ಭೀಮನಿಂದ ಬಕಾಸುರನ ವಧೆ.
ಪಾಂಡವರು ಹಿಡಂಬಿವನದಿಂದ ಮತ್ಸ್ಯ ಪಾಂಚಾಲ ದೇಶಗಳನ್ನು ನೋಡಿ ಅನಂತರ ಬೆಟ್ಟ ಗುಡ್ಡಗಳನ್ನು ದಾಟಿ ಏಕಚಕ್ರಪುರ ಎಂಬ ಊರಿಗೆ ಬಂದರು. ಬ್ರಾಹ್ಮಣರಂತೆ ವೇಷ ಧರಿಸಿದ್ದರು.ಹಗಲಲ್ಲಿ ಭಿಕ್ಷಾಟನೆ ಮಾಡಿ ರಾತ್ರಿ ಯಾರೋ ಒಬ್ಬರ ಮನೆಯ ಜಗುಲಿಯಲ್ಲಿ ಮಲಗಿ ಕೊಂಡರು.ಸಿಕ್ಕ ಆಹಾರವನ್ನು ಅರ್ಧ ಭಾಗ ಮಾಡಿ ಭೀಮನಿಗೆ, ಉಳಿದಿದ್ದ ಅರ್ಧವನ್ನು ಉಳಿದ ಐವರಿಗೆ ಕುಂತಿಯು ಹಂಚಿದಳು. ಹೀಗೆಯೇ ಕೆಲವು ದಿನ ಕಳೆದರು.
ಒಂದು ದಿನ ಅವರು ಉಳಿದುಕೊಂಡಿದ್ದ ಮನೆಯಲ್ಲಿ ಅಳುವ ದನಿ ಕೇಳಿ ಬಂದಿತು. ಆಗ ಕುಂತಿಯು ಅವರ ಬಳಿಗೆ ಹೋಗಿ “ನಿಮ್ಮ ಕಷ್ಟ ಏನೇ ಇರಲಿ,ನನ್ನ ಮಗನು ಅದನ್ನು ದೂರ ಮಾಡುತ್ತಾನೆ” ಎಂದು ಸಮಾಧಾನ ಪಡಿಸಿದಳು.
ಆಗ ಅವರು ಊರಿನ ಪಕ್ಕದ ಅಡವಿಯಲ್ಲಿರುವ ಬಕಾಸುರನ ಬಗ್ಗೆ ತಿಳಿಸಿದರು. ಅವನು ಊರಿಗೆ ಬಂದು ತೊಂದರೆ ಕೊಡುತ್ತಿದ್ದನು.ಕೊನೆಗೆ ಪ್ರತಿದಿನ ಒಂದು ಎತ್ತಿನ ಗಾಡಿ ಅನ್ನ , ಸಾರು, ಹುಳಿ, ಪಲ್ಯಗಳನ್ನು ಅವನಿಗೆ ಕೊಡಲು ಊರಿನವರು ಒಪ್ಪಿದರು.ಆಗ ಅವನು ಊರೊಳಗೆ ಬರುವುದನ್ನು ನಿಲ್ಲಿಸಿದ್ದನು.
ಬಕಾಸುರನ ಗಾಡಿ ಹೊಡೆಯುವನನ್ನು ಕೋಣಗಳನ್ನು ಸಹ ಕೊಂದು ತಿನ್ನುತ್ತಿದ್ದನು. ಅಂದು ಬ್ರಾಹ್ಮಣನ ಮನೆಯಲ್ಲಿ ಅಳಲು ಕಾರಣವೆಂದರೆ ಮರುದಿನದ ಪಾಳಿ ಆ ಮನೆಯವರದ್ದಾಗಿತ್ತು.ಅನ್ನ ಗಾಡಿ ಕೋಣಗಳನ್ನು ಸಿದ್ಧಪಡಿಸಿದರು. ಯಾರೂ ಗಾಡಿಯವರನ್ನು ಒಯ್ಯುವವರಿರಲಿಲ್ಲ. ಕುಂತಿಯು ನನ್ನ ನಾಲ್ಕು ಮಕ್ಕಳು ಉಳಿಯಲಿ ಐದನೇಯವನನ್ನು ಕಳಿಸುತ್ತೇನೆ. ನೀವು ಚಿಂತೆ ಮಾಡಬೇಡಿರಿ ಎಂದು ಹೇಳಿ ಅನ್ನ, ಗಾಡಿ ಕೋಣಗಳನ್ನು ಸಿದ್ಧಪಡಿಸಲು ತಿಳಿಸಿದಳು.
ಮರುದಿನ ಭೀಮನು ಸ್ವತಃ ಗಾಡಿಯನ್ನು ಹೊಡೆದುಕೊಂಡು ಊರ ಹೊರಗೆ ಹೋದನು.ಮನೆಯ ಮಾಲೀಕ ಮೊದಲು ಅಥಿತಿಗಳನ್ನು ಕಷ್ಟಕ್ಕೆ ಒಳಪಡಿಸಲು ಸಿದ್ಧನಾಗಲಿಲ್ಲ. ಆದರೆ ಕೊನೆಗೆ ಒಪ್ಪಿದನು. ಅವನಿಗೆ ಕುಂತಿಯು ನಮಗೆ ಆಶ್ರಯ ಕೊಟ್ಟವರಿಗೆ ಇಷ್ಟಾದರೂ ಸಹಾಯ ಮಾಡುವುದು ಬೇಡವೇ ? ಎಂದು ಕೇಳಿದಳು. ನನ್ನ ಮಗ ಬಲಶಾಲಿ ಅವನಿಗೆ ಬಕಾಸುರನಿಂದ ಏನೂ ತೊಂದರೆ ಆಗುವುದಿಲ್ಲ.ಧರ್ಮರಾಜ ಮುಂತಾದವರು ಸಹ ಗಾಬರಿಯಾದಾಗ ಕುಂತಿ ಅವರಿಗೂ ಸಹ ಸಮಾಧಾನ ಪಡಿಸಿದಳು.
ಆಪತ್ತಿನಲ್ಲಿ ಉಪಕಾರ ಮಾಡಿದವರಿಗೆ ನಾವು ಸಹಾಯ ಮಾಡುವುದೇ ಸರಿ. ಹಿಡಂಬನನ್ನೇ ಕೊಂದ ಭೀಮನು ಬಕಾಸುರನನ್ನು ಬಿಡುವುದಿಲ್ಲ. ನೀವು ಹೆದರಬೇಡಿ ಎಂದಳು. ಭೀಮನಿಗೆ ಬಂಡಿ ತುಂಬಾ ಊಟ ಸಿಗುವುದೆಂದು ಸಂತಸವಾಗಿತ್ತು.ಮರುದಿನ ಊಟದ ವಸ್ತುಗಳೊಂದಿಗೆ ಹೊರಟಾಗ ಭೀಮನಿಗೆ ಬಹಳ ಹಸಿವಾಗಿತ್ತು , ಅನಂದವಾಯಿತು. ಅನ್ನ ,ಹುಳಿ , ಪಲ್ಯ, ಪಾಯಸಗಳನ್ನು ನೋಡಿ ಊರ ಹೊರಗೆ ಬಂದವನೇ ತಾನೇ ಊಟ ಮಾಡಲು ಆರಂಭಿಸಿದನು.
ಬಕಾಸುರನಿದ್ದಲ್ಲಿಗೆ ಬಂದಾಗ ಬಂಡಿಯೇ ಖಾಲಿ ಆಗಿತ್ತು. ಬಕಾಸುರನು ಸಿಟ್ಟಿನಿಂದ ಕಿರುಚಿದಾಗ ಭೀಮನು ಉಳಿದಿದ್ದ ಪಾಯಸವನ್ನು ಕುಡಿದು “ಎಲವೋ ಬೇಗ ಬಾರೋ” ಎಂದು ಬಕಾಸುರನನ್ನು ಕರೆದನು. ಭೀಮನನ್ನು ಪುಡಿ ಪುಡಿ ಮಾಡುತ್ತೇನೆಂದು ಓಡಿ ಬಂದು,ಭೀಮನು ಎಲ್ಲವನ್ನು ತಿಂದು ಹಾಕಿದ್ದನ್ನು ಕಂಡು ಕಿಡಿ ಕಿಡಿಯಾದನು. ಬಕಾಸುರನನ್ನು ಹಿಡಿದು ನೆಲಕ್ಕೆ ಕೆಡವಿ ಎದೆಯ ಮೇಲೆ ಹತ್ತಿ ಕುಳಿತನು.
ಹಿಡಿದೆತ್ತಿ ದೂರ ಬಿಸಾಕಿದನು. ಕಾಲುಗಳನ್ನು ಹಿಡಿದು ಸಿಗಿದು ಬಗೆದನು.ಕೊನೆಗೆ ಬಕನ ತಲೆಯನ್ನು ಬಂಡೆಗೆ ಬಡಿದನು.ಊರ ಹೆಬ್ಬಾಗಿಲಲ್ಲಿ ಬಕಾಸುರನ ಹೆಣವನ್ನು ಬಗೆದು ಊರೊಳಗೆ ಬಂದನು.ಎಲ್ಲರೂ ಬಕಾಸುರನ ಶವವನ್ನು ಕಂಡು ಆಶ್ಚರ್ಯಪಟ್ಟರು. ದೈವವೇ ಈ ರೀತಿ ಮಾಡಿತೆಂದು ತಿಳಿದು ಸಂತುಷ್ಟರಾದರು.
ಪಾಂಡವರು ಏಕಚಕ್ರಪುರದಲ್ಲಿ ಕೆಲವು ದಿನಗಳವರೆಗೆ ಉಳಿದರು. ಒಂದು ದಿನ “ ಪಾಂಚಾಲ ದೇಶದ ರಾಜಕುಮಾರಿ ದ್ರೌಪದಿಯ ಸ್ವಯಂವರ ನಡೆದಿದೆ.ನಾನು ಅಲ್ಲಿಗೆ ಹೋಗುತ್ತಿದ್ದೇನೆ, ನೀವು ಬರುವುದಾದರೆ ಬನ್ನಿರಿ” ಎಂದನು ಹೊಸದಾಗಿ ಬಂದ ಬ್ರಾಹ್ಮಣ. ಪಾಂಡವರೂ ಸಹ ಅವರೊಂದಿಗೆ ಏಕಚಕ್ರಪುರದಿಂದ ಪಾಂಚಾಲ ದೇಶದ ಕಡೆಗೆ ನಡೆದರು.ಕುಂತಿ ಸಹ ಅವರೊಂದಿಗೆ ಪ್ರಯಾಣ ಮಾಡಿದಳು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
