ಪಂಜಾಬ್ ನ ಖ್ಯಾತ ಗಾಯಕರಾದ ಸಿಧು ಮೂಸೆ ವಾಲಾ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಐವರು ವೈದ್ಯರ ಸಮಿತಿ ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತಿಳಿದ ಆತಂಕಕಾರಿ ಸಂಗತಿ ಎಂದರೆ ಸಿಧು ಮೂಸೆ ವಾಲಾ ಅವರ ದೇಹದಲ್ಲಿ ಎರಡು ಡಜನ್ ಗಿಂತಲೂ ಅಧಿಕ ಬುಲೆಟ್ ಹೊಕ್ಕಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ನ ಮಾನ್ಸಾದಲ್ಲಿ ಭಾನುವಾರ ಎಸ್ಯುವಿಯನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ ಸಿಧು ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿಸಲಾಗಿದೆ. ಅವರ ಅಂಗಗಳ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಂಜಾಬ್ನ ಮಾನ್ಸಾ ಪೊಲೀಸ್ ಠಾಣೆಯಲ್ಲಿ ಮೂಸೆ ವಾಲಾ ಅವರ ಕಾರನ್ನು ಪೊಲೀಸರು ಪರೀಕ್ಷೆಗೆ ಒಳಪಡಿಸಿದ್ದಾರೆ. ಕಾರಿನ ಮುಂಭಾಗ ಮತ್ತು ಎಡ ಬಲ ಭಾಗಗಳಲ್ಲಿ ಗುಂಡಿನಿಂದ ತೂತುಗಳಾಗಿವೆ. ಸುಮಾರು 30 ಗುಂಡುಗಳನ್ನು ಕಾರಿನ ಮೇಲೆ ಹಾರಿಸಲಾಗಿದೆ. ಹೀಗಾಗಿ ಮೂರು ದಿಕ್ಕುಗಳಿಂದ ಗುಂಡಿನ ದಾಳಿ ನಡೆಸಲಾಗಿದೆ ಎನ್ನುವುದು ಗೊತ್ತಾಗಿದೆ.
ಇದರ ಕುರಿತು ಪ್ರತಿಕ್ರಿಯಿಸಿದ ಸಿದ್ದು ತಂದೆ “ಭಾನುವಾರ, ನನ್ನ ಮಗ ತನ್ನ ಸ್ನೇಹಿತರಾದ ಗುರ್ವಿಂದರ್ ಸಿಂಗ್ ಮತ್ತು ಗುರುಪ್ರೀತ್ ಸಿಂಗ್ ಜತೆ ಥಾರ್ ಕಾರ್ನಲ್ಲಿ ತೆರಳಿದ್ದ. ಆತ ಬುಲೆಟ್ ಪ್ರೂಫ್ ಫಾರ್ಚುನರ್ ತೆಗೆದುಕೊಂಡು ಹೋಗಿರಲಿಲ್ಲ. ಮತ್ತು ಇಬ್ಬರು ಭದ್ರತಾ ಸಿಬ್ಬಂದಿಯನ್ನು ಕೂಡ ಕರೆದೊಯ್ದಿರಲಿಲ್ಲ. ನಾನು ಬೇರೊಂದು ಕಾರಿನಲ್ಲಿ ಇಬ್ಬರು ಗನ್ಮ್ಯಾನ್ಗಳ ಜತೆ ತೆರಳಿದ್ದೆ” ಎಂದು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
