ಮುಂದಿನ ಆವೃತ್ತಿಯ ಐಪಿಎಲ್ ಗೆ ಬಿಸಿಸಿಐ ಸಿದ್ದತೆ ಆರಂಭಿಸಿದೆ. ಇದರ ಮೊದಲ ಭಾಗವಾಗಿ ಯಾವ್ಯಾವ ಆಟಗಾರರನ್ನು ಉಳಿಸಿ ಕೊಳ್ಳಲಾಗುತ್ತದೆ ಎಂದು ತಿಳಿಸಲು ಫ್ರಾಂಚೈಸಿಗಳಿಗೆ ಇಂದು ಕೊನೇ ದಿನವಾಗಿದೆ. ಪ್ರತಿ ತಂಡ ಗರಿಷ್ಠ ಇಬ್ಬರು ವಿದೇಶಿ ಮತ್ತು ಮೂವರು ಭಾರತೀಯರ ಸಹಿತ ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಮುಂದಿನ ಆವೃತ್ತಿಯಿಂದ ಎರಡು ಹೊಸ ತಂಡಗಳು ಸೇರ್ಪಡೆಯಾಗುವ ಕಾರಣದಿಂದ ಈ ಬಾರಿ ಮೆಗಾ ಹರಾಜು ನಡೆಯಲಿದೆ. ಪ್ರತಿ ಫ್ರಾಂಚೈಸಿಗೂ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ರಿಟೆನ್ಶನ್ ಅವಕಾಶ ನೀಡಲಾಗಿದೆ.
ಈ ವರ್ಷ ಮೆಗಾ ಹರಾಜು ಇರುವುದರಿಂದ ಪ್ರಮುಖ ಆಟಗಾರರಿಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಹೊಸ ತಂಡಗಳು ಈಗಿರುವ ತಂಡಗಳ ಪ್ರಮುಖ ಆಟಗಾರರಿಗೆ ಈಗಾಗಲೇ ಹಿಂಬಾಗಿಲಿನಿಂದ ಗಾಳ ಹಾಕುತ್ತಿವೆ. ಹಾಲಿ 8 ತಂಡಗಳು ತಮ್ಮ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡುವ ಮೊದಲೇ, ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಸಮ್ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಲಖನೌ ತಂಡ ಸಂಪರ್ಕಿಸಿರುವುದಾಗಿ ವರದಿಗಳಾಗಿತ್ತು. ಈಗ ಈ ಇಬ್ಬರೂ ಆಟಗಾರರು ನಿಷೇಧದ ಭೀತಿ ಎದುರೀಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಲಖನೌ ತಂಡ ಸೇರುವಂತೆ ಕೆಎಲ್ ರಾಹುಲ್ಗೆ 20 ಕೋಟಿ ರೂ. ಮತ್ತು ರಶೀದ್ಗೆ ಅಹ್ಮದಾಬಾದ್ ತಂಡ ಸೇರುವಂತೆ 16 ಕೋಟಿ ರೂ. ಆಫರ್ ಕೊಡಲಾಗಿದೆ ಎಂದು ವರದಿಗಳು ವಿವರಿಸಿದ್ದವು. ಅಂದಹಾಗೆ ಈ ವರದಿಗಳು ನಿಜವಾಗಿದ್ದೇ ಆದರೆ ಕೆಎಲ್ ರಾಹುಲ್ ಮತ್ತು ರಶೀದ್ ಖಾನ್ ವಿರುದ್ಧ ಬಿಸಿಸಿಐ ಒಂದು ವರ್ಷ ನಿಷೇಧ ಹೇರುವ ಸಾಧ್ಯತೆ ಇದೆ. ತಂಡಗಳು ತಮ್ಮ ಉಳಿಸಿಕೊಂಡ ಆಟಗಾರ ಪಟ್ಟಿ ಪ್ರಕಟ ಮಾಡುವವರೆಗೂ ಆಯಾ ತಂಡಗಳ ಆಟಗಾರರು ಬೇರೆ ತಂಡಗಳನ್ನು ಸಂಪರ್ಕಿಸುವಂತ್ತಿಲ್ಲ. ಹೀಗೆ ಮಾಡಿದ್ದಲ್ಲಿ ನಿಯಮ ಉಲ್ಲಂಘನೆಯ ಶಿಕ್ಷೆ ಎದುರಿಸುವಂತ್ತಾಗುತ್ತದೆ.
ಸದ್ಯ ಈ ಪ್ರಕರಣದ ಬಗ್ಗೆ ಪಂಜಾಬ್ ಮತ್ತು ಹೈದರಾಬಾದ್ ತಂಡಗಳು ಬಿಸಿಸಿಐಗೆ ದೂರು ನೀಡಿವೆ ಎನ್ನಲಾಗಿದ್ದು ಬಿಸಿಸಿಐ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
