ಕೊಡಗಿನಲ್ಲಿ ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಸ್ಪಂದಿಸಿದ್ದರು. ಆದ್ರೆ ಪ್ರವಾಹ ಸಂತ್ರಸ್ತರಿಗೆ ಧೈರ್ಯ ತುಂಬಿ, ಸಾಂತ್ವನ ಹೇಳಬೇಕಿದ್ದ ಸಚಿವ HD.ರೇವಣ್ಣ ಅವ್ರ ಅಮಾನವೀಯ ವರ್ತನೆ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಜನ ಬಳಿ ತೆರಳಿ ಅವರ ಸಂಕಷ್ಟವನ್ನು ಆಲಿಸಿ, ಸಾಂತ್ವನ ನೀಡಿ, ಧೈರ್ಯ ನೀಡುವುದಕ್ಕೆಂದು ಅಲ್ಲಿಗೆ ತೆರಳಿದ್ದ ರೇವಣ್ಣ, ಅವರಿಗೆ ಬಿಸ್ಕೇಟ್ ಪ್ಯಾಕ್ ಗಳನ್ನು ನೀಡುವ ಬದಲು ಎಸೆದು ಅಮಾನವೀಯ ವರ್ತನೆ ತೋರಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ರೇವಣ್ಣ ಅವರ ವಿರುದ್ಧ ಹಲವಾರು ಜನ ಕಿಡಿ ಕಾರಿದ್ದರು. ಈಗ ಘಟನೆಯ ಬಗ್ಗೆ ಖುದ್ದು ರೇವಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ. ಮಕ್ಕಳಿಗೆ ಮಹಿಳೆಯರು ಬಿಸ್ಕೆಟ್ ಕೇಳುತ್ತಿದ್ದರು. ಹಾಗಾಗಿ, ದೂರದಲ್ಲಿ ಕುಳಿತವರಿಗೆ ಬಿಸ್ಕೆಟ್ ಎಸೆದಿರುವೆ. ಈ ಕುರಿತಾಗಿ ಜನತೆ ಕ್ಷಮೆ ಕೇಳಬೇಕು ಎಂದರೆ ಕೇಳುತ್ತೇನೆ ಎಂದು ರಾಮನಾಥಪುರದಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಬಿಸ್ಕೆಟ್ ಎಸೆದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಏನ್ ಗ್ರಹಚಾರ ಏನೋ , ಸೋಶಿಯಲ್ ಮೀಡಿಯಾದಲ್ಲಿ ನನ್ನ ವಿರುದ್ಧ ಅಭಿಯಾನವೇ ಪ್ರಾರಂಭವಾಗಿದೆ ಎಂದು ಹೇಳಿದರು. ಕೇಂದ್ರ ಸಚಿವರು ಸಂತ್ರಸ್ತರ ನೆರವಿಗೆ ಬರಲಿಲ್ಲ. ಇಂತಹ ಸಂದರ್ಭದಲ್ಲಿ ನಾನು ನೆರವಿಗೆ ನಿಂತಿದ್ದೆ. ಈಗ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ರೇವಣ್ಣ ದೂರಿದ್ದಾರೆ ಎನ್ನಲಾಗಿದೆ.
ಸಚಿವ ರೇವಣ್ಣನವರು ಉದ್ದೇಶಪೂರ್ವಕವಾಗಿ ಬಿಸ್ಕೆಟ್ ಎಸೆಯಲಿಲ್ಲ. ಪರಿಸ್ಥಿತಿ ಹಾಗಿತ್ತು. ಗಾಬರಿಯಿಂದ ಹಾಗೆ ಮಾಡಿದ್ದಾರೆ ಎಂದು ಅವರ ಮಗ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
