ದ್ರೌಪದಿಯ ವಸ್ತ್ರಾಪಹರಣದ ಹಿಂದಿನ ರಹಸ್ಯ ನಿಮಗೆ ಗೊತ್ತಾ?
ಮೊದಲನೇ ಬಾರಿ ಪಾಂಡವರು ಜೂಜಾಟದಲ್ಲಿ ಸೋತಿದ್ದಕ್ಕೆ ದ್ರೌಪದಿಯ ವಸ್ತ್ರಾಪಹರಣವಾಯಿತು.
ದುರ್ಯೋಧನನು ದುಶ್ಶಾಸನನಿಗೆ “ಈ ಕೂಡಲೇ ದ್ರೌಪದಿಯನ್ನು ಕರೆದುಕೊಂಡು ಬಾ” ಎಂದು ಆಜ್ಞೆ ಮಾಡಿದನು.ದುಶ್ಶಾಸನನು ಹೋಗಿ “ ದ್ರೌಪದಿ, ನೀನೀಗ ನಮ್ಮ ದಾಸಿ ನಿನ್ನನ್ನು ಧರ್ಮರಾಜ ಸೋತಿದ್ದಾನೆ ನೀನೀಗಲೇ ಸಭಾ ಭವನಕ್ಕೆ ಬಾ” ಎಂದು ಹೇಳಿದಾಗ ಇದೆಲ್ಲ ಹೇಗೆ ಸಾಧ್ಯವಿದೆ. ಯುಧಿಷ್ಠಿರನು ನನ್ನನ್ನು ಜೂಜಿಗೆ ಪಣಕ್ಕೆ ಹೇಗೆ ಹಾಕುವನು,ನಾನು ಹೇಗೆ ಸೋತಂತೆ ? ಭೀಮಾರ್ಜುನರಲ್ಲಿ ಎನನ್ನು ಮಾಡುತ್ತಿದ್ದರು ? ಎಂದು ಕೇಳಿದಳು.
ಅವಳಿಗೆ ಉತ್ತರ ಹೇಳದೇ ಅವಳ ತಲೆ ಕೂದಲುಗಳನ್ನು ಹಿಡಿದು ಎಳೆಯುತ್ತಲೇ ಜೂಜಿನ ಸಭಾ ಭವನಕ್ಕೆ ಬಂದನು. ರಾಜಸೂಯದಲ್ಲಿ ಪವಿತ್ರವಾದ ತಲೆಕೂದಲು ದುಷ್ಟರ ಸ್ಪರ್ಶದಿಂದ ಅಪವಿತ್ರವಾಯಿತು. ದ್ರೌಪದಿಯು ಎಲ್ಲ ಕಡೆಗೂ ನೋಡಿ ಕಣ್ಣೀರು ಸುರಿಸುತ್ತಾ ನಾಚಿಕೆಯಿಂದ ಅವಮಾನದಿಂದ ಹಿರಿಯರಲ್ಲಿ ಬೇಡಿಕೊಂಡಳು.
ರಾಜ ಪ್ರಜೆಗಳನ್ನು ರಕ್ಷಿಸಬೇಕು, ರಾಜನೇ ದುರ್ಮಾರ್ಗಿಯಾಗಬಾರದು; ಎಲ್ಲರೂ ಸುಮ್ಮನಿದ್ದು ಈ ಅಚಾತುರ್ಯವನ್ನು ನೋಡಿ ಸುಮ್ಮನೇ ಕುಳಿತಿದ್ದೀರಿ ನಿಮಗೆ ಧಿಕ್ಕಾರವಿರಲಿ ಎಂದಳು.ಶಕುನಿ, ಕರ್ಣ, ದುರ್ಯೋಧನರು ದಾಸಿ, ದಾಸಿ ಎಂದು ಜೋರಾಗಿ ನಗ ತೊಡಗಿದರು. ಸಭಾ ಸದಸ್ಯರು ಭೀಷ್ಮ, ದ್ರೋಣ, ಕೃಪ ಮುಂತಾದವರು ಸಹ ತಲೆ ತಗ್ಗಿಸಿದರು. ದುಶ್ಶಾಸನನು ತಲೆ ಕೂದಲನ್ನು ಬಿಟ್ಟು ಸೀರೆಗೆ ಕೈ ಹಾಕಿ ಎಳೆಯಲಾರಂಭಿಸಿದನು.
ಅಲ್ಲಿರುವ ಎಲ್ಲರೂ ಕೌರವರ ಋಣದಲ್ಲಿದ್ದವರು,ಕೌರವರ ವಿರುದ್ಧವಾಗಿ ಏನು ಮಾಡದಂತಾಗಿದ್ದರು.ಎಲ್ಲ ಅಸಹಾಯಕರಾಗಿ ಚಿಂತೆಯಿಂದ ಇದ್ದರು.
ದ್ರೌಪದಿಯು ಕೊನೆಗೆ ಕೈ ಜೋಡಿಸಿ ಹೇ ಮುರಾರಿ ಕೃಷ್ಣ, ಗೋವಿಂದ, ವಾಸುದೇವ ,ಆಪ್ತ ರಕ್ಷಕ ಈ ಅಪಮಾನದಿಂದ ನನ್ನನ್ನು ರಕ್ಷಿಸು ಎಂದು ಕೈಯೆತ್ತಿ ಬೇಡಿಕೊಂಡಳು.
ಶ್ರೀ ಕೃಷ್ಣನು ದ್ರೌಪದಿಯ “ಕರೆಯನ್ನು ಗಮನಿಸಿದನು, ಅವನು ಕೃಷ್ಣನಾಗಿ ಅವತಾರ ಹೊಂದಿದ ನಂತರ ಅನೇಕ ಶಿಷ್ಟರನ್ನು ರಕ್ಷಿಸಿದ್ದನು. ಆದುದರಿಂದ ತಾನು ದ್ವಾರಕೆಯಲ್ಲಿದ್ದುಕೊಂಡೇ ದ್ರೌಪದಿಗೆ ಅಕ್ಷಯಾಂಬರವನ್ನು ದಯಪಾಲಿಸಿದನು. ದುಶ್ಶಾಸನನು ಸೆಳೆದಂತೆ ವಸ್ತ್ರ ಅಧಿಕವಾಯಿತು. ಸೀರೆ ಎಳೆದಷ್ಟೂ ಮತ್ತೂ ಉದ್ದವಾದಾಗ ದುಶ್ಶಾಸನ ಕಡೆಗೂ ಸೋತು ಬಿದ್ದನು.ದುರ್ಯೋಧನನು ತೊಡೆ ತಟ್ಟಿ ದುಶ್ಶಾಸನನನ್ನು ಪ್ರೋತ್ಸಾಹಿಸುತ್ತಿದ್ದನು.
ಭೀಮಸೇನನು ಎದ್ದು ನಿಂತು ಮಹಾಜನರೇ, ನನ್ನ ತೊಡೆ ತಟ್ಟಿ ಕೆಟ್ಟ ಕಾರ್ಯವನ್ನು ಮಾಡಿದ ದುರ್ಯೋಧನನ ತೊಡೆಗಳನ್ನು ಮುರಿದು,ದುಶ್ಶಾಸನನ ಎದೆಯಿಂದ ರಕ್ತವನ್ನು ತೆಗೆದು ದ್ರೌಪದಿಯ ಮುಡಿ ಕಟ್ಟುವೆ,ಅರ್ಜುನನು ಕರ್ಣನನ್ನು ಉಳಿಸುವುದಿಲ್ಲ. ದುರ್ಯೋಧನನ ತಲೆಯ ಮೇಲೆ ಕಾಲಿಡುತ್ತೇನೆ ಎಂದು ಅಬ್ಬರಿಸಿದನು.ಇನ್ನು ಮುಂದೆ ಕೌರವ ಪಾಂಡವರಲ್ಲಿ ಯುದ್ಧ ಅನಿವಾರ್ಯ ಎಂದು ಜನರಿಗೆ ತಿಳಿಯಿತು.ತುಂಬಿದ ಸಭೆಯಲ್ಲಿ ಭೀಮನು ಮಾಡಿದ ಪ್ರತಿಜ್ಞೆಯನ್ನು ಕೇಳಿದ ದೃತರಾಷ್ಟ್ರನಿಗೆ ನಡುಕ ಉಂಟಾಯಿತು. ಸತ್ಯವನ್ನೇ ನಂಬಿರುವ ಪಾಂಡವರು ಆಡಿದಂತೆ ಮಾಡಿದರೆ ನನ್ನ ಮಕ್ಕಳಿಗೆ ದುರ್ಮರಣ ತಪ್ಪುವುದಿಲ್ಲವೆಂದು ಹುಸಿ ಕೋಪದಿಂದ ದುರ್ಯೋಧನನಿಗೆ ಬೈದನು ದುಷ್ಟ ನಮ್ಮ ವಂಶದ ಕೀರ್ತಿಯನ್ನು ಹಾಳು ಮಾಡಿದೆ.ಎಂದು ದ್ರೌಪದಿಗೆ ಸಾಂತ್ವಾನ ಮಾಡುವಂತೆ ಈ ರೀತಿಯಲ್ಲಿ ಹೇಳಿದನು.
ಮಗಳೇ ನಿನಗಾದ ಅವಮಾನದಿಂದಾಗಿ ನನಗೆ ಬಹಳ ಬೇಸರವಾಗಿದೆ. ಅದುದಾಯಿತು. ನಿನಗೇನು ಬೇಕು ಕೇಳು ಎಂದನು.ಆಗ ದ್ರೌಪದಿಯು ಮಹಾರಾಜ ನಿಜವಾಗಿಯೂ ನನ್ನ ಮೇಲೆ ಮರುಕ ಉಂಟಾಗಿದ್ದರೆ ಮಹಾರಾಜ ಯುಧಿಷ್ಠಿರನು ಕಳೆದುಕೊಂಡ ರಾಜ್ಯವನ್ನು ಪುನಃ ಕೊಡಿಸಿರಿ ಎಂದಳು.ಪಾಂಡವರು ದಾಸ್ಯದಿಂದ ಮುಕ್ತರಾಗಲಿ ಎಂದು ಕೇಳಿದಾಗ ದೃತರಾಷ್ಟ್ರನು ಎಲ್ಲರನ್ನೂ ಮುಕ್ತಗೊಳಿಸಿ.ಅವರ ರಾಜ್ಯವನ್ನು ಅವರಿಗೇ ಮರಳಿಸಿದನು. ಇನ್ನೂ ಏನಾದರೂ ಬೇಕಾದರೆ ಕೇಳು ಎಂದಾಗ ಈಗ ಕೊಟ್ಟಿರುವ ಎರಡು ವರಗಳೇ ಸಾಕು ಎಂದಳು.ದೃತರಾಷ್ಟ್ರನು ಅವರನ್ನು ಹರಸಿ ಇಂದ್ರಪ್ರಸ್ಥಕ್ಕೆ ಹೋಗಿ ಸುಖವಾಗಿರಿ ಎಂದು ಹೇಳಿ ಕಳುಹಿಸಿದನು.
ಪಾಂಡವರು ಇಂದ್ರಪ್ರಸ್ಥಕ್ಕೆ ತಲುಪುವ ಮುನ್ನವೇ ಮತ್ತೊಮ್ಮೆ ಜೂಜಾಟಕ್ಕೆ ಕರೆ ಬಂತು ಪಾಂಡವರಿಗೆ ಬೇಸರವಾಯಿತು.ಈ ಭಾರಿ ಸೋತವರು 12 ವರ್ಷ ವನವಾಸ ಒಂದು ವರ್ಷ ಅಜ್ಞಾತ ವಾಸ ಮಾಡಬೇಕೆಂಬ ನಿಯಮವಿತ್ತು.ಆದುದರಿಂದ ಪಾಂಡವರು ಸೋತು ವನವಾಸಕ್ಕೆ ಹೊರಟರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
