ಶ್ರಮದ ಫಲ.
ಒಂದು ಊರಿನಲ್ಲಿ ಒಬ್ಬ ಜಮೀನುದಾರನಿದ್ದ.ಅವನಿಗೆ ವಾರ್ಷಿಕ 2 ಕೋಟಿಗಳಷ್ಟು ಉತ್ಪತ್ತಿ ಮಾಡುವ ಭೂಮಿ ಅವನಿಗೆ ಇತ್ತು.ಬೇಸಾಯದ ಕೆಲಸಗಳನ್ನೆಲ್ಲಾ ಆಳುಗಳೇ ಮಾಡುತ್ತಿದ್ದರು. ಸ್ವತಃ ದುಡಿಯುವ ಅಭ್ಯಾಸ ಅವನಿಗೆ ಯಾವತ್ತೂ ಕೂಡ ಇರಲಿಲ್ಲ.
‘ಆಳು ಮಾಡಿದ್ದು ಹಾಳು’ ಅನ್ನುತ್ತಾರಲ್ಲ ? ಹಾಗೆಯೇ ಆಯಿತು. ಜಮೀನುದಾರನ ಬೇಸಾಯ ಸರಿಯಾಗಿ ನಡೆಯುತ್ತಿರಲಿಲ್ಲ. ಒಳ್ಳೆಯ ಫಸಲು ಅವನಿಗೆ ಬರಲಿಲ್ಲ.ವೆಚ್ಚವು ಹೆಚ್ಚುತ್ತಾ ಹೋಯಿತು.ಆದಾಯ ಕಡಿಮೆಯಾಯಿತು,ಜಮೀನುದಾರ ಸಾಲದಲ್ಲಿ ಬಿದ್ದ ಕೊನೆಗೆ ಜಮೀನಿನ ಅರ್ಧ ಭಾಗವನ್ನು ಮಾರಿ,ಸಾಲ ಸಂದಾಯ ಮಾಡಿದ.
ಇನ್ನೂ ಅರ್ಧ ಭಾಗ ಉಳಿದಿದೆಯಲ್ಲ ? ಅದರ ಬೇಸಾಯ ನಡೆಯಬೇಕು ಅಷ್ಟೇ ? ಜಮೀನುದಾರ ಅದರ ಬಗ್ಗೆ ಯೋಚಿಸಿದ , ಕಟ್ಟ ಕಡೆಗೆ ಅದನ್ನು 20 ವರ್ಷಗಳ ಅವಧಿಗೆಂದು ಗೇಣಿಗೆ ಕೊಟ್ಟನು.
ಕೆಲವು ಕಾಲ ಕಳೆಯಿತು ಒಂದು ದಿನ ಗೇಣಿದಾರ ಭೂಮಾಲೀಕನ ಮನೆಗೆ ಬಂದ. ಆವರೆಗಿನ ಗೇಣಿಯನ್ನೆಲ್ಲಾ ಸಂದಾಯ ಮಾಡಿದ .ಹೀಗೆ ಮಾತಾನಾಡುವಾಗ ಮದ್ಯೆ ಆ ಹೊಲಗಳನ್ನು ಮಾರಾಟ ಮಾಡುತ್ತೀರೆ ? ಎಂದು ವಿಚಾರಿಸಿದಾಗ, ಭೂಮಾಲೀಕನಿಗೆ ಆಶ್ಚರ್ಯವಾಯಿತು! ಆ ಬಡ ರೈತನಲ್ಲಿ ಅಷ್ಟು ಹಣ ಹೇಗೆ ಬಂತು ಎಂದು ತಿಳಿಯದಾಯಿತು.
“ನನ್ನ ಎಲ್ಲಾ ಹೊಲಗಳ ಸಾಗುವಳಿ ನಡೆಸಿದರೂ ನನಗೆ ಲಾಭ ಸಿಗಲಿಲ್ಲ.ನನಲ್ಲಿ ಸ್ವಲ್ಪವೂ ಕೂಡ ಹಣ ಉಳಿಯಲಿಲ್ಲ. ನಿನಗಿದ್ದ ಭೂಮಿಯ ಅರ್ಧಭಾಗದಷ್ಟು ಹೊಲಗಳಲ್ಲಿ ಮಾತ್ರ ನೀನು ಬೇಸಾಯ ಮಾಡಿದೆ.ಆದರೂ ನೀನಿಂದು ಗೇಣಿ ಸಂದಾಯ ಮಾಡಿದ್ದೀಯ, ಈಗ ಹೊಲಗಳನ್ನು ಕೊಳ್ಳಲಿಕ್ಕೆ ಸಿದ್ಧನಿದ್ದೀಯಾ, ನಿನ್ನಲ್ಲಿ,ಇಷ್ಟು ಹಣ ಹೇಗೆ ಬಂತು ಹೇಳು ?” ಎಂದು ಅವನು ರೈತನನ್ನು ಪ್ರಶ್ನಿಸಿದನು.
ಜಮೀನುದಾರನ ಮಾತುಕೇಳಿ ರೈತನಿಗೆ ನಗು ಬಂತು.ನಗುತ್ತಲೇ ಅವನು ಉತ್ತರ ಕೊಟ್ಟ “ ನೀವು ಸ್ವತಃ ಶ್ರಮಪಟ್ಟು ಯಾವತ್ತೂ ದುಡಿಯಲಿಲ್ಲ, ಕೆಲಸದಲ್ಲಿ ಸೋಮಾರಿತನ ತೋರಿಸಿದಿರಿ , ತಾವೇ ಹೋಗಿ ಮಾಡಬೇಕಾದ ಕೆಲಸಕ್ಕೆ ಬೆರೆಯವರನ್ನೇ ಕಳಿಸಿದಿರಿ.ಆದ ಕಾರಣ ನಿಮ್ಮ ಬಳಿಗೆ ಬರಬೇಕಾಗಿದ್ದ ಸಂಪತ್ತು.ನಿಮ್ಮಿಂದ ದೂರ ಹೋಯಿತು.ನಾನು ನಿಮ್ಮ ಹಾಗೆ ಮಾಡಲಿಲ್ಲ. ಕೆಲಸಕ್ಕೆ ನಾನೇ ಬಂದೆ ಬೆವರು ಸುರಿಸಿ ನಾನೇ ದುಡಿದೆ .ಅದರಿಂದಾಗಿ ಒಳ್ಳೆಯ ಫಸಲು ನನಗೆ ಬಂದಿತು. ಸಂಪತ್ತು ಕೈಸೇರಿತು. ನಿಮ್ಮ ಕೆಲಸ ಮಾಡಲು ಆಳನ್ನೇ ‘ಹೋಗು’ ಅಂದಾಗ ಸಂಪತ್ತನ್ನೇ ‘ಹೋಗು’ ಅಂದಂತಾಯಿತು.ಕೆಲಸಕ್ಕೆ ನಾನೇ ಬಂದು ಶ್ರಮ ಪಟ್ಟಾಗ ಸಂಪತ್ತನ್ನೇ ‘ಬಾ’ ಎಂದು ಕರೆದಂತಾಯಿತು.”
ರೈತನ ಮಾತು ಕೇಳಿದಾಗ ಜಮೀನುದಾರನಿಗೆ ತನ್ನ ತಪ್ಪಿನ ಅರಿವಾಯಿತು.ಇನ್ನೆಂದಿಗೂ ಅಂತಹ ತಪ್ಪು ಮಾಡಬಾರದೆಂಬ ಮನಸ್ಸಿನಲ್ಲಿ ನಿರ್ಧಾರ ಮಾಡಿದ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
