fbpx
ಸಮಾಚಾರ

ಸಂಸದ ಜಿಸಿ ಚಂದ್ರಶೇಖರ್ ವಿರೋಧದ ಬಳಿಕ ಎಚ್ಚೆತ್ತುಕೊಂಡ ಬ್ಯಾಂಕ್ ಆಫ್ ಬರೋಡ: ಕನ್ನಡಿಗನ ಮೇಲೆ ದರ್ಪ ತೋರಿದ ಸಿಬ್ಬಂದಿಯ ಮೇಲೆ ಕ್ರಮಕ್ಕೆ ಸೂಚನೆ

2014ರ ನಂತರ ಬದಲಾದ ಐಬಿಪಿಎಸ್ ನಿಯಮಗಳ ಪರಿಣಾಮ ಕರ್ನಾಟಕದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡಿಗರಿಗಿಂತ ಹೊರರಾಜ್ಯದ ಸಿಬ್ಬಂದಿಗಳೇ ಹೆಚ್ಚು ಆಯ್ಕೆಯಾಗುತ್ತಿದ್ದಾರೆ. ಹೀಗೆ ಎಲ್ಲೆಲ್ಲಿಂದಲೋ ಬಂದು ಕನ್ನಡ ಕಲಿಯದೇ ಪರ ಭಾಷೆಗಳಲ್ಲೇ ವ್ಯವಹಾರ ನಡೆಸಿ ಸ್ಥಳೀಯ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಕನ್ನಡಿಗರು ಆಕ್ರೋಶವನ್ನು ವ್ಯಕ್ತಪಡಿಸೋದು ಆಗಾಗ ಕೇಳಿಬರುತ್ತಲೇ ಇರುತ್ತದೆ. ಕನ್ನಡನಾಡಿನ ಗ್ರಾಮೀಣ ಭಾಗದ ಜನರು ಸೇರಿದಂತೆ ನಗರ ಪ್ರದೇಶದ ಜನರು ಕೂಡ ಬಾರದ ಭಾಷೆಯಿಂದ ಬ್ಯಾಂಕ್ ಗಳಲ್ಲಿ ಸರಿಯಾಗಿ ವ್ಯವರಿಸಲು ಪರದಾಡುವ ಸ್ಥಿತಿ ಎದುರಾಗಿದೆ.

ಭಾಷೆಯ ವಿಚಾರವಾಗಿ ಕನ್ನಡಿಗ ಗ್ರಾಹಕರ ಮೇಲೆ ಹಿಂದಿವಾಲಾ ಬ್ಯಾಂಕ್ ಅಧಿಕಾರಿ ರೌಡಿಸಂ ನಡೆಸಿರುವ ಮತ್ತೊಂದು ಘಟನೆ ಎರಡ್ಮೂರು ದಿನಗಳಿಂದ ಎಲ್ಲೆಡೆ ಸುದ್ದಿಯಾಗುತ್ತಿದೆ. ಈ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಗ್ರಾಮವೊಂದರ ಬ್ಯಾಂಕ್ ಆಫ್ ಬರೋಡದಲ್ಲಿ. ಈ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬ ಸ್ಥಳೀಯ ಗ್ರಾಹಕನೊಬ್ಬನ ಮೇಲೆ ಗೂಂಡಾಗಿರಿ ನಡೆಸಿದ್ದು ಅಹಂಕಾರಿ ಅಧಿಕಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

 

 

ವಿಡಿಯೋದಲ್ಲಿ ಇರುವುದೇನು ?
ಈ ಬ್ಯಾಂಕ್ ಗೆ ಹೋಗಿದ್ದ ಊರಿನ ರೈತನೊಬ್ಬ ತನ್ನ ಖಾತೆಗೆ ಸಂಬಂದಿಸಿದ ವಿಚಾರವಾಗಿ ಸಿಬ್ಬಂದಿಯ ಬಳಿ ವ್ಯವಹರಿಸಲು ಮುಂದಾಗುತ್ತಾನೆ. ಆದರೆ ಕನ್ನಡ ತಿಳಿಯದ ಹಿಂದಿ ಅಧಿಕಾರಿ ನೇರವಾಗಿ ರೈತನ ಮೇಲೆ ಎರಗಿ ಬಿದ್ದು ಹಿಂದಿ ಮಾತನಾಡುವಂತೆ ಅವಾಜ್ ಹಾಕುತ್ತಾನೆ. ಆಗ ರೈತನು “ನೀವು ಕನ್ನಡದಲ್ಲಿ ಮಾತನಾಡಿ” ಎಂದು ವಿನಯವಾಗಿ ಕೇಳಿಕೊಂಡರೂ ಅನುಚಿತವಾಗಿಯೇ ವರ್ತಿಸುವ ಅಧಿಕಾರಿ “ಬ್ಯಾಂಕ್ ನಿಂದ ಆಚೆ ಹೋಗು, ಇಲ್ಲದಿದ್ದರೆ ಪೊಲೀಸರನ್ನ ಕರೆಸುತ್ತೇನೆ” ಎಂದು ರೈತನ ಮೇಲೆ ಧಮ್ಕಿ ಹಾಕುತ್ತಾನೆ.

ಬ್ಯಾಂಕ್ ಅಧಿಕಾರಿಯ ದಬ್ಬಾಳಿಕೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಸ್ಥಳೀಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರ ಗಮನಕ್ಕೆ ಬಂದು ಕೂಡಲೇ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿಡಿಯೋವನ್ನು ಶೇರ್ ಮಾಡಿ ಬ್ಯಾಂಕ್ ಆಫ್ ಬರೋಡ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿ ಸದರಿ ವಿಚಾರದ ಬಗ್ಗೆ ಗಮನಹರಿಸುವಂತೆ ಆಗ್ರಹಿಸಿದ್ದರು.

 

 

ಕರ್ನಾಟಕದಲ್ಲಿ ಕನ್ನಡ ಸೇವೆ ಕೊಡಲ್ಲ ಅಂತ ಒಬ್ಬ ಬ್ಯಾಂಕ್ ಆಫ್ ಬರೋಡದ ಅಧಿಕಾರಿ ಹೇಳುವುದು ಎಷ್ಟು ಸೂಕ್ತ! ಮಾನ್ಯ ನಿರ್ಮಲ ಸೀತಾರಾಮನ್ ಅವರೇ ನೋಡಿ 2014ರಲ್ಲಿ #IBPSಗೆ ತಂದ ನಿಯಮ ಇವತ್ತು ಎಲ್ಲಿ ತಲುಪಿದೆ ಎಂದು!
#IBPSmosa ಮೊದಲು ನಿಲ್ಲಬೇಕು” ಎಂದು ಟ್ವೀಟ್ ಮಾಡಿದ್ದರು.

ಸಂಸದರು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿದ ಬಳಿಕ ವಿಡಿಯೋ ಕಾಡ್ಗಿಚ್ಚಿನಂತೆ ಸೋಷಿಯಲ್ ಮೀಡಿಯಾದಾದ್ಯಂತ ಬ್ಯಾಂಕ್ ಆಫ್ ಬರೋಡ ವಿರುದ್ಧ ಎಲ್ಲೆಡೆ ವಿರೋಧ ಅಸಮಧಾನ ವ್ಯಕ್ತವಾಗಿತ್ತು. ಕನ್ನಡಿಗರ ಆಕ್ರೋಶದ ನಂತರ ಕೊನೆಗೂ ಎಚ್ಚೆತ್ತುಕೊಂಡ ಬ್ಯಾಂಕ್ ಆಫ್ ಬರೋಡ ಇದೀಗ ಕನ್ನಡಿಗರ ಬಳಿ ಸ್ಪಷ್ಟನೆ ನೀಡಿದ್ದು ಮುಂದೆ ಈ ರೀತಿಯ ತಪ್ಪುಗಳಾಗದಂತೆ ಭರವಸೆ ನೀಡಿದೆ.

 

 

ಸಂಸದ ಜಿಸಿ ಚಂದ್ರಶೇಖರ್ ಅವರ ಫೇಸ್ಬುಕ್ ಮತ್ತು ಟ್ವಿಟರ್ ಪೋಸ್ಟ್ ಗಳಿಗೆ ಬ್ಯಾಂಕ್ ಆಫ್ ಬರೋಡ ಅಧಿಕೃತ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ. “ಮಾನ್ಯರೇ, ನಾವು ಈಗಾಗಲೇ ಈ ವಿಷಯದ ಬಗ್ಗೆ ಗಮನ ಹರಿಸಿದ್ದೇವೆ ಮತ್ತು ಹೆಚ್ಚಿನ ಆದ್ಯತೆಯ ಮೇಲೆ ಸೂಕ್ತ ಪರಿಹಾರಕ್ಕಾಗಿ ನಮ್ಮ ಆಂತರಿಕ ತನಿಖೆಯ ಅಡಿಯಲ್ಲಿದೆ. ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯ ಭಾಷೆಯಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುವುದು ಯಾವಾಗಲೂ ನಮ್ಮ ಪ್ರಯತ್ನವಾಗಿದೆ. ಏತನ್ಮಧ್ಯೆ, ದಯವಿಟ್ಟು ನಿಮ್ಮ ತಾಳ್ಮೆಯನ್ನು ನಾವು ವಿನಂತಿಸುತ್ತೇವೆ.” ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಇನ್ನು ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿರುವ ಬ್ಯಾಂಕ್ ಅಧಿಕಾರಿಗಳ ದರ್ಪವನ್ನು ಅಡಗಿಸಲು ಧ್ವನಿ ಎತ್ತಿದ ಸಂಸದ ಜಿಸಿ ಚಂದ್ರಶೇಖರ್ ಅವರಿಗೆ ನೆಟ್ಟಿಗರು ಕೃತಜ್ಞತೆ ತಿಳಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top