‘ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅಪಮಾನ ಮಾಡಲಾಗಿದೆ ಎಂದು ಉಂಟಾಗಿರುವ ವಿವಾದದ ಹೊಗೆ ಗಾಂಧಿನಗರದಲ್ಲಿ ಸದ್ಯಕ್ಕೆ ಆರುವ ಲಕ್ಷಣಗಳು ಕಾಣುತ್ತಿಲ್ಲ.. ಬ್ರಾಹ್ಮಣರು ವ್ಯಾಪಕ ಆಕ್ರೋಶ ಹೊರಹಾಕಿದ ನಂತರ ಎಚ್ಚೆತ್ತುಕೊಂಡಿದ್ದ ಚಿತ್ರತಂಡ ಚಿತ್ರದಲ್ಲಿರುವ ಅಪೇಕ್ಷಾರ್ಹ ದೃಶ್ಯಗಳನ್ನು ತೆಗೆಯುತ್ತೇವೆ ಎಂದು ಹೇಳಿತ್ತು. ಆ ನಂತರ ಬ್ರಾಹ್ಮಣರು ಕೂಡ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದರು. ಆದರೆ ಈ ವಿವಾದ ರೋಚಕ ತಿರುವು ಪಡೆದುಕೊಂಡಿದೆ.
ಧ್ರುವ ಸರ್ಜಾ ಅಭಿಮಾನಿಗಳು ಚಲನಚಿತ್ರ ವಾಣಿಜ್ಯ ಮಂಡಳಿಗೆ ಏಕಾಏಕಿ ಮುತ್ತಿಗೆ ಹಾಕಿದ್ದು ಬ್ರಾಹ್ಮಣ ಸಮುದಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಧ್ರುವ ಸರ್ಜಾ ಅಭಿಮಾನಿಗಳಿಗೆ ಅಂಬೇಡ್ಕರ್ ಸೇನೆಯು ಸಹ ಸಾಥ್ ನೀಡಿದ್ದು, ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ ಅಂಬೇಡ್ಕರ್ ಸೇನೆ ಅಧ್ಯಕ್ಷ ಮೂರ್ತಿ, “ಸಿನಿಮಾ ಅಂದರೆ ಕೇವಲ ಕಾಲ್ಪನಿಕ. ಕೆಲವೊಮ್ಮೆ ಇಂತಹ ದೃಶ್ಯಗಳನ್ನು ಮಾಡಬೇಕಾಗುತ್ತದೆ. ಈಗಾಗಲೇ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಕ್ಷಮೆ ಕೇಳಿದ್ದಾರೆ. ಪೊಗರು ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂತ ದೃಶ್ಯಗಳನ್ನು ಕೆಲವರು ಬಳಸಿಕೊಂಡು ಸಿನಿಮಾ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡ್ತಿದ್ದಾರೆ” ಎಂದು ಆರೋಪಿಸಿದರು.
“ಬ್ರಾಹ್ಮಣ ಸಮುದಾಯದವರು ತಿಳಿಸಿದಂತೆ ಈಗಾಗಲೇ ಚಿತ್ರದ ದೃಶ್ಯವನ್ನ ತೆಗೆದು ಹಾಕಲಾಗಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ವಿಮರ್ಶೆ ಮಾಡಲಾಗುತ್ತಿದೆ. ಇದರಿಂದ ಸಿನಿಮಾಗೆ ಅನ್ಯಾಯ ಆಗುತ್ತಿದೆ. ಹೀಗಾಗಿ ಇಂತಹ ಘಟನೆ ಮುಂದುವರೆಯಬಾರದು” ಎಂದು ವಾಣಿಜ್ಯ ಮಂಡಳಿಗೆ ಧ್ರುವ ಅಭಿಮಾನಿಗಳು ಪತ್ರದ ಮೂಲಕ ಮನವಿ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
