ರೇಷನ್ ಕಾರ್ಡ್ ಬೇಕೆಂದು ಅರ್ಜಿ ಹಾಕಿ ಐದು ತಿಂಗಳು ಕಳೆದರೂ ಇನ್ನೂ ರೇಷನ್ ಕಾರ್ಡ್ ಸಿಗದೇ ಅನ್ನಭಾಗ್ಯದಿಂದ ವಂಚಿತರಾಗಿ ನಾಗರಿಕರು ಪರದಾಡುವಂತಾಗಿತ್ತು. ನಿಗದಿಪಡಿಸಿದ ಮಾನದಂಡಗಳಿಂದ ಸಾರ್ವಜನಿಕರಿಗೆ ಪಡಿತರ ಚೀಟಿ ಪಡೆದುಕೊಳ್ಳುವುದೇ ಸವಾಲಾಗಿತ್ತು.
ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಸೇವೆಯನ್ನೂ ಸಕಾಲ ಯೋಜನೆಯಡಿ ಸೇರ್ಪಡೆಗೊಳಿಸಿ, ಗರಿಷ್ಠ ಎಂದರೆ 15 ದಿನಗಳಲ್ಲಿ ಪಡಿತರ ಚೀಟಿ ದೊರಕುವಂತೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಪಡಿತರ ಕಾರ್ಡ್ಗೆ ಹೊಸ ರೂಪ ನೀಡಲಾಗುತ್ತಿದ್ದು, ನೋಡಲು ಆಧಾರ್ ಕಾರ್ಡ್ನಂತೆಯೇ ಕಾಣಲಿದೆ. ರಾಜ್ಯ ಸರ್ಕಾರ ಡಿಸೆಂಬರ್ ನಿಂದ ಹೊಸ ಯೋಜನೆ ಜಾರಿಗೆ ತರಲಿದೆ. ಬಿ.ಪಿ.ಎಲ್. ಪಡಿತರ ಚೀಟಿ ಪಡೆಯಲು ಇದ್ದ 14 ಮಾನದಂಡಗಳನ್ನು ಕೇವಲ 4 ಕ್ಕೆ ಇಳಿಸಲಾಗಿದೆ ಅರ್ಜಿ ಸಲ್ಲಿಸಿದ ಕೇವಲ 15 ದಿನಗಳಲ್ಲಿ ಮನೆ ಬಾಗಿಲಿಗೆ ಪಡಿತರ ಚೀಟಿ ತಲುಪಲಿದೆ.
ಪಡಿತರ ಕಾರ್ಡ್ಗೆ ಅರ್ಜಿ ಹಾಕಿದ ನಂತರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯವರೇ ಬಂದು ತಪಾಸಣೆ ಮಾಡಬೇಕು ಎಂಬ ನಿಯಮ ಸಡಿಲಿಸಿ ಮಹಾನಗರ ಪಾಲಿಕೆ, ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳಿಗೆ ಈ ಹೊಣೆಗಾರಿಕೆ ನೀಡಲು ತೀರ್ಮಾನಿಸಲಾಗಿದೆ.
ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಕಾರ್ಡ್ ವಿತರಿಸುವ ವ್ಯವಸ್ಥೆ ಡಿಸೆಂಬರ್ ನಿಂದ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
