ಕನ್ನಡ ಚಿತ್ರರಂಗದ ಪಾಲಿಗೆ 2021 ವರ್ಷ ಕರಾಳ ವರ್ಷವಾಗಿ ಪರಿಣಮಿಸಿದೆ. ಕನ್ನಡ ಚಿತ್ರರಂಗಕ್ಕೆ ವರ್ಷಾಂತರಗಳಿಂದ ಸೇವೆ ಸಲ್ಲಿಸಿದ್ದ ಮಹನೀಯರು ಈ ವರ್ಷ ನಮ್ಮನ್ನು ಬಿಟ್ಟು ದೈಹಿಕವಾಗಿ ದೂರವಾಗಿದ್ದಾರೆ. ಕೋವಿಡ್ ಕಾರಣಕ್ಕೆ, ವಯೋಸಹಜ ಅನಾರೋಗ್ಯ, ಅಪಘಾತ ಹೀಗೆ ನಾನಾ ಕಾರಣಕ್ಕೆ ಚಂದನವನದ ಕೆಲವರು ಈ ವರ್ಷ ಸಾವನ್ನಪ್ಪಿದ್ದರು. ಹಿರಿಯ ನಟಿ ಜಯಂತಿ ಅವರಿಂದ ಹಿಡಿದು ಪುನೀತ್ ರಾಜಕುಮಾರ್ ಅವರ ವರೆಗೆ ಘಟಾನುಘಟಿ ಗಣ್ಯರು ಇಹಲೋಕ ತ್ಯಜಿಸಿದ್ದಾರೆ. ಹೀಗೆ ಈ ವರ್ಷ ನಮ್ಮಿಂದ ದೂರವಾದ ಕನ್ನಡ ಚಿತ್ರರಂಗದ ಕಲಾವಿದರ ಒಮ್ಮೆ ನೆನೆಯೋಣ….
1. ರಾಮು
ಕನ್ನಡ ಚಿತ್ರರಂಗದಲ್ಲಿ ‘ಕೋಟಿ ರಾಮು’ ಎಂದೇ ಪ್ರಖ್ಯಾತಿ ಗಳಿಸಿದ್ದ ನಿರ್ಮಾಪಕ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಿಸುವುದಕ್ಕೆ ಫೇಮಸ್ ಆಗಿದ್ದವರು. ಎ.ಕೆ 47, ಸಿಂಹದ ಮರಿ, ಲಾಕಪ್ ಡೆತ್, ಸರ್ಕಲ್ ಇನ್ಸ್ಪೆಕ್ಟರ್, ಚಾಮುಂಡಿ, ಭಾವ ಬಾಮೈದ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ.
ರಾಮು ಅವರು ಈ ವರ್ಷ ಕೋವಿಡ್ ವೈರಸ್ ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಎಪ್ರಿಲ್ 26, 2021 ರಂದು ಕೋವಿಡ್ 19 ಸೋಂಕಿಗೆ ಬಲಿಯಾದರು.
2. ಜಯಂತಿ
ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಪ್ರಸಿದ್ಧರಾಗಿದ್ದವರು ಜಯಂತಿ. ಚಿತ್ರರಂಗದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಜಯಂತಿ ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಜುಲೈ 26, 2021 ರಂದು, ತಮ್ಮ 76 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು.
3. ಸತ್ಯಜಿತ್
ಖಳನಟನಾಗಿ ಮತ್ತು ಪೋಷಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಸತ್ಯಜಿತ್ ಅಲಿಯಾಸ್ ನಿಜಮುದ್ದಿನ್ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವರ್ಷಾಂತರಗಳಿಂದ ಡಯಾಬಿಟಿಸ್ ಮತ್ತು ಗ್ಯಾಂಗ್ರೀನ್ ಕಾಯಿಲೆಯಿಂದ ಬಳಲುತ್ತಿದ್ದ ಸತ್ಯಜಿತ್ ಅವರು ಇದೆ ವರ್ಷ ಆಕ್ಟೋಬರ್ 10 ರಂದು ನಿಧನರಾದರು.
4. ಸಂಚಾರಿ ವಿಜಯ್:
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಸದಭಿರುಚಿ ಚಿತ್ರಗಳಲ್ಲಿ ನಟಿಸುವುದರಲ್ಲಿ ಗುರುತಿಸಿಕೊಂಡಿದ್ದರು. `ನಾತಿ ಚರಾಮಿ’,`ನಾನು ಅವನಲ್ಲ ಅವಳು’,’ತೆಲೆದಂಡ’,’ 6ನೇ ಮೈಲಿ’, ‘ಆಕ್ಟ್ ೧೯೭೮’ ಮುಂತಾದ ಸಿನಿಮಾಗಳಲ್ಲಿ ವಿಜಯ ಅವರು ನಟಿಸಿದ್ದರು. ಕೇವಲ ನಟನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ಕೂಡ ವಿಜಯ್ ಸಕ್ರಿಯರಾಗಿದ್ದರು.
ಸ್ನೇಹಿತನ ಜೊತೆ ಬೈಕ್ ಸವಾರಿ ಮಾಡುತ್ತಿದ್ದಾಗ ವಿಜಯ ಅವರಿಗೆ ಅಪಘಾತವಾಗಿ ತಲೆಗೆ ತುಂಬಾ ದೊಡ್ಡ ಪೆಟ್ಟುಬಿದ್ದಿತ್ತು. ಆರಂಭದಲ್ಲಿ ವಿಜಯ್ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಜೂನ್ 15ರಂದು ನಿಧನರಾದರು. ಅವರ ಅಂಗಗಳನ್ನು ವಿಜಯ್ ಕುಟುಂಬ ದಾನ ಮಾಡಿ ಅಂತ್ಯಕ್ರಿಯೆ ನಡೆಸಿತ್ತು..
5. ಪುನೀತ್ ರಾಜಕುಮಾರ್:
ಈ ವರ್ಷ ಕನ್ನಡಿಗರನ್ನು ಅತಿ ಹೆಚ್ಚಾಗಿ ಕಾಡಿದ ಸಾವೆಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಪುನೀತ್ ಅವರು ಅಕ್ಟೋಬರ್ 29ರಂದು ಬೆಳಗ್ಗೆ ಹಠಾತ್ ಹೃದಯಸ್ತಂಭನದಿಂದಾಗಿ ನಮ್ಮನ್ನೆಲ್ಲಾ ಅಗಲಿದ್ದರು. ಈ ಸುದ್ದಿ ಇಡೀ ಕರ್ನಾಟಕಕ್ಕೆ ದಿಗ್ಭ್ರಮೆಯಾಗಿ ಬಡಿದಿತ್ತು,. ಅವರು ನಮ್ಮನ್ನು ಅಗಲಿ ಇಂದಿಗೆ ಸುಮಾರು 50 ದಿನಗಳು ಕಳೆದಿದ್ದರೂ ಈಗಲೂ ಸಹ ಅವರ ನಿಧನದ ಸುದ್ದಿಯನ್ನು ಕನ್ನಡಿಗರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಎಲ್ಲರಿಗೂ ಗೊತ್ತಿರುವ ಹಾಗೆ ಪುನೀತ್ ರಾಜ್ ಕುಮಾರ್ ಅವರು ಹುಟ್ಟಿನಿಂದಲೇ ಕಲಾವಿದ. ಅವರು ಆರು ತಿಂಗಳು ಮಗುವಾಗಿದ್ದಾಗಲೇ ತಂದೆಯ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆನಂತರ ಬಾಲಕಲಾವಿದನಾಗಿ ಎರಡು ನಕ್ಷತ್ರ, ಬೆಟ್ಟದ ಹೂವು, ಭಕ್ತಪ್ರಹ್ಲಾದ, ಚಲಿಸುವ ಮೋಡಗಳು, ಭಾಗ್ಯವಂತ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದರು. ಅಷ್ಟೇ ಅಲ್ಲದೆ ಬಾಲಕಲಾವಿದನಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು.
ಇನ್ನೂ 2002ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪುನೀತ್ ರಾಜ್ ಕುಮಾರ್ ಅವರು ಮತ್ತೆ ತಿರುಗಿ ನೋಡಲೇ ಇಲ್ಲ ಅಭಿ, ಆಕಾಶ್, ಅರಸು, ಜಾಕಿ, ವಂಶಿ, ರಾಜಕುಮಾರ ಹೀಗೆ ಅನೇಕ ಯಶಸ್ವಿ ಚಿತ್ರಗಳನ್ನು ಪುನೀತ್ ಕನ್ನಡಿಗರಿಗೆ ನೀಡಿದ್ದಾರೆ.
6. ಶಿವರಾಮ್:
ಕನ್ನಡ ಚಿತ್ರರಂಗದಲ್ಲಿ ಸುಮಾರು 5 ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶಿವರಾಂ ಅವರು ಇತ್ತೀಚಿಗೆ ಅಂದರೆ ಡಿಸೆಂಬರ್ 4 ರಂದು ನಿಧನರಾದರು. ಕಾರು ಅಪಘಾತದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿದ್ದ ಶಿವರಾಂ ಅವರು ಮನೆಯಲ್ಲಿ ಕೂಡ ಪ್ರಜ್ಞೆ ತಪ್ಪಿ ಬಿದ್ದು ತಲೆಗೆ ಮತ್ತಷ್ಟು ಮಾಡಿಕೊಂಡಿದ್ದರು. ಪರಿಣಾಮ ಮೆದುಳಿನಲ್ಲಿ ರಕ್ತಸ್ರಾವವಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ ನಾಲ್ಕರಂದು ನಿಧನರಾದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
