ಜಿ.ಎಸ್.ಟಿ.ಸ್ವಾಗತಿಸಲು ಸಜ್ಜಾಗಿರುವ ಇಡೀ ದೇಶ.
ಭಾರತ ದೇಶದ ತೆರಿಗೆ ನೀತಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ಪ್ರಕ್ರಿಯೆಗೆ ವೇದಿಕೆ ಸಿದ್ಧವಾಗಿದೆ.ಇಂದು (ಜೂನ್ ೩೦) ಮಧ್ಯ ರಾತ್ರಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸರ್ಕಾರ ಜಿಎಸ್ಟಿಗೆ ಚಾಲನೆ ನೀಡಲಿದ್ದು, ಮಹತ್ವದ ಬದಲಾವಣೆಗೆ ನಾಂದಿ ಹಾಡಲಿದೆ. ಜಿಎಸ್ಟಿಕುರಿತು ಜನರಲ್ಲಿ ಇರುವ ಗೊಂದಲವನ್ನು ಸರಳವಾಗಿ ಬಗೆಹರಿಸಬೇಕೆನ್ನುವ ಉದ್ದೇಶದೊಂದಿಗೆ ತಯಾರಿಗಳು ನಡೆದಿದೆ..
ಪ್ರಸ್ತುತ ಜಾರಿಯಲ್ಲಿರುವ ಅನೇಕ ಮಾದರಿಯ ಪರೋಕ್ಷ ತೆರಿಗೆಗಳ ಬದಲಾಗಿ ‘ಏಕ ರಾಷ್ಟ್ರ ಏಕ ತೆರಿಗೆ’ಎಂಬ ನೀತಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಜಿ.ಎಸ.ಟಿ.ಯನ್ನು ಜಾರಿಗೊಳಿಸುವ ಉದ್ದೇಶದಿಂದ ಒಂದು ಸಮಾರಂಭವನ್ನು ಏರ್ಪಡಿಸಿದ್ದು ಇದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆಯುತ್ತದೆ.ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ,ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಹಣಕಾಸು ಸಚಿವ ಅರುಣ್ ಜೇಟ್ಲಿ,ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ರವರು ವೇದಿಕೆಯನ್ನು ಅಲಂಕರಿಸಲಿದ್ದಾರೆ. ಅಲ್ಲದೆ ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರುಗಳು, ಹಿರಿಯ ಅಧಿಕಾರಿಗಳು ಹಾಗು ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ.
ಈ ಸಮಾರಂಭವು ರಾತ್ರಿ 10.45 ಕ್ಕೆ ಆರಂಭವಾಗಲಿದ್ದು ಜಿ.ಎಸ.ಟಿ. ಕುರಿತು ಹತ್ತು ನಿಮಿಷಗಳ ವಿಡಿಯೋ ಪ್ರಸಾರವಾಗಲಿದ್ದು ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ.ಆದ ಬಳಿಕ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ ಗಳು ತಲಾ 25 ನಿಮಿಷಗಳಕಾಲ ಭಾಷಣವನ್ನು ಮಾಡುತ್ತಾರೆ.
ಒಟ್ಟಿನಲ್ಲಿ ಇಂದು ಮಧ್ಯರಾತ್ರಿಯಿಂದ ಒಂದು ರಾಷ್ಟ್ರ, ಒಂದು ತೆರಿಗೆ ಪರಿಕಲ್ಪನೆಯ ಯುಗಾರಂಭಕ್ಕೆ ಭಾರತ ಸಾಕ್ಷಿಯಾಗಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
