ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿಯ (ಕೆಬಿಸಿ) 13 ನೇ ಆವೃತ್ತಿಯಲ್ಲಿ ಇತ್ತೀಚೆಗಷ್ಟೇ ಭಾಗವಹಿಸಿದ್ದ ರಾಜಸ್ತಾನದ ರೈಲ್ವೆ ಉದ್ಯೋಗಿ ದೇಶ್ ಬಂಧು ಪಾಂಡೆ ಅವರಿಗೆ ಸಂಕಷ್ಟ ಎದುರಾಗಿದೆ.
ದೇಶ್ ಬಂಧು ಪಾಂಡೆ ಮೂಲತಃ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿ ಆಗಿದ್ದಾರೆ. ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಅವರು ತಮ್ಮೂರಿನಿಂದ ಮುಂಬೈಗೆ ಬರಬೇಕಾಯಿತು. ಅದಕ್ಕಾಗಿ ಕೆಲವು ದಿನಗಳ ಕಾಲ ರಜೆ ಪಡೆಯುವುದು ಅನಿವಾರ್ಯ. ರಜೆ ಬೇಕು ಎಂದು ತಮ್ಮ ಮೇಲಾಧಿಕಾರಿಗಳಿಗೆ ಅರ್ಜಿ ನೀಡಿಯೇ ಅವರು ಬಂದಿದ್ದರು. ಆದರೆ ಮೇಲಾಧಿಕಾರಿಗಳಿಂದ ಅದಕ್ಕೆ ಸಮ್ಮತಿ ಸಿಕ್ಕಿರಲಿಲ್ಲ!
ಅನುಮತಿ ಇಲ್ಲದೇ ಇದ್ದರೂ ಕೂಡ ಅವರು ಕೆಲಸಕ್ಕೆ ರಜೆ ಹಾಕಿ ಕೌನ್ ಬನೇಗಾ ಕರೋಡ್ಪತಿ ಶೋನಲ್ಲಿ ಭಾಗವಹಿಸಿರುವುದರಿಂದ ಅವರ ವಿರುದ್ಧ ರೇಲ್ವೆ ಇಲಾಖೆಯಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ವರದಿ ಆಗಿದೆ. ಅಲ್ಲದೇ ಮುಂದಿನ ಮೂರು ವರ್ಷಗಳ ಕಾಲ ಅವರ ಸಂಬಳ ಹೆಚ್ಚಳ ಆಗದಂತೆ ತಡೆ ಹಿಡಿಯಲಾಗಿದೆ.
ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ದೇಶ್ ಬಂಧು ಪಾಂಡೆ ಅವರೇ ಹೇಳಿಕೊಂಡಿದ್ದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ರೇಲ್ವೆ ಇಲಾಖೆಯ ಮೇಲಾಧಿಕಾರಿಗಳ ಈ ಕ್ರಮವನ್ನು ಕೆಲವು ಉದ್ಯೋಗಿಗಳು ವಿರೋಧಿಸಿದ್ದು, ಪ್ರತಿಭಟನೆಗೂ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
