ಶ್ರಾವಣ ಮಾಸ ಬಂತೆಂದರೆ ಒಂದರ ಹಿಂದೊಂದು ಹಬ್ಬಗಳ ಜಾತ್ರೆಯೇ ಹರಿದುಬರುತ್ತದೆ. ಗುರು ಪೂರ್ಣಿಮೆ, ಭೀಮನ ಅಮವಾಸ್ಯೆ ಮುಗಿಯುತ್ತಿದ್ದಂತೆಯೇ ಮಂಗಳ ಗೌರಿ ಹಬ್ಬವೂ ಆಗಮಿಸಿಬಿಡುತ್ತದೆ..
ಶ್ರೀ ಮಂಗಳ ಗೌರಿ ವ್ರತವನ್ನು ಶ್ರವಣ ಮಾಸದಲ್ಲಿ ಪ್ರತಿ ಮಂಗಳವಾರ ಆಚರಿಸುತ್ತಾರೆ. ಬದುಕಿನಲ್ಲಿ ಸಾಮರಸ್ಯ, ಆಯಸ್ಸು, ಆರೋಗ್ಯ, ವಿದ್ಯೆ ಮತ್ತು ಯಾವುದೇ ರೀತಿಯ ದೋಷಗಳನ್ನು ಪರಿಹರಿಸುವಂತಹ ಶಕ್ತಿ ಈ ವ್ರತಕ್ಕೆ ಇರುವುದರಿಂದ ಮದುವೆಯಾದ ಹೊಸ ಮದುಮಗಳು ಈ ವೃತ ವನ್ನು ಆಚರಿಸುವ ಪದ್ಧತಿ ಇದೆ.
ಮದುವೆಯ ನಂತರ 5 ವರ್ಷ ಈ ವೃತವನ್ನು ಆಚರಿಸಲಾಗುತ್ತದೆ. ಮೊದಲಿಗೆ ತಾಯಿ ಮನೆಯಲ್ಲಿ ಈ ವ್ರತವನ್ನು ಮಾಡುತ್ತಾರೆ. ತದ ನಂತರ ಗಂಡನ ಮನೆಯಲ್ಲಿ ನಾಲ್ಕು ವರ್ಷಗಳ ಕಾಲ ಈ ವ್ರತವನ್ನು ಮಾಡಬೇಕು. 5 ವರ್ಷಗಳ ನಂತರ ಗಂಡನ ಮನೆಯಲ್ಲಿ ಉದ್ಯಾಪನ ಪದ್ಧತಿ ಇದೆ.
ಮಂಗಳಗೌರಿ ವ್ರತದ ದಿನದಂದು ಮಂಗಳ ಸ್ನಾನ ಮುಗಿಸಿ, ದೇವರ ಕೋಣೆಯಲ್ಲಿ ರಂಗೋಲಿಯಿಂದ ಚೆನ್ನಾಗಿ ಅಲಂಕರಿಸಿದ ಸ್ಥಳದಲ್ಲಿ ಒಂದು ಮಣೆ ಇಟ್ಟು ಅದರ ಮೇಲೆ ಅಕ್ಕಿಯ ರಾಶಿಯ ಮೇಲೆ ಕಳಶವನ್ನಿಟ್ಟು, ಮಂಗಳ ಗೌರಿ ಪ್ರತಿಮೆ ಹಾಗೂ ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕರ ಕೊಡಿ) ಪೂಜಿಸಬೇಕು. ಆ ಮಂಗಳಗೌರಿಯ ಪೂಜೆಯ ವೇಳೆಗೆ ಶಿವ ಪಾರ್ವತಿ ಅಷ್ಟೋತ್ತರಗಳನ್ನು ಹೇಳಿ, ಪುಷ್ಪ, ಪತ್ರ ಮತ್ತು ಅರಿಶಿನ ಕುಂಕುಮದಿಂದ ಅರ್ಚನೆ ಮಾಡಬೇಕು. ಅದರಲ್ಲೂ ಪ್ರಧಾನವಾಗಿ ಅರಿಶಿನ ಕುಂಕುಮ ಅರ್ಚನೆ ದೇವಿಗೆ ಶ್ರೇಷ್ಠವಾಗಿರುತ್ತದೆ. ನಂತರ ಮಂಗಳಗೌರಿ ವ್ರತದ ಕಥೆ ಓದ ಬೇಕು.
ಮಂಗಳಗೌರಿ ಪೂಜೆಯಲ್ಲಿ ದಿನ ಮುತ್ತೈದೆಯರನ್ನು ಮನೆಗೆ ಕರೆದು ಉಡಿಯನ್ನು ತುಂಬಬೇಕು.
ಗೌರಿಯ ಪ್ರತೀಕವಾಗಿರುವಂತಹ ಮುತೈದೆಯರಿಗೆ ಪೂಜೆಯನ್ನು ಸಲ್ಲಿಸಿ, ಅವರ ಪಾದ ತೊಳೆದು ತಲೆಗೆ ಹೂವು ಮುಡಿಸಿ, ಅರಿಶಿನ ಕುಂಕುಮ ನೀಡಿ, ಹುಡಿಯನ್ನು ತುಂಬಿಸಿ ಆರಾಧಿಸಿ, ಗೌರಿಯ ಪೂರ್ಣವಾದ ಅನುಗ್ರಹ ನಮಗೆ ಆಗಲಿ ಎಂದು ಅವರ ಕೈಯಿಂದ ಮಂತ್ರಾಕ್ಷತೆಯನ್ನು ಸೆರಗಿನ ಮೂಲಕ ಹಿಡಿದು ಭಗವಂತನನ್ನು ಪ್ರಾರ್ಥಿಸಿ ವ್ರತದ ಆಚರಣೆಯನ್ನು ಮುಕ್ತಾಯ ಮಾಡಬೇಕು.
ಮಂಗಳಗೌರಿಯು ಎಲ್ಲರಿಗೂ ಮಂಗಳವನ್ನು ಮಾಡಲಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
