಡಲಿರುವುದಾಗಿ ಪೋಸ್ಟರ್ನಲ್ಲಿ ತಿಳಿಸಲಾಗಿದೆ.
ಲಷ್ಕರ್ ಸಂಘಟನೆಯ ಮುಹಮ್ಮದ್ ಅನಸ್, ಗುಪ್ತ ನಾಮ ಅಬು ಸರಾಖಾ ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ದಾಳಿ ನಡೆಸುವಾಗ ಹತರಾಗಿದ್ದಾರೆ. ಉರ್ದು ಭಾಷೆಯಲ್ಲಿರುವ ಈ ಪೋಸ್ಟರ್ನಲ್ಲಿ ಲಷ್ಕರೆ ಉಗ್ರರು 177 ಭಾರತೀಯ ಯೋಧರನ್ನು ಹತೈಗೈದಿದ್ದಾರೆ ಎಂದು ಬರೆಯಲಾಗಿದೆ.
ಕಾಶ್ಮೀರದಲ್ಲಿ 177 ಹಿಂದೂ ಯೋಧರನ್ನು ಹತ್ಯೆಗೈಯ್ಯುವ ವೇಳೆ ಮುಜಾಹಿದ್ ಭಾಯಿ ಅಬು ಸರಾಖಾ ಮುಹಮ್ಮದ್ ಅನಸ್ ಅವರು ಹುತಾತ್ಮರಾಗಿದ್ದಾರೆ. ಅವರಿಗಾಗಿ ಶ್ರದ್ದಾಂಜಲಿ ಸಭೆ ಏರ್ಪಡಿಸಿದ್ದು, ಗುಜರಣ್ವವಾಲಾದಲ್ಲಿರುವ ಬಡಾ ನಾಲಾ ನವಾಬ್ ಚೌಕ್ ಗಿರ್ಜಾಕ್ ಬಳಿಯಿರುವ ಸದಾಬಹಾರ್ ನರ್ಸರಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ.
ಉರಿ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇಲ್ಲ ಎಂದು ಅಲ್ಲಿನ ಸರ್ಕಾರ ಪದೇ ಪದೇ ಹೇಳುತ್ತಾ ಬಂದಿದ್ದರೂ, ಇದೀಗ ಲಷ್ಕರ್ ಸಂಘಟನೆ ದಾಳಿಯ ಹೊಣೆ ಹೊತ್ತಿರುವುದರ ಬಗ್ಗೆ ಪಾಕ್ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸುತ್ತಿದೆ ಎಂಬುದು ಕಾದುನೋಡಬೇಕಿದೆ.
ಉರಿ ಸೇನಾ ಶಿಬಿರದ ಮೇಲೆ ದಾಳಿಗೈದ ನಾಲ್ವರು ಉಗ್ರರಲ್ಲಿ ಒಬ್ಬಾತನ ಗುಜ್ರನ್ವಾಲಾದ ನಿವಾಸಿ ಮೊಹಮ್ಮದ್ ಅನಾಸ್ ಅಲಿಯಾಸ್ ಅಬು ಸಿರಾಕಾ ಎಂಬುದು ಲಷ್ಕರ್ ಪೋಸ್ಟರ್ನಿಂದ ತಿಳಿದು ಬರುತ್ತದೆ ಎಂಬುದಾಗಿ ಪತ್ರಿಕಾ ವರದಿ ಹೇಳಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
