ಕಳ್ಳರನ್ನೇ ಮೋಸಹೋಗುವಂತೆ ಮಾಡಿದ ಕಿಲಾಡಿ ತೆನಾಲಿರಾಮ!
ಒಮ್ಮೆ ವಿಜಯನಗರ ಸಾಮ್ರಾಜ್ಯದಲ್ಲಿ ಒಂದು ಕಳ್ಳರ ಗುಂಪು ಸೇರಿಕೊಂಡು ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿತ್ತು. ರಾಜ ಕೃಷ್ಣದೇವರಾಯ ಮತ್ತು ಅವನ ಸೈನಿಕರು ಆ ಕಳ್ಳರ ಗುಂಪನ್ನು ಹಿಡಿಯಲು ಎಷ್ಟೇ ಪ್ರಯತ್ನ ಪಡುತ್ತಿದ್ದರೂ ಅದು ಸಾಧ್ಯವಾಗುತ್ತಿರಲಿಲ್ಲ. ತೆನಾಲಿರಾಮನು ರಾಜನ ಅಚ್ಚುಮೆಚ್ಚಿನ ವ್ಯಕ್ತಿ ಅವನಿಗೆ ರಾಜ ತುಂಬಾ ಬಹುಮಾನಗಳನ್ನು ಕೊಟ್ಟಿರುತ್ತಾನೆ ಎಂದು ಆ ಕಳ್ಳರ ಗುಂಪಿಗೆ ತಿಳಿಯುತ್ತದೆ. ತೆನಾಲಿ ರಾಮನ ಮನೆಯಲ್ಲಿ ಕಳ್ಳತನ ಮಾಡಬೇಕೆಂದು ತೆನಾಲಿರಾಮನ ಮನೆಯಂಗಳದಲ್ಲಿ ಬಂದು ಒಂದು ರಾತ್ರಿ ಅಡಗಿಕೊಂಡರು.
ಅದೃಷ್ಟವಶಾತ್ ಆ ಕಳ್ಳರು ಅವಿತುಕೊಂಡಿದ್ದನ್ನು ತೆನಾಲಿರಾಮನು ಮಹಡಿಯಿಂದ ನೋಡಿದನು.ಕಳ್ಳರಿಗೆ ತಕ್ಕ ಪಾಠಕಲಿಸಬೇಕೆಂದು ಯೋಚಿಸಿ ಕೆಳಗೆ ಇಳಿದು ಕಿಟಕಿ ಬಳಿ ನಿಂತು ಅವ್ನ ಹೆಂಡತಿಗೆ ಜೋರಾಗಿ “ಈ ಊರಿನಲ್ಲಿ ಕಳ್ಳರ ಕಾಟ ಜಾಸ್ತಿ ಆಗೋಗಿದೆ ಹಾಗಾಗಿ ನಮ್ಮ ಎಲ್ಲ ಸಂಪತ್ತುಗಳನ್ನು ಈ ಪೆಟ್ಟಿಯಲ್ಲಿ ಹಾಕಿ ಮುಚ್ಚಿಡೋಣ ಎಂದು” ಕಳ್ಳರಿಗೆ ಕೇಳಿಸುವ ಹಾಗೆ ಹೇಳಿದನು.
ತೆನಾಲಿ ರಾಮ ಮತ್ತು ಅವನ ಹೆಂಡತಿ ಒಂದು ಪೆಟ್ಟಿಗೆಗೆ ದೊಡ್ಡ ಕಲ್ಲುಗಳನ್ನು ತುಂಬಿ ಆ ಪೆಟ್ಟಿಗೆಯನ್ನು ಅವರ ಮನೆಯ ಹಿತ್ತಲಿನ ಬಾವಿಗೆ ಎಸೆದರು.ಮರೆಯಲ್ಲಿ ಇದನ್ನು ನೋಡುತ್ತಿದ್ದ ಕಳ್ಳರು ಸಂತೋಷ ಪಟ್ಟರು.
ಮಧ್ಯರಾತ್ರಿ ಎಲ್ಲರು ಮಲಗಿದ್ದಾರೆ ಎಂದು ತಿಳಿದ ಕಳ್ಳರು ಬಾವಿಯತ್ತ ಬಂದರು ಬಾವಿಯ ಆಳದಲ್ಲಿದ್ದ ನೀರನ್ನು ಸೇದಿ ಅದನ್ನು ಹೊರಹಾಕಲು ಪ್ರಾರಂಭಿಸಿದನು,ಅಷ್ಟರಲ್ಲಿ ರಾಮನು ಸದ್ದಿಲ್ಲದೇ ಅಲ್ಲಿಗೆ ಬಂದು ಅಡಗಿಕೊಂಡನು, ಅತ್ತ ಕಳ್ಳರು ಬಾವಿಯಿಂದ ನೀರನ್ನು ಸೇದುತ್ತಿದ್ದರೆ ಇತ್ತ ತೆನಾಲಿರಾಮನು ಒಂದು ಗುದ್ದಲಿಯನ್ನು ತಂದು ಹಿತ್ತಲಿನ ಗಿಡಗಳಿಗೆ ನೀರು ಹೋಗಲು ದಾರಿ ಮಾಡುತ್ತಿದ್ದನು.ಹೀಗೆ ಕಳ್ಳರಿಂದ ಗಿಡಗಳಿಗೆ ನೀರು ಹಾಕಿದಂತಾಯಿತು.
ಇಷ್ಟಾಗುವ ಹೊತ್ತಿಗೆ ತೆನಾಲಿರಾಮನು ತನ್ನ ಮಗನ ಕೈಗೆ ಸಂದೇಶವನ್ನು ಇತ್ತು ಅದನ್ನು ಸೈನಿಕರಿಗೆ ಕೊಡಲು ಕಳುಹಿಸಿದನು. ಕೊನೆಗೂ ಕಳ್ಳರು ಆ ಪೆಟ್ಟಿಯನ್ನು ಕಷ್ಟಪಟ್ಟು ಬಾವಿಯಿಂದ ಹೊರತೆಗೆದರು. ಆಗ ಅವರಿಗೆ ಅದರಲ್ಲಿದ್ದ ಕಲ್ಲುಗಳನ್ನು ನೋಡಿ ತುಂಬಾ ಬೇಜಾರಾಯಿತು ಮತ್ತು ನಿರಾಸೆಯಾಯಿತು.
ಅಷ್ಟರಲ್ಲಿ ಸೈನಕರು ಕಳ್ಳರನ್ನು ಸುತ್ತುವರೆದು ಅವರನ್ನು ಬಂಧಿಸಿ ಸೆರೆಮನೆಗೆ ಹಾಕಿದರು.ಇದನ್ನು ತಿಳಿದ ರಾಜನು ತೆನಾಲಿ ರಾಮನ ಧೈರ್ಯ ಮತ್ತು ಬುದ್ದಿವಂತಿಕೆಯನ್ನು ಮೆಚ್ಚಿ ಉಡುಗೊರೆಯನ್ನು ಕೊಟ್ಟನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
