ಜೈ ಭುವನೇಶ್ವರಿ
ಕಾರವಾರದಿಂದ ಕೋಲಾರದವರೆಗೆ ಹಾಗು ಮಂಗಳೂರಿನಿಂದ ಬೆಂಗಳೂರಿನವರೆಗೆ ಹಬ್ಬಿರುವ ಸುಂದರ ಕನ್ನಡ ನಾಡಿನಲ್ಲಿ ಇರುವ ಶ್ರೀಮಂತಿಕೆ ಅಪಾರ. ಈ ನಾಡು ಪ್ರಕೃತಿ ಶ್ರೀಮಂತಿಕೆಯಲ್ಲಿ ಮುಂಚೂಣಿ. ಈ ನೆಲವನ್ನಾಳಿದ ಬಹಳಷ್ಟು ಸಾಮ್ರಾಜ್ಯಗಳು ಇದರ ಉನ್ನತಿಗೆ ಕಾರಣವಾಗಿವೆ. ಹೊಯ್ಸಳ, ವಿಜಯನಗರ, ರಾಷ್ಟ್ರಕೂಟ, ಚಾಲುಕ್ಯ, ಪಲ್ಲವ, ಕದಂಬ ಇವು ಉದಾಹರಣೆಗಳು. ಇತಿಹಾಸದ ಪ್ರಕಾರ 4ನೇ ಶತಮಾನದ ಮುನ್ನ ಕರ್ನಾಟಕದಲ್ಲಿದ್ದ ಸಾಮ್ರಾಜ್ಯಗಳಾವುವೂ ಕನ್ನಡ ನಾಡಿನಲ್ಲಿ ಜನ್ಮತಳೆದುದವಲ್ಲ. ಕನ್ನಡದ ಮಕ್ಕಳಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ಸಾಮ್ರಾಜ್ಯ ಕದಂಬರು.
ಕದಂಬರು ಮೊದಲ ಬಾರಿಗೆ ಅಧಿಕೃತವಾಗಿ ಕನ್ನಡವನ್ನು ತಮ್ಮ ಆಡಳಿತ ಭಾಷೆಯನ್ನಾಗಿ ಬಳಸಿದರು. ತಮ್ಮ ಕಾರ್ಯಕಲಾಪಗಳು ಸುಸೂತ್ರವಾಗಿ ಸಾಗಲು ಶಕ್ತಿ ದೇವತೆಯ ಆರಾಧನೆ ಮಾಡುತಿದ್ದರು. ಅವರು ಪೂಜಿಸಿದ ಆ ಮಾತೆ ಕನ್ನಡಾಂಬೆ ಶ್ರೀ ಭುವನೇಶ್ವರಿ. ಕದಂಬರ ನಂತರ ವಿಜಯನಗರದ ಅರಸರು ಭುವನೇಶ್ವರಿ ಆರಾಧನೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸತೊಡಗಿದರು. ತಮ್ಮ ರಾಜಧಾನಿಯಾದ ಹಂಪೆಯಲ್ಲಿ ಭುವನೇಶ್ವರಿಯ ದೇವಾಲಯವ ಕಟ್ಟಿಸಿದರು. ಇಂದಿಗೂ ಹಂಪೆಯಲ್ಲಿರುವ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ತಾಯಿಯ ದೇವಸ್ಥಾನ ಕಾಣಸಿಗುತ್ತದೆ.
ನೀವು ಬಲ್ಲಂತಹ ಮೈಸೂರು ದಸರಾ ಆಚರಣೆಯ ಹುಟ್ಟು ವಿಜಯನಗರ ಸಾಮ್ರಾಜ್ಯದಲ್ಲಿ ಅಡಗಿದೆ. ವಿಜಯನಗರದ ಕಾಲದಲ್ಲಿ ನವರಾತ್ರಿಯಲ್ಲಿ ನಡೆಯುತ್ತಿದ್ದ ಪೂಜಾವಿಧಿಯಲ್ಲಿ ಭುವನೇಶ್ವರಿ ಅಂಬಾರಿಯು ಮುಖ್ಯವಾಗಿತ್ತು. ಬಹುಮನಿ ಸುಲ್ತಾನರ ಆಕ್ರಮಣದಿಂದ ವಿಜಯನಗರ ಸಾಮ್ರಾಜ್ಯ ಛಿದ್ರವಾದ ನಂತರ ಈ ಆಚರಣೆ ಸ್ಥಗಿತಗೊಂಡಿತ್ತು. ನಂತರ ಮೈಸೂರು ಅರಸರು ಈ ಆಚರಣೆಯನ್ನು ಪುನರಾರಂಭಿಸಿದರು.
ಕನ್ನಡಾಂಬೆ ಭುವನೇಶ್ವರಿಯ ದೇವಾಲಯ ಹಂಪೆಯಲ್ಲಿ ಇರುವುದು ಮಾತ್ರ. ಇದು ಎಷ್ಟೋ ಕನ್ನಡಿಗರಿಗೆ ತಿಳಿದಿರುವ ಮಾತು. ಆದರೆ ಕದಂಬರು ಪೂರ್ವಾಗ್ರಹಿಸಿದ ಭುವನೇಶ್ವರಿ ದೇವಸ್ಥಾನವನ್ನು ಬಿಳಗಿ ಸಾಮ್ರಾಜ್ಯದ ಕೊನೆಯ ದೊರೆ ಬಸವೇಂದ್ರ ಇಂದಿನ ಉತ್ತರಕನ್ನಡದಲ್ಲಿ ಇರುವ ಭುವನಗಿರಿಯಲ್ಲಿ ಕಟ್ಟಿಸಿದ. ಹಂಪೆಯ ವಿರೂಪಾಕ್ಷ ದೇವಸ್ಥಾನದಲ್ಲಿ ಕನ್ನಡಾಂಬೆಯ ಗುಡಿ ಇದ್ದರೂ, ಭುವನೇಶ್ವರಿಗೆಂದೇ ಕಟ್ಟಿಸಲಾದ ದೇವಸ್ಥಾನ ಕರ್ನಾಟಕದಲ್ಲಿ ಇರುವುದೊಂದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
