ಪ್ರತಿ ಮನೆಯಂಗಳದಲ್ಲಿಯೂ ಸಾಮಾನ್ಯವಾಗಿ ಕಾಣಸಿಗುವ ತುಳಸಿ ಪವಿತ್ರತೆಯ ಸಂಕೇತ.ಸಂಸ್ಕೃತದಲ್ಲಿ ತುಳಸಿ,ಸುರಸಾ, ಗ್ರಾಮ್ಯ,ಸುಲಭಾ,ಗೌರಿ,ಪಾವನಿ,ವಿಷ್ಣುಪ್ರಿಯೆ, ದಿವ್ಯ ಮುಂತಾದ ಅನೇಕ ಪರ್ಯಾಯ ಪದಗಳಿಂದ ಕರೆಯಲ್ಪಡುವ ತುಳಸಿ ಸರ್ವ ರೋಗ ನಿವಾರಕ ಎಂಬ ಬಿರುದನ್ನು ಪಡೆದುಕೊಂಡಿದೆ. ತುಳಸಿಯು ರುಚಿಯಲ್ಲಿ ಕಹಿಯಾಗಿದ್ದು ಅಗ್ನಿ ಪ್ರದೀಪಕ.ಹೃದಯಕ್ಕೆ ಹಿತಕರ, ಉಷ್ಣ,ಪಿತ್ತವನ್ನು ಹೆಚ್ಚಿಸುವಂತಹದಾಗಿದೆ.
ತುಳಸಿಯಲ್ಲಿ ಶ್ರೀತುಳಸಿ ಮತ್ತು ಕೃಷ್ಣ ತುಳಸಿ ಎಂಬ ಎರಡು ವಿಧಗಳಿವೆ.ಈ ಎರಡು ವಿಧಗಳು ಔಷಧಿಯಲ್ಲಿ ಸಮಾನಗುಣ ಹೊಂದಿದೆ.
ಔಷಧೀಯ ಗುಣಗಳು:
೧) ಕೆಮ್ಮು ಮತ್ತು ನೆಗಡಿ ಇರುವಾಗ ಎರಡು ಚಮಚೆ ತುಳಸಿ ಎಳೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿ.
೨) ಗಂಟಲು ನೋವು ಮತ್ತು ಸ್ವರ ಕಟ್ಟಿದ್ದಲ್ಲಿ ತುಳಸಿಯ ಎಲೆಗಳನ್ನು ಹಾಕಿ ಕುದಿಸಿದ ನೀರಿನಿಂದ ಬಾಯಿ ಮುಕ್ಕಳಿಸಬೇಕು ಮತ್ತು ಈ ನೀರನ್ನು ಬಿಸಿಯಾಗಿರುವಾಗಲೇ ಕುಡಿಯಬೇಕು. ತುಳಸಿ ಬೀಜಗಳನ್ನು ನೀರಿನಲ್ಲಿ ನೆನೆಯಿತ್ತು ಈ ನೀರನ್ನು ಸ್ವಲ್ಪ ಸಮಯದ ನಂತರ ಶೋಧಿಸಿ ಕುಡಿಯಬೇಕು.
೩) ಪಿತ್ತದ ಗಂಧೆ, ಅಲರ್ಜಿ, ಹುಳು ಕಚ್ಚಿದಾಗ ಮೈಮೇಲೆ ಗಂಧೆಗಳೆದ್ದಿರುವಾಗ ತಾಜಾ ತುಳಸಿಯ ಎಲೆಗಳನ್ನು ಜಜ್ಜಿ ಲೇಪಿಸಬೇಕು.
೪) ತುಳಸಿ ಎಲೆ ರಸವನ್ನು ಜೇನಿನೊಂದಿಗೆ ಬೆರೆಸಿ ಇಲ್ಲವೇ ಕಷಾಯ ಮಾಡಿ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಕುಡಿದ್ದಲ್ಲಿ ಜ್ವರ ಕಡಿಮೆಯಾಗುತ್ತದೆ.
೫) ಉರಿಮೂತ್ರದ ತೊಂದರೆಯಿರುವಾಗ ತುಳಸಿ ಎಳೆಯ ರಸವನ್ನು ಹಾಲು ಸಕ್ಕರೆಯೊಂದಿಗೆ ಬೆರೆಸಿ ಕುಡಿಯಬೇಕು.
೬) ಇಸುಬು, ಗಜಕರ್ಣ ಮುಂತಾದವುಗಳಲ್ಲಿ ನವೆ ಹೆಚ್ಚಾಗಿದ್ದಲ್ಲಿ ತುಳಸಿಯ ಎಲೆಗಳನ್ನು ಎಪ್ಸಮ್ ಸಾಲ್ಟ್ನಲ್ಲಿ ಅರೆದು ಲೇಪಿಸಬೇಕು ಮತ್ತು ತುಳಸಿ ಕಷಾಯ ಕುಡಿಯಬೇಕು.
೭) ಹದಿಹರೆಯದವರನ್ನು ಕಾಡುವ ಮೊಡವೆಗಳಿಗೆ ತುಳಸಿ ಎಲೆಗಳನ್ನು ನೀರಿನಲ್ಲಿ ಅರೆದು ಲೇಪಿಸಬೇಕು.
೮) ಚಿಕ್ಕಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಲ್ಲಿ ಒಂದು ಚಮಚೆ ತುಳಸಿ ರಸದೊಂದಿಗೆ ೧/೪ ರಿಂದ ೧/೨ ಚಮಚ ಶುಂಠಿ ರಸ ಬೆರೆಸಿ ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿಸಬೇಕು.
೯) ಮಕ್ಕಳಲ್ಲಿ ಕಫದ ಸಮಸ್ಯೆ ಕಂಡು ಬಂದಲ್ಲಿ ತುಳಸಿ ಎಲೆಯನ್ನು ಜೇನುತುಪ್ಪದಲ್ಲಿ ಅಡ್ಡಿ ಪ್ರತಿ ಎರಡು-ಮೂರು ಗಂಟೆಗಳಿಗೊಮ್ಮೆ ತಿನ್ನಿಸುತ್ತಿದ್ದರೆ ಕಫ ಕರಗಿ ಹೊರ ಬರುತ್ತದೆ.
೧೦) ಪ್ರತಿದಿನ ತುಳಸಿಯ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.
೧೧) ತುಳಸಿಯ ಎಲೆಗಳಿಂದ ತಯಾರಿಸಿದ ಸುಗಂಧ ತೈಲವು ಬ್ಯಾಕ್ಟೀರಿಯಾ ನಿರೋಧಕ ಗುಣ ಹೊಂದಿದೆ. ಆದ್ದರಿಂದ ಇದನ್ನು ನೆಗಡಿ, ಕೆಮ್ಮು, ಚರ್ಮರೋಗ ಮುಂತಾದವುಗಳಿಗೆ ಔಷದಿ ರೂಪದಲ್ಲಿ ಅರೋಮಾ ಥೆರಪಿಯಲ್ಲಿ ಬಳಸಲಾಗುತ್ತದೆ.
೧೨) ಜೀರ್ಣ ಶಕ್ತಿ ಹೆಚ್ಚಿಸುವುದಕ್ಕೆ ತುಳಸಿ ಎಳೆಯ ರಸವನ್ನು ಚಿಟಿಕೆ ಕಾಲು ಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಕುಡಿಯಬೇಕು.
ವಿ.ಸೂ : ನೆನಪಿಡಿ ಇಲ್ಲಿ ಕೊಟ್ಟಿರುವ ಮಾಹಿತಿಯು ಸಾಮಾನ್ಯ ಕಾಯಿಲೆಗಳಿಗೆ ಮಾತ್ರ.. ಪದೇ ಪದೇ ಈ ಮೇಲಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
