ಗಾಳಿ ಆಂಜನೇಯ, ದುಷ್ಟ ಶಕ್ತಿ ಸಂಹಾರಕ. ಈ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಿರದ 18 ವಿಷಯಗಳು ಇಲ್ಲಿವೆ ತಿಳಿದುಕೊಳ್ಳಿ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಹಲವು ವಿಶೇಷಗಳಿಂದ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತದೆ.
ದೇವಾಲಯ ಪ್ರವೇಶಿಸುತ್ತಲೇ ಎಡ ಭಾಗಕ್ಕೆ ಪೂರ್ವಾಭಿಮುಖವಾಗಿ ಸೀತಾ, ರಾಮ,ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ಸ್ವಾಮಿ, ಬಲಬಾಗಕ್ಕೆ ಸತ್ಯನಾರಾಯಣ ಸ್ವಾಮಿ ಇದೆ.ಈ ಎರಡೂ ಗುಡಿಗಳ ಮಧ್ಯಭಾಗದಲ್ಲಿ ಪಶ್ಚಿಮಾಭಿಮುಖವಾಗಿ ಆಂಜನೇಯ ಸ್ವಾಮಿ ಇದೆ.1995 ರಲ್ಲಿ ಸ್ಥಾಪನೆಯಾದ 75 ಅಡಿಯಷ್ಟು ಎತ್ತರದ ಅತ್ಯಾಕರ್ಷಕ ರಾಜಗೋಪುರ ದೇವಾಲಯಕ್ಕೆ ಮೆರುಗು ತಂದಿದೆ.
ಮುಂಭಾಗದಲ್ಲಿ ನವಗ್ರಹ ಮೂರ್ತಿಗಳ ಗುಡಿ ಇದೆ.
1985 ರಿಂದ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್ ನಡಿ ದೇವಸ್ಥಾನದ ಧಾರ್ಮಿಕ ಕಾರ್ಯಗಳು ನಡೆಯುತ್ತಿದೆ.
1. 600 ವರ್ಷಗಳ ಪ್ರಾಚೀನ ದೇವಾಲಯ ಗಾಳಿ ಆಂಜನೇಯ ದೇವಾಲಯ., ಕಷ್ಟ ನಿವಾರಣೆಗೆ ಹಲವಾರು ಜನರು ಹರಕೆ ಹೊರುತ್ತಾರೆ.
2. ದುಷ್ಟಶಕ್ತಿಯಿಂದ ಆತಂಕ ಹೊಂದಿರುವವರು ಇಲ್ಲಿಗೆ ಬಂದು ಸ್ವಾಮಿಯ ಸೇವೆ ಮಾಡಿ ಯಂತ್ರ ಕಟ್ಟಿಸಿಕೊಳ್ಳುತ್ತಾರೆ.
3. ವಡೆ ಹಾಗೂ ತುಳಸಿಹಾರ ದೇವರಿಗೆ ಇಲ್ಲಿ ಶ್ರೇಷ್ಠ ಎಂಬ ನಂಬಿಕೆ ಇದೆ.
4. 600 ವರ್ಷಗಳ ಇತಿಹಾಸ ಹೊಂದಿರುವ ಈ ಗಾಳಿ ಆಂಜನೇಯ ಸ್ವಾಮಿ ಇರುವುದು ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ.
5. ವೃಷಭಾವತಿ ಉಪ ನದಿಯ ಸಂಗಮ ಸ್ಥಳದಲ್ಲಿ ಪಶ್ಚಿಮಾಭಿಮುಖವಾಗಿ ಮೂರ್ತಿ ಸ್ಥಾಪಿಸಲಾಗಿದೆ .
6. ದುಷ್ಟಶಕ್ತಿಗಳಿಂದ ರಕ್ಷಿಸಲು ವೇದವ್ಯಾಸರು ದೇವರ ಮೂರ್ತಿಯನ್ನು ಸ್ಥಾಪಿಸಿದರು ಎಂಬ ಪ್ರತೀತಿ ಇದೆ.
7. ಸ್ವಾಮಿಯ ಮೂರ್ತಿ ಬಯಲಲ್ಲಿ ಇದ್ದ ಕಾರಣ “ಗಾಳಿ ಆಂಜನೇಯ”ಎಂಬ ಹೆಸರು ಬಂದಿದೆ. “ ಘಾಳಿ ಆಂಜನೇಯ” ಎಂಬ ಹೆಸರು ಇದೆ. ಘಾಳಿ ಎಂದರೆ ದುಷ್ಟ ಶಕ್ತಿ ಎಂದರ್ಥ.ದುಷ್ಟ ಶಕ್ತಿಗಳ ಅಧಿಪತಿಯಾದ ರಾವಣನ ಪುತ್ರ ಅಕ್ಷಾಸುರನನ್ನು ಮೆಟ್ಟಿ ನಿಂತಿದ್ದರಿಂದ ಈ ಹೆಸರು ಬಂದಿದೆ.
8. ಅಕ್ಷಾಸುರನ ಚಿತಾವಣೆಯಿಂದ ಭೂಲೋಕದಲ್ಲಿ ದೆವ್ವ, ಭೂತ ಚೇಷ್ಟೆಗಳು ಮಿತಿ ಮೀರಿದ್ದವಂತೆ. ಆಗ ಶ್ರೀ ರಾಮಚಂದ್ರನ ಅಣತಿಯಂತೆ ಹನುಮಂತ, ಅಕ್ಷಾಸುರನನ್ನು ಸೆದೆಬಡಿದು ಕಾಲಿನಡಿ ಮೆಟ್ಟಿ ನಿಂತ ಎಂದು ರಾಮಾಯಣ ದಲ್ಲಿ ಉಲ್ಲೇಖಿಸಲಾಗಿದೆ. ದೇವಾಲಯದ ಮೂರ್ತಿಯೂ ಇದೇ ಕತೆಯನ್ನು ಸಾರಿ ಹೇಳುವಂತಿದೆ.
9. ಮೂರ್ತಿಯ ಶಿರದ ಎರಡು ಬದಿಯಲ್ಲಿ ಶಂಕ, ಚಕ್ರಗಳಿವೆ. ಸ್ವಾಮಿಯ ಬಾಲದಲ್ಲಿ ಗಂಟೆ ಇರುವುದು ಮತ್ತೊಂದು ವಿಶೇಷ.
10. ಆಂಜನೇಯನ ಬಹುತೇಕ ವಿಗ್ರಹಗಳ ಕ್ಯೆಯಲ್ಲಿ ಗದೆ ಇರುತ್ತದೆ, ಆದರೆ ಇಲ್ಲಿ ಪದ್ಮಕಮಲವಿರುವುದು ಮತ್ತೊಂದು ವಿಶೇಷವಾಗಿದೆ.
11. ಬ್ರಹ್ಮರಥೋತ್ಸವ 135 ವರ್ಷಗಳಿಂದ ಶ್ರೀ ರಾಮನವಮಿ ಸಂದರ್ಭದಲ್ಲಿ ಒಂಭತ್ತು ದಿನಗಳ ಕಾಲ ಶ್ರೀ ಪಾಂಚರಾತ್ರಗಮ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆಡೆಯುತ್ತದೆ.ಬೆಂಗಳೂರು ಕರಗದೊಂದಿಗೆ ಈ ಉತ್ಸವವೂ ಮುಕ್ತಾಯವಾಗುತ್ತದೆ.
12. ಹನುಮ ಜಯಂತಿ ಹಾಗೂ ಭೀಮನ ಅಮಾವಾಸ್ಯೆ ಯಂದು ವಿಶೇಷ ಪೂಜೆ ನಡೆಯುತ್ತದೆ.
13. ಪ್ರತಿ ಪೌರ್ಣಮಿಯಂದು ಶ್ರೀ ಸತ್ಯನಾರಾಯಣ ವಿಶೇಷ ಪೂಜೆ ನಡೆಯುತ್ತದೆ.
14. ವರ್ಷಕ್ಕೊಮ್ಮೆ ಚೈತ್ರ ಶುದ್ದ ನವಮಿಯಲ್ಲಿ ಜಾತ್ರೆ ನಡೆಯುತ್ತದೆ.
15. ಅಲ್ಲದೇ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳು ವಿಶೇಷ ಪೂಜೆ ನಡೆಯಲ್ಲಿದ್ದು, ಈ ವೇಳೆ ಭಕ್ತರು ಮಾಲೆ ಧರಿಸಿ ಭಜನೆ ಮಾಡುತ್ತಾರೆ.
16. ಸಂಕ್ರಾಂತಿ ಸಂದರ್ಭ ಸುಮಾರು 300 ಕೆ.ಜಿ. ಪುಳಿಯೋಗರೆ ತಯಾರಿಸಿ ದೇವರ ಮುಂದೆ ರಾಶಿಹಾಕಿ ನೈವೇದ್ಯ ಮಾಡಿ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ.
17. ಸಿಂಧೂರ ಲೇಪನ. ಆಂಜನೇಯನ ಬಹುತೇಕ ದೇಗುಲದಲ್ಲಿ ಮೂರ್ತಿಯ ಮುಖಕ್ಕೆ ಮಾತ್ರ ಸಿಂಧೂರ(ಭಂಡಾರ) ಲೇಪಿಸಲಾಗಿರುತ್ತದೆ. ಆದರೆ ಇಲ್ಲಿ ಪ್ರತಿ ಗುರುವಾರ ಸ್ವಾಮಿಯ ಇಡೀ ಮೈಗೆ ಸಿಂಧೂರ ಲೇಪಿಸಿ ಪೂಜೆ ಮಾಡಲಾಗುತ್ತದೆ. ಉಳಿದಂತೆ ಪ್ರತಿ ಮಂಗಳವಾರ ಮತ್ತು ಶನಿವಾರ ವಿಶೇಷ ಪೂಜೆ ನಡೆಯುತ್ತದೆ.
18. ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯವು ಪ್ರತಿ ದಿನ ಬೆಳ್ಳಗೆ 7 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4 ರಿಂದ ರಾತ್ರಿ 9 ರವರೆಗೂ ಪೂಜೆ ಸಲ್ಲಿಸುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
