fbpx
ಸಣ್ಣ ಕಥೆ

ಐಶ್ವರ್ಯ ಬಂತು ಅಂತ ಅರ್ಧ ರಾತ್ರೀಲಿ ಕೊಡೆ ಹಿಡಿಬಾರ್ದು , ಹಿಂದೆ ಬಂದಿದ್ ದಾರಿ ಮರಿಬಾರ್ದು..

ಅಧಿಕಾರದ ಮದದಲ್ಲಿ ತೇಲಬಾರದು.

ಆ ಊರಿನ ಹೆಸರು ರಾಂಪುರ.ವನವಾಸದ ಸಂದರ್ಭದಲ್ಲಿ ಶ್ರೀ ರಾಮಚಂದ್ರ, ಸೀತೆ,ಲಕ್ಷ್ಮಣರು ಇಲ್ಲಿ ಒಂದು ದಿನ ತಂಗಿದ್ದರೆಂದು, ಅದೇ ಕಾರಣಕ್ಕೆ ಈ ಊರಿಗೆ ರಾಂಪುರ ಎಂಬ ಹೆಸರು ಬಂತೆಂದೂ, ಕಾಲ ಕ್ರಮೇಣ ಜನರು ಆಡು ಭಾಷೆಯಲ್ಲಿ ಅದು ರಾಂಪುರ ಎಂದಾಯಿತು ಎಂದು ಜನ ಈಗಲೂ ಮಾತನಾಡುತ್ತಾರೆ. ಊರ  ಮುಂದಿರುವ ಈಶ್ವರನ ದೇವಾಲಯ ತೋರಿಸಿ, ಇಲ್ಲಿ ಶ್ರೀರಾಮಚಂದ್ರನು ಶಿವನನ್ನು ಪುಜಿಸಿದನಂತೆ ಎಂದು ಇನ್ನೊಂದು ಕಥೆಯನ್ನು ಹೇಳುತ್ತಾರೆ.

ಈಗ ಹೇಳಲಿರುವ ಕಥೆ ಅದೆಷ್ಟೋ ವರ್ಷಗಳ ಹಿಂದೆ ನೆಡೆದಿದ್ದು.ಅಂದರೆ, ರಾಜರ ಅಡಳಿತವಿತ್ತಲ್ಲ ? ಆಗ ನೆಡೆದದ್ದು..ರಾಂಪುರದಲ್ಲಿ ಆಗ ಒಬ್ಬ ಬಿಕ್ಷುಕನಿದ್ದ ಅವನ ಹೆಸರು ಸುಬ್ಬ , ಒಂದು ಮಾಸಲು ಅಂಗಿ, ಅಲ್ಯೂಮಿನಿಯಂ ತಟ್ಟೆ, ಹಾಗೂ ಮಾರುದ್ಧದ ಒಂದು ಕೋಲು,ಇವಿಷ್ಟು ಸುಬ್ಬನ ಆಸ್ತಿ.

ಬೆಳಗಿನ ಹೊತ್ತು ಈಶ್ವರನ ದೇವಾಲಯದ ಮುಂದಿನ  ಅರಳಿಕಟ್ಟೆಯಲ್ಲಿ ಆತ ಕೂತಿರುತ್ತಿದ್ದ. ದೇವಸ್ಥಾನಕ್ಕೆಂದು ಬಂದವರು ಏನಾದರೂ ಕೊಟ್ಟರೆ ಅದನ್ನು ಪಡೆದುಕೊಳ್ಳುತ್ತಿದ್ದ.ಬೆಳ್ಳಗ್ಗೆ-ಮದ್ಯಾಹ್ನ-ಸಂಜೆ ಏನು ಸಿಗುತ್ತಿತ್ತೋ ಅದನ್ನೇ ಖುಷಿಯಿಂದ ತಿನ್ನುತ್ತಿದ್ದ . ಬಹುಷಃ ಅವನಿಗೆ ಅಸೆ ಇರಲಿಲ್ಲ.ನಾಳೆಗೆ ಕೂಡಿಡುವ ಬುದ್ದಿಯೂ ಇರಲಿಲ್ಲ.ಹಾಗಾಗಿ ಅವನು ಮನೆ ಮನೆಯಲ್ಲಿ ಭಿಕ್ಷೆ ಕೇಳಲು ಹೋಗುತ್ತಿರಲಿಲ್ಲ. ಸಂಜೆಯಾಗುತ್ತಿದ್ದಂತೆ, ಊರಿನ ಯಾರಾದರೂ ಮನೆಯ  ಜಗುಲಿಯಲ್ಲಿ ಮಲಗಿಬಿಡುತ್ತಿದ್ದ. ಬೆಳ್ಳಗ್ಗೆ ಅದದ್ದೇ ತಡ, ಊರ ಸಮೀಪವಿದ್ದ ಕೆರೆಯ ಬಳಿ ಹೋಗಿ, ನಿತ್ಯ ಕರ್ಮಗಳನ್ನು ಮುಗಿಸಿ ಸೀದಾ ಬಂದು ಅರಳಿಕಟ್ಟೆಯಲ್ಲಿ ಕೂತುಬಿಡುತ್ತಿದ್ದ. ಸುಬ್ಬನ್ನಿಂದ ಯಾವತ್ತೂ ಯಾರಿಗೂ ತೊಂದರೆಯಾಗಿರಲಿಲ್ಲ.ದಿನವೂ ಒಂದೊಂದು ಮನೆಯ ಜಗುಲಿಯಲ್ಲಿ ಮಲಗುತ್ತಿದ್ದನಲ್ಲ? ಆಗ ಕೂಡ ಮನೆಯವರಿಗೆ  ಯಾವುದೇ ರೀತಿಯ ಕಿರಿಕಿರಿಯಾಗದಂತೆ ಎಚ್ಚರವಹಿಸುತ್ತಿದ್ದ. ಅವನು ಹೋರಗಿದ್ದಾನೆ ಎಂದರೆ,ಮನೆಯ ರಕ್ಷಣೆಗೆ ಒಬ್ಬ ಸಮರ್ಥ ಕಾವಲುಗಾರ ಇದ್ದಂತೆ ಆಗುತ್ತಿತ್ತು. ಈ ಕಾರಣದಿಂದ ಊರಿನ ಯಾರು ಸುಬ್ಬನನ್ನು ಯಾಕಪ್ಪಾ ಇಲ್ಲಿ ಉಳ್ಕೊಂಡಿದ್ದಿಯಾ ಎಂದು ಕೇಳುತ್ತಿರಲಿಲ್ಲ.

ಹುಟ್ಟು ಸೋಮಾರಿಯಾಗಿದ್ದ, ಬಿಕ್ಷೆಯನ್ನೇ ಬದುಕಾಗಿಸಿ ಕೊಂಡಿದ್ದ.ಸುಬ್ಬನಿಗೆ ಒಂದು ವಿಶೇಷ ಗುಣವಿತ್ತು.ಜನರು ಏನಾದರೂ ಸಮಸ್ಯೆ ಹೇಳಿದರೆ.ಅವನು ಪರಿಹಾರ ಹೇಳುತ್ತಿದ್ದ.ಎಷ್ಟೇ ಕಷ್ಟದ ಸಮಸ್ಯೆ ಅಂದುಕೊಂಡರೂ ಅದನ್ನು ಸುಲಭವಾಗಿ ಬಿಡಿಸುತ್ತಿದ್ದ.ಹೀಗೆ ಪರಿಹಾರ ಹೇಳುತ್ತಿದ್ದನಲ್ಲ ? ಅದಕ್ಕೆ ನಯಾಪೈಸೆಯೂ ಗೌರವಧನವನ್ನು  ಪಡೆಯುತ್ತಿರಲಿಲ್ಲ.ಬದಲಾಗಿ ಇದು ನನ್ನ ಆತ್ಮ ಸಂತೋಷದ ಕೆಲಸ ಎಂದು ಬಿಡುತ್ತಿದ್ದ.ರಾಂಪುರದ ಕಡು ಬಡವನಿಂದ  ಹಿಡಿದು ಪಟೇಲರವರೆಗೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಸುಬ್ಬನ ಬಳಿಗೆ ಸಮಸ್ಯೆ ಹೊತ್ತುಕೊಂಡು ಬರುತ್ತಿದ್ದರು.ಆತ ಎಲ್ಲವನ್ನು ಕೇಳಿಸಿಕೊಂಡು ಐದಾರು ನಿಮಿಷದ ನಂತರ ಪರಿಹಾರ ಹೇಳುವುದನ್ನು ವಿಸ್ಮಯದಿಂದ ಕೇಳುತ್ತಿದ್ದರು.ನಂತರ, ಇಷ್ಟೊಂದು ಬುದ್ದಿವಂತನಾಗಿದ್ದರೂ ಈತ ಪಟ್ಟಣಕ್ಕೆ ಹೋಗಿ ಕೈತುಂಬಾ ಸಂಪಾದಿಸದೆ ಕುಗ್ರಾಮದಲ್ಲಿ ಭಿಕ್ಷೆ ಬೇಡುವುದಾದರೂ ಏಕೆ ಎಂದು ತಮಗೆ ತಾವೇ,ಕೇಳಿ ಕೊಳ್ಳುತ್ತಿದ್ದರು. ಉತ್ತರ ಹೊಳೆಯದೇ ಹೋದಾಗ ಸುಮ್ಮನಾಗುತ್ತಿದ್ದರು.

ಹೀಗಿರುವಾಗ ಒಂದು ದಿನ ಮಹಾರಾಜರ ಸವಾರಿ ರಾಂಪುರಕ್ಕೆ ಬಂತು.ಅಂದಮೇಲೆ ಕೇಳಬೇಕೆ ?ಈಶ್ವರ ದೇವಾಲಯವನ್ನು ಬಗೆಬಗೆಯಲ್ಲಿ ಅಲಂಕರಿಸಲಾಯಿತು .ಪಟೇಲರು ಸೇರಿದಂತೆ ಊರ ಹಿರಿಯರೆಲ್ಲ ಬೆಳಗಿನಿಂದಲೇ ಮಹಾರಾಜರ ದಾರಿ ಕಾಯುತ್ತಿದ್ದರು. ಕಡೆಗೊಮ್ಮೆ ಮಹಾರಾಜರ ಸವಾರಿ ಬಂದೇ ಬಿಟ್ಟಿತು.ಊರಿನ ಮುಖಂಡರಿಂದ ಮಹಾರಾಜರು ಆತಿಥ್ಯ ಸ್ವೀಕರಿಸಿದರು. ತುಸು ಹೊತ್ತು ವಿಶ್ರಾಂತಿ ಪಡೆದರು.ನಂತರ ಪ್ರಜೆಗಳು ಸುಖ-ದುಃಖ ಕೇಳಲು ಹೊರಟರು.ಅದೇ ಸಂದರ್ಭದಲ್ಲಿಯೇ ಅರಳಿಕಟ್ಟೆಯಲ್ಲಿ ಒಂದು ಮಾಸಲು ಅಂಗಿ,ಅಲ್ಯೂಮಿನಿಯಂ ತೆಟ್ಟೆ ಹಿಡಿದು ಕೂತಿದ್ದ ಸುಬ್ಬ ಮಹಾರಾಜರ ಕಣ್ಣಿಗೆ ಬಿದ್ದ.

ತಮ್ಮದು ರಾಮ ರಾಜ್ಯ, ಸುಭಿಕ್ಷಾ ಸಾಮ್ರಾಜ್ಯ ಎಂಬುದು ಮಹಾರಾಜರ ನಂಬಿಕೆಯಾಗಿತ್ತು.ಇಂತಹ ಸಂದರ್ಭದಲ್ಲಿ ಭಿಕ್ಷುಕನೊಬ್ಬ ಕಣ್ಣಿಗೆ ಬಿದ್ದುದ್ದರಿಂದ ಅವರಿಗೆ ತುಂಬಾ ಬೇಜಾರಾಯಿತು. ಛೆ, ನಮ್ಮ ರಾಜ್ಯದಲ್ಲಿ ಈಗಲೂ ಭಿಕ್ಷುಕರು ಇದ್ದಾರಲ್ಲ,ಎಂದು ನೊಂದುಕೊಂಡರು.ನಂತರ ಪಟೇಲರನ್ನು ಕರೆದು ಯಾರೀತ ? ನೋಡೋಕೆ ಗಟ್ಟಿ ಮುಟ್ಟಾಗಿಯೇ ಇದ್ದಾನೆ.ಇವನಿಗೆ ದುಡಿದು ತಿನ್ನಲು ಏನು ದಾಡಿ ಎಂದು ಪ್ರಶ್ನೆ ಮಾಡಿದರು . ಮಹಾಪ್ರಭುಗಳೇ, ಎಂಥ ಸಮಸ್ಯೆಗೂ ಪರಿಹಾರ ಹೇಳಬಲ್ಲ ಶಕ್ತಿ, ಈ ಬಿಕ್ಷುಕನಿಗಿದೆ. ಅಂದಹಾಗೆ,ಇವನು ಹೆಸರು ಸುಬ್ಬ. ಇವನನ್ನು ನಮ್ಮ ಊರಿನ ಆಸ್ತಿ ಎಂದು ಕರೆದರೂ ತಪ್ಪಿಲ್ಲಾ ಸ್ವಾಮಿ……!

ಪಟೇಲರಿಂದ ಈ ಬಗೆಯ ಉತ್ತರ ಕೇಳಿ ಮಹಾರಾಜರಿಗೆ ಆಶ್ಚರ್ಯವಾಯಿತು. ಇಂದೆಯೇ ಈ ಬಿಕ್ಷುಕನ ಇನ್ನೊಂದು ಮುಖವನ್ನು ನೋಡಿಬಿಡುವ ಆಸೆ ಬಲಿಯಿತು.ಅದೇ ಸಂದರ್ಭಕ್ಕೆ ತುಂಬಾ ದಿನಗಳಿಂದಲೂ ಪರಿಹಾರವಾಗದೇ ತಲೆ ತ್ತಿನ್ನುತ್ತಿದ್ದ, ಆಡಳಿತಕ್ಕೆ ಸಂಬಂಧಿಸಿದ ಸಮಸ್ಯೆಯೊಂದು ನೆನಪಾಯಿತು.ತಕ್ಷಣವೇ ಬಿಕ್ಷುಕನ ಬಳಿ ಹೋದ ಮಹಾರಾಜರು- ನೋಡಯ್ಯ,ನನ್ನದೊಂದು ಸಮಸ್ಯೆ ಇದೆ.ಅದಕ್ಕೆ ಪರಿಹಾರ ಸೂಚಿಸಿದರೆ ನಿನಗೆ ಬಹುಮಾನವಾಗಿ  ಒಂದು ಚಿನ್ನದ ನಾಣ್ಯ ಕೊಡ್ತೇನೆ!ಎಂದರು.

ಈ ಸುಬ್ಬ ತಕ್ಷಣವೇ ಹೀಗೆಂದ,ಮಹಾಪ್ರಭುಗಳೇ, ನನಗೆ ಚಿನ್ನದ ನಾಣ್ಯ ಬೇಡ.ಅದನ್ನು ನೀವೇ ಇಟ್ಟುಕೊಳ್ಳಿ. ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ಏನೆಂದು ಹೇಳಿ…. ‘ಒಬ್ಬ ಯಕಶ್ಚಿತ್ ಬಿಕ್ಷುಕನಿಂದ ಈ ಬಗೆಯ ಉತ್ತರವನ್ನು ಮಹಾರಾಜರು ನೀರೀಕ್ಷಿಸಿರಲಿಲ್ಲ.ಅವರಿಗೆ ತುಂಬಾ ಬೇಸರವಾಯಿತು. ಆದರೆ ಏನೂ ಮಾಡುವಂತಿಲ್ಲ.ಇರಲಿ’ ಎಂದುಕೊಂಡು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.

ಭಿಕ್ಷುಕ ಸುಬ್ಬ ಐದಾರು ನಿಮಿಷ ತಲೆ ತಗ್ಗಿಸಿ,ಆ ಸಮಯದಲ್ಲಿ ತನ್ನಷ್ಟಕ್ಕೆ ತಾನೇ ಏನೇನೋ ಮಾತಾಡಿಕೊಂಡ.ಕೈ ಬೆರಳುಗಳನ್ನು ಬಿಡಿಸಿ,ಮಡಿಚಿ, ಅದೇನೇನೋ ಲೆಕ್ಕಾಚಾರ ಮಾಡಿದ,ನಂತರ ಬಂದು ಪರಿಹಾರ ಹೇಳಿಯೇ ಬಿಟ್ಟ.ಅದು ಮಹಾರಾಜರಿಗೆ ಸರಿ ಎನಿಸಿತು.ಅವರು ಸುಬ್ಬನನ್ನು ಪ್ರೀತಿ, ಅಭಿಮಾನ,ಮೆಚ್ಚುಗೆಯಿಂದ ನೋಡುತ್ತಾ ,ಒಂದು ಚಿನ್ನದ ನಾಣ್ಯವನ್ನು ಅವನ ಮುಂದಿಟ್ಟು:ಇದನ್ನು ನೀನು ಸ್ವೀಕರಿಸಲೇಬೇಕು.ಎಂದು ಹೇಳಿ ಅರಮನೆಗೆ ಬಂದರು.

ಮರುದಿನ ಮಹಾರಾಜರಿಗೆ ಆಡಳಿತದ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಸಮಸ್ಯೆ ತಲೆದೋರಿತು.ಮಂತ್ರಿ ಮಂಡಲದ ಪ್ರಮುಖರ ಮುಂದೆ ಈ ಸಮಸ್ಯೆ ಇಟ್ಟರು.ಅವರು ಸೂಚಿಸಿದ ಪರಿಹಾರಗಳು ಮಹಾರಾಜರಿಗೆ ಇಷ್ಟವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ಮತ್ತೆ  ರಾಂಪುರದ  ಭಿಕ್ಷುಕ ಸುಬ್ಬನ ನೆನಪಾಯಿತು. ಅವತ್ತೇ ಸಂಜೆ ಸಮಸ್ಯೆಯೊಂದಿಗೆ ರಾಜ,ಸುಬ್ಬನ ಮುಂದೆ ನಿಂತಿದ್ದ.ಸುಬ್ಬ ಈ ಬಾರಿಯೂ ಮಹಾರಾಜರಿಗೆ ತುಂಬಾ ಇಷ್ಟವಾಗುವಂತಹ ರೀತಿಯಲ್ಲಿಯೇ ಸಮಸ್ಯೆಗೆ ಪರಿಹಾರ  ಸೂಚಿಸಿದ. ಅದನ್ನು ಕೇಳಿದ ನಂತರವಂತೂ ಸುಬ್ಬನ ಪ್ರಚಂಡ ಬುದ್ದಿ  ಶಕ್ತಿಯ ಕುರಿತು ಮಹಾರಾಜರಿಗೆ ಅನುಮಾನವೇ ಉಳಿಯಲಿಲ್ಲ.  ಅವರು ಎರಡೇ ಕ್ಷಣದಲ್ಲಿ ಒಂದು ನಿರ್ದಾರಕ್ಕೆ ಬಂದರು.ಸುಬ್ಬನನ್ನು ಉದ್ದೇಶಿಸಿ ಒಂದು ನಿರ್ದಾರಕ್ಕೆ ಬಂದರು : ಸುಬ್ಬು ಅವರೇ,ನೀವು ಒಂದೊಂದು ಸಮಸ್ಯೆಗೂ ಪರಿಹಾರ ಸೂಚಿಸುವ ರೀತಿ ಸೊಗಸಾಗಿದೆ. ಒಬ್ಬ ಮಹಾಮಂತ್ರಿಗೆ ಇರಬೇಕಾದ ಬುದ್ಧಿಶಕ್ತಿ ನಿಮಗಿದೆ.ಅದು ಸದುಪಯೋಗವಾಗಬೇಕು . ಹಾಗಾಗಿ ನೀವು ದಯವಿಟ್ಟು ಅರಮನೆಗೆ ಬನ್ನಿ.ನನ್ನ ವಿಶೇಷ ಸಾಲಹೆಗಾರರೆಂದು ನೇಮಿಸಿಕೊಳ್ಳುತ್ತೇನೆ. ನಿಮಗೆ ಅರಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ.ನಿಮಗೆ ಎಷ್ಟು ದಿನ ಸಾದ್ಯವೋ  ಅಷ್ಟು ದಿನ ನಮಗೆ ಆಡಳಿತದಲ್ಲಿ ಮಾರ್ಗದರ್ಶನ ಮಾಡಿ……

ಮಹಾರಾಜರು ಹೇಳಿದ ಮೇಲೆ ಕೇಳಬೇಕೆ ?ಅವತ್ತೇ ಅಲ್ಲಲ್ಲಿ ಹರಿದುಹೋಗಿದ್ದ, ಗಬ್ಬುನಾತ ಹೊಡೆಯುತ್ತಿದ್ದ,ಅಂಗಿ, ಅಲ್ಯೂಮಿನಿಯಂ ತೆಟ್ಟೆ ಹಾಗೂ ಹಳೆಯ ಊರುಗೋಲುನೊಂದಿಗೆ ಸುಬ್ಬ ಅರಮನೆಗೆ ಬಂದ. ಮರುದಿನದಿಂದಲೇ ಅವನ ವೇಷಭೂಷಣ ಬದಲಾಯಿತು.ಮೊದಲಿಗೆ ಸುಬ್ಬನ ಹೆಸರು ಸುಬ್ರಾಯ ಶರ್ಮ ಎಂದಾಯಿತು.ಕೆಲವರು ಅವನನ್ನು ಜೋಯ್ಸರೇ ಎನ್ನಲು ಶುರು ಮಾಡಿದರು.

ಮಹಾರಾಜರಂತೂ ತುಂಬಾ ಪ್ರೀತಿಯಿಂದ ಮಂತ್ರಿಗಳೇ…. ಎಂದು ಕರೆಯುತ್ತಿದ್ದರು. ಮಹಾರಾಜರ ನಿವಾಸದ ಪಕ್ಕದಲ್ಲಿಯೇ ಇನ್ನೊಂದು ಸೌಧದಲ್ಲಿ ಸುಬ್ಬನ ವಾಸಕ್ಕೆ ವ್ಯವಸ್ಥೆ ಮಾಡಲಾಯಿತು.ಒಂದು ಕಾಲದಲ್ಲಿ ವಾರವಿಡೀ ಸ್ನಾನ ಮಾಡದ್ದಿದ್ದ ಸುಬ್ಬ ಈಗ ಪ್ರತಿದಿನವೂ ಸುಗಂಧ ದ್ರವ್ಯ ಹಾಕಿದ ನೀರಲ್ಲೇ ಕೈ ತೊಳೆಯುವುದನ್ನು,ದಿನದಿನವೂ ಮಡಿ, ವಸ್ತ್ರ ಧರಿಸುವುದನ್ನು, ಅರಮನೆಯ ಶಿಸ್ತು ಶಿಷ್ಟಾಚಾರದೊಂದಿಗೆ ಬದುಕುವುದನ್ನು ರೂಢಿ ಮಾಡಿಕೊಂಡ.ಈ ಹಿಂದೆಲ್ಲಾ ರಾಂಪುರದ ಅರಳಿಕಟ್ಟೆಯಲ್ಲಿ ಕೂತು ಅವರಿವರ ಸಂಕಟಗಳಿಗೆ ಪರಿಹಾರ ಹೇಳುತ್ತಿದ್ದವನು. ಈಗ ರಾಜನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಹೇಳುವಂಥನಾದ. ಮಹಾರಾಜರು ಈ ಸುಬ್ರಾಯರನ್ನು ಎಷ್ಟು ಹಚ್ಚಿಕೊಂಡಿದ್ದರೆಂದರೆ,ಅರಮನೆಯ ಹಾಗೂ ರಾಜ್ಯದ ಎಲ್ಲಾ ರಹಸ್ಯಗಳನ್ನು ಅವನೊಂದಿಗೆ ಹೇಳಿಕೊಂಡರು. ಮಹಾರಾಜರು ಮೊನ್ನೆಯಷ್ಟೇ   ಬಂದ ಸುಬ್ರಾಯ ಶರ್ಮರಿಗೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿದ್ದು,ಅರಮನೆಯಲ್ಲಿದ್ದ ಉಳಿದ ಮಂತ್ರಿಗಳನ್ನು ಕೆರಳಿಸಿತು . ಹಾಗೆಯೇ ಸುಬ್ರಾಯನ ಅತಿಯಾದ ಬುದ್ಧಿವಂತಿಕೆ ಕಂಡು.ಅವರಿಗೆ ಅನುಮಾನವೂ ಬಂತು.ಸಮಯ ನೋಡಿ ಮಹಾರಾಜರಿಂದ ಅವನನ್ನು ದೂರ ಮಾಡಲೇಬೇಕು ಎಂದು ಅವರೆಲ್ಲ ಲೆಕ್ಕ ಹಾಕಿಯೇ ಬಿಟ್ಟರು.ಸುಬ್ರಾಯನ ಒಂದೇ ಒಂದು ತಪ್ಪಿಗಾಗಿ ಹುಡುಕುತ್ತಿದ್ದವರಿಗೆ, ಕಡೆಗೂ ಅಂಥದ್ದೊಂದು ಸಂದರ್ಭ ಒದಗಿ ಬಂತು.ಈ ವೇಳೆಗೆ ಸುಬ್ರಾಯ ಅರಮನೆಗೆ ಬಂದು ಒಂದು ವರ್ಷವೇ ಕಳೆದಿತ್ತು.

ಅದೊಂದು ದಿನ ಮಂತ್ರಿ ಮಂಡಲದ ಎಲ್ಲರೂ ಸೇರಿ ಮಹಾರಾಜರ ಬಳಿ ಹೋದರು.ಪ್ರಭು ನಾವೆಲ್ಲ ನಿಮ್ಮೊಂದಿಗೆ ಒಂದು ಮಹತ್ವದ ವಿಷಯ ಕುರಿತು ಚರ್ಚಿಸಬೇಕಾಗಿದೆ.ಒಂದು ರಹಸ್ಯ ಸಭೆಯ ಏರ್ಪಾಡು ಮಾಡಿ,ಆದರೆ,ಒಂದು ವಿನಂತಿ,ಈ ಸಭೆಗೆ ಸುಬ್ರಾಯ ಶರ್ಮರನ್ನು ಕರೆಯ ಬಾರದು ಎಂದರು. ಈ ಮಂತ್ರಿಗಳೆಲ್ಲಾ ಅರಮನೆಯಲ್ಲಿ ದಶಕಗಳಿಂದ ಇದ್ದವರು. ಹಾಗಾಗಿ ಅವರನ್ನು ಸಂದೇಹದಿಂದ ನೋಡಲು ರಾಜನಿಗೆ ಮನಸ್ಸಾಗಲಿಲ್ಲ. ವಿಷಯ ಮಹತ್ವದ್ದೇ ಇರಬೇಕು.ಹೇಗಿದ್ದರೂ ದಿನವೂ ಸಂಜೆ ಸುಬ್ರಾಯ ಶರ್ಮರು ಅಂತಃ ಪುರದಲ್ಲಿ ನಡೆಯುವ ಚರ್ಚೆಗೆ ಬರುತ್ತಾನೆ.ಆಗ ಇದನ್ನೆಲ್ಲಾ ಹೇಳಿದರಾಯಿತು ಎಂದೇ ರಾಜ ಯೋಚಿಸಿದ.

ನಂತರ ಗುಪ್ತ ಸಭೆಗೆ ದಿನವನ್ನು ನಿಗದಿ ಪಡಿಸಲಾಯಿತು. ಮಹಾರಾಜರೆ ನಮ್ಮ ಮಾತನ್ನು ದಯಮಾಡಿ ನಂಬಿ. ನಾವು ಕಳೆದ 5 ತಿಂಗಳಿನಿಂದಲೂ ದಿನದಿನವೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ನಂತರವೇ ಈ ಮಾತು ಹೇಳುತ್ತಿದ್ದೇವೆ. ಏನೆಂದರೆ- ಸುಬ್ರಾಯ ಬೇರೆ ಯಾರು ಅಲ್ಲ.ಆತ ಶತ್ರು ದೇಶದ ಗುಡಾಚಾರಿ ಅವನಿಗೆ ಸಕಲೆಂಟು ವಿದ್ಯೆಗಳನ್ನು ಕಲಿಸಿದ ನಂತರವೇ ನಮ್ಮ ದೇಶಕ್ಕೆ ಕಳಿಸಲಾಗಿದೆ. ಇಲ್ಲವಾದರೆ ಒಬ್ಬ ಯಕಶ್ಚಿತ್ ಬಿಕ್ಷುಕನಿಗೆ ಇಂಥ ಅಪರೂಪದ ಬುದ್ದಿ ಬರಲು ಹೇಗೆ ಸಾಧ್ಯ ? ನಾವು ಕಣ್ಣಾರೆ ಕಂಡಿರುವ ಮಾತು ಕೇಳಿ;ಸುಬ್ರಾಯ ಪ್ರತಿದಿನವೂ ಸಂಜೆ ತನ್ನ ಮಹಲಿನ ಸಮೀಪವಿರುವ ಪುಟ್ಟದೊಂದು ಕೋಣೆಗೆ ಹೋಗುತ್ತಾನೆ. ಒಬ್ಬನೇ  ಹೋಗುತ್ತಾನೆ.ಹಾಗೆ ಹೋಗುವ ಮುನ್ನ ಸುತ್ತಮುತ್ತ ಯಾರು ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಾನೆ.ಹಾಗೆ ಕೋಣೆಯ ಒಳಗೆ ಹೋದವನು ಅರ್ಧ ಗಂಟೆಯ ನಂತರ ಹೊರಗೆ ಬರುತ್ತಾನೆ.ಹಾಗೆ ಹೊರ ಬಂದವನನ್ನು ಕೋಣೆಯಲ್ಲಿ ಇಷ್ಟು ಹೊತ್ತು ಏನು ಮಾಡುತ್ತಿದ್ದೇ ಎಂದು ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಾನೆ.ಬಹುಶಃ ಆವನು ತನ್ನವರಿಗೆ ಆ ಕೋಣೆಯಲ್ಲಿ ನಿಂತು ನಮ್ಮ ರಾಜ್ಯದ ರಹಸ್ಯವನ್ನೆಲ್ಲಾ ಹೇಳುತ್ತಾನೆ.ಅನಿಸುತ್ತೆ ಆ ಕೋಣೆಯಿಂದ ಹೊರಹೋಗಲು ಸುರಂಗ ಮಾರ್ಗವಿದ್ದರೂ ಇರಬಹುದು.ಯಾವುದಕ್ಕೂ ನೀವೇ ಪರಿಶೀಲಿಸಿ ಬೇಕಾದರೆ ಎಂದರು.

ಒಂದು ಅನುಮಾನದ ಅಡ್ಡಗೆರೆ ಎಂಥ ಮಧುರವಾದ ಭಾಂಧವ್ಯವನ್ನೂ ಅಳಿಸಿಹಾಕಬಲ್ಲದು.ಮಹಾರಾಜನ ವಿಷಯದಲ್ಲೂ ಹೀಗೆ ಆಯಿತು.ಮಂತ್ರಿ ಮಂಡಲದ ಸದಸ್ಯರೆಲ್ಲರ ಮಾತುಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕಿದ ರಾಜನಿಗೆ ಸುಬ್ರಾಯ ಶರ್ಮರನ್ನು ಒಬ್ಬ ಗುಡಾಚಾರಿ ಎಂದು ನಿಜವಾಗಿ ಹೋಯಿತು.ಅದುವರೆಗೆ ಅವನ ಬುದ್ಧಿವಂತಿಕೆಯ ವಿಷಯದಲ್ಲಿ ಇದ್ದ ಅಭಿಮಾನವೆಲ್ಲ ಕ್ಷಣ ಮಾತ್ರದಲ್ಲಿಯೇ ಅನುಮಾನವಾಗಿ ಬದಲಾಯಿತು. ಇರಲಿ ಎಲ್ಲವನ್ನೂ ಪ್ರತ್ಯಕ್ಷವಾಗಿ ನೋಡೋಣ. ಅನಂತರವೇ ಸುಬ್ರಾಯರನ್ನು ಶಿಕ್ಷಿಸೋಣ ಎಂದು ನಿರ್ಧರಿಸಿದ ರಾಜ.

ಅದೊಂದು ಸಂಜೆ ಸುಬ್ರಾಯ ಆ ಕೋಣೆಗೆ ಹೋದ ಹತ್ತು ನಿಮಿಷದ ನಂತರ ತಾನು ಹೋಗಲು ನಿರ್ಧರಿಸಿದ.ಕೋಣೆಯ ಸುತ್ತಲೂ ಮಾರುವೇಶದಲ್ಲಿ ಸೈನಿಕರನ್ನು ಬಿಟ್ಟು.ಒಳಗಿನಿಂದ ಯಾರೇ ಅಪರಿಚಿತರು ಬಂದರು ಹಿಂದೆ ಮುಂದೆ ನೋಡದೇ ಕತ್ತರಿಸಿ ಹಾಕಿ ಎಂದು ಸೈನಿಕರಿಗೆ ತನ್ನ ಆದೇಶ ನೀಡಿದ.

ಕಡೆಗೂ ಎಲ್ಲರೂ ಅಂದುಕೊಂಡಿದ್ದ  ಹಾಗೆ ಸಮಯ ಬಂತು.ಸುಬ್ರಾಯ ಶರ್ಮರು ಅವಸರದಲ್ಲಿ ಎಂಬಂತೆ ತನ್ನ ಮನೆಗೆ ಸಮೀಪದ ಕೋಣೆ ಹೊಕ್ಕ,ಸ್ವಲ್ಪ ದೂರದಲ್ಲಿ ಮಾರು ವೇಶದಲ್ಲಿದ್ದ ರಾಜ ಇದನ್ನು ಗಮನಿಸಿದ. ಸುಬ್ರಾಯ ಕಳ್ಳನಂತೆ ಸುತ್ತಮುತ್ತ ನೋಡಿ ಕೋಣೆ ಪ್ರವೇಶಿಸಿದನಲ್ಲ ?  ಅದನ್ನು ಕಂಡು ರಾಜನ ರಕ್ತ ಕುದಿಯಿತು. ಅವನ ದೇಶ ದ್ರೋಹ ಏನಿರಬಹುದು ಎಂದು ನೆನಪು ಮಾಡಿಕೊಂಡು ನಿಂತಲ್ಲೇ ಕಟಕಟನೇ ಹಲ್ಲು ಕಡಿದ.ನಂತರ ತನ್ನನ್ನು ತಾನೇ ನಿಗ್ರಹಿಸಿಕೊಂಡು ಸದ್ದಾಗದಂತೆ ಆ ಕೋಣೆಯ ಬಳಿ ಬಂದು.ದಬದಬನೇ ಬಾಗಿಲು ಬಡಿದ ಯಾರದು ? ಎಂದ ಸುಬ್ರಾಯನ ತಣ್ಣಗಿನ ದನಿಗೆ ನಾನು ಬಾಗಿಲು ತಗೆ ಎಂದ ರಾಜ.ಬಾಗಿಲು ತೆರೆಯಿತು.ರಾಜ ಕತ್ತಿ ಹಿಡಿದುಕೊಂಡೇ ಒಳಗೆ ಬಂದ.ಸುಬ್ರಾಯರನ್ನು ಬಿಟ್ಟು ಯಾವ ಕುನ್ನಿಯೇ ಕಂಡರು ಅದರ ತಲೆ ಹಾರಿಸಬೇಕು ಎಂಬುದು ರಾಜನ ಆಜ್ಞೆಯಾಗಿತ್ತು.ಆದರೆ,ಅಲ್ಲಿ ಯಾರೆಂದರೆ ಯಾರು ಇರಲಿಲ್ಲ.ಬದಲಿಗೆ ಸುಬ್ರಾಯನ ಹಳೆಯ ಸಂಗತಿಗಳಾದ ಹರಕು ಬಟ್ಟೆ,ಅಲ್ಯೂಮಿನಿಯಂ ತೆಟ್ಟೆ ಹಾಗೂ ಉರುಗೋಲಿತ್ತು, ಅವನನ್ನೇ ಬೆರಗಿನಿಂದ ನೋಡಿದ ರಾಜ. ನೀನು ದಿನಾಲೂ ಇಲ್ಲಿಗೆ ಬರ್ತೀಯಂತೆ.

ಇಲ್ಲಿ ನೀನು ಏನು ಮಾಡ್ತೀಯ,ಹೇಳು ಅಂದ “ ಮಹಾಪ್ರಭುಗಳೇ ಒಂದು ಕಾಲದಲ್ಲಿ ನಿಂತು ಬಿಕ್ಷೆ ಬೇಡುತ್ತಿದ್ದ ನಾನು ಅಂಥವನಿಗೆ ಈಗ ರಾಜ ಮರ್ಯಾದೆ ಸಿಗುತ್ತಿದೆ.” ಅಧಿಕಾರದ ಅಮಲಿನಲ್ಲಿ ತೇಲಬೇಡ” .ಈ ಹಿಂದೆ ನೀನು ಏನಾಗಿದ್ದೆ ಎಂಬುದನ್ನು   ಮರೆಯಬೇಡ ಎಂದು  ನನಗೆ ನಾನೇ ಹೇಳಿಕೊಳ್ಳುವ ಸಲುವಾಗಿ ದಿನವೂ ಕೋಣೆಗೆ ಬರುತ್ತಿದ್ದೆ.ಈ ಹಳೆಯ ಸಂಗಾತಿಗಳ ಮುಂದೆ  ನಿಂತು .ಆ ಮಾತುಗಳನ್ನು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ.ನೀವು ಯಾರನ್ನೂ  ಬೇಟೆಯಾಡಲು ಬಂದಂತಿಂದೆಯಲ್ಲ ,ಯಾರ ನಿರೀಕ್ಷೆಯಲ್ಲಿ  ಬಂದಿರಿ ಮಹಾಪ್ರಭು”.

ಈ ಮಾತು ಕೇಳಿ ರಾಜನಿಗೆ ತನ್ನ ಕುರಿತು ನಾಚಿಕೆಯಾಯಿತು. ಸುಬ್ರಾಯನ ವಿಷಯವಾಗಿ ಏನೇನೋ ಕಲ್ಪಿಸಿಕೊಂಡಿದ್ದಕ್ಕೆ  ಅಸಹ್ಯ ಅನಿಸಿತು. ಆತ ಏನೊಂದು ಮಾತನಾಡದೆ, ಸುಬ್ರಾಯನನ್ನು ಬಾಚಿ ತಬ್ಬಿಕೊಂಡು.ಅಪ್ಪುಗೆ ಅದರ ಬಿಸುಪು ಜತೆಗೆ ಇದ್ದ ಮೌನ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಹೇಳಿತು.a

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top