fbpx
ಸಮಾಚಾರ

ಒಕ್ಕಲಿಗರು, ದಲಿತರು, ಲಿಂಗಾಯತರ ನಂತರ ಜೈನ ಮತ್ತು ಬೌದ್ಧರ ಕೋಪಕ್ಕೆ ತುತ್ತಾದ ಚಕ್ರತೀರ್ಥ ಸಮಿತಿ: ಮಹಾವೀರ ಮತ್ತು ಬುದ್ದರಿಗೆ ಅವಮಾನ ಆರೋಪ

ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹೆಚ್ಚಾಗಿ ಡಬಲ್ ಮೀನಿಂಗ್ ಪೋಲಿ ಪೋಸ್ಟ್ ಗಳು, ಮಹನೀಯರ ಬಗ್ಗೆ ಕೀಳು ಮಟ್ಟದ ಅವಮಾನಕಾರಿ ಪೋಸ್ಟ್ ಹಾಕುವ ಮೂಲಕ ಸದ್ದುಮಾಡುತ್ತಿದ್ದ ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ಸದ್ಯ ರಾಜ್ಯದಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ಧ ಸಾಹಿತಿಗಳು ಆಕ್ರೋಶ ಮುಂದುವರಿಸಿ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದಾರೆ.

ಈ ಮದ್ಯೆ ರೋಹಿತ್‌ ಚಕ್ರತೀರ್ಥ ಮಾಡಿದ್ದ ಹಳೆಯ ಟ್ರೋಲ್‌ಗಳು, ಅಸಂಬಂಧ ಪೋಸ್ಟ್‌ಗಳು, ಕಮೆಂಟ್‌ಗಳು ಈಗ ಒಂದಾದಾಗಿ ಚರ್ಚೆಯ ಮುನ್ನೆಲೆಗೆ ಬರುತ್ತಿವೆ. ಕುವೆಂಪು, ದಲಿತ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಅನೇಕ ಮಹನೀಯರ ಬಗ್ಗೆ ಕೀಳು ಮಟ್ಟದಲ್ಲಿ ಮಾಡಲಾಗಿದ್ದ ಪೋಸ್ಟ್ಗಳು ವೈರಲ್ ಆಗತೊಡಗಿವೆ. ಇದೀಗ ರೋಹಿತ್ ಚಕ್ರತೀರ್ಥನ ವಿರುದ್ಧ ಹೊರ ಆರೋಪವೊಂದು ಕೇಳಿಬಂದಿದೆ. ಕುವೆಂಪು, ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಕ್ಕಾಗಿ ಒಕ್ಕಲಿಗರು, ಲಿಂಗಾಯತರು, ದಲಿತರ ಕೋಪಕ್ಕೆ ತುತ್ತಾಗಿದ್ದ ಚಕ್ರತೀರ್ಥ ಇದೀಗ ಜೈನ ಮತ್ತು ಬೌದ್ದ್ದರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

 

 

ಆಕ್ರೋಶಕ್ಕೆ ಕಾರಣವೇನು?
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪರಿಷ್ಕರಿಸಿರುವ ಪುಸ್ತಕದಲ್ಲಿ ಬೌದ್ಧ ಧರ್ಮದ ಗೌತಮ ಬುದ್ಧರನ್ನು ಮತ್ತು ಜೈನ ಧರ್ಮದ ಮಹಾವೀರರನ್ನು ಏಕವಚನದಲ್ಲಿ ಸಂಭೋದಿಸಿ ಅಗೌರವಯುತವಾಗಿ ಬರೆಯಲಾಗಿದೆ ಜೈನ ಮತ್ತು ಬೌದ್ಧರು ಆರೋಪಿಸಿದ್ದಾರೆ. ಆದರೆ ಬ್ರಾಹ್ಮಣ ಸುಧಾರಕರಾದ ಮದ್ವಾಚಾರ್ಯ, ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ ಅವರನ್ನು ಬಹುವಚನದಲ್ಲಿ ಗೌರವಯುತವಾಗಿ ಸಂಭೋದಿಸಲಾಗಿದೆ. ಬ್ರಾಹ್ಮಣರನ್ನು ಮಾತ್ರ ಗೌರವವಾಗಿ ಸಂಭೋದಿಸಿ ಬುದ್ಧ ಮತ್ತು ಜೈನ ತೀಥಂಕರರನ್ನು ಏಕವಚನದಲ್ಲಿ ಸಂಭೋದಿಸುವುದು ಯಾವ ರೀತಿಯ ನ್ಯಾಯ? ಎಂಬುದು ಜೈನರ ಮತ್ತು ಬುದ್ಧರ ಪ್ರಶ್ನೆ.

ಇನ್ನು, ಹಾಗೂ ಜೈನ ಮತ್ತು ಬೌದ್ಧ ಧರ್ಮವನ್ನು ‘ಮತಗಳು’ ಎಂದು ಉದ್ದೇಶಪೂರ್ವಕವಾಗಿಯೇ ಬರೆಯಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಹಿಂದೂ ಧರ್ಮವನ್ನು ‘ಧರ್ಮ’, ‘ಸನಾತನ ಧರ್ಮ’, ಎಂದು ಹಾಗೂ ಇಸ್ಲಾಂ, ಕ್ರೈಸ್ತ ಧರ್ಮವನ್ನು ‘ಧರ್ಮ’ ಎಂಬುದೇ ಉಲ್ಲೇಖಿಸಿಲಾಗಿದೆ ಎಂದು ಜೈನರು ಮತ್ತು ಬೌದ್ಧರು ತಿಳಿಸಿದ್ದಾರೆ. ಹಾಗಾಗಿ ಜೈನ ಮತ್ತು ಬೌದ್ಧ ಧರ್ಮವನ್ನು ‘ಧರ್ಮ’ ಎಂದು ಉಲ್ಲೇಖಿಸುವ ಬದಲು ‘ಮತ’ ಎಂದು ಕರೆದಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

 

 

ಹಾಗೆಯೇ ಜೈನ ತೀಥಂಕರರ ಬಗ್ಗೆ ಹೇಳುವಾಗ ಪದೇ ಪದೇ ‘ನಂಬಿಕೆಯಿದೆ’ ‘ನಂಬಲಾಗುತ್ತದೆ’ ಎಂಬಂತ ಪದಗಳನ್ನ ಉದ್ದೇಶಪೂರ್ವಗಿಯೇ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. (ಉದಾ: ಜೈನ ಧರ್ಮದಲ್ಲಿ 24 ಮಂದಿ ತೀಥಂಕರರಿದ್ದಾರೆ ಎಂಬ ನಂಬಿಕೆಯಿದೆ,) ಇಲ್ಲಿ ಜೈನ ಧರ್ಮದಲ್ಲಿ 24 ತೀಥಂಕರರು ಇರುವ ವಿಚಾರ ಎಲ್ಲರಿಗೂ ಗೊತ್ತಿರುವುವಂತದ್ದೇ. ಈ ವಿಷಯವನ್ನು ಮಕ್ಕಳಿಗೆ ಹೇಳಿಕೊಡುವಾಗ ನೇರವಾಗಿ ಹೇಳಿಕೊಡಬೇಕೆ ಹೊರತು ನಂಬಿಕೆಯಿದೆ, ನಂಬಲಾಗುತ್ತದೆ ಎಂಬ ಪದಗಳನ್ನ ಬಳಸಿ ಅಡ್ಡಗೋಡೆಮೇಲೆ ದೀಪ ಇಡಬಾರದು ಎಂಬುದು ಜೈನರ ವಾದ. ಹೀಗೆ ಮಾಡಿರುವುದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಜೈನಿಯರು ಆರೋಪಿಸಿದ್ದಾರೆ.

ಇಡೀ ರಾಜ್ಯದ ಮಕ್ಕಳು ಓದಿ ಕಲಿಯಬೇಕಿರುವ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವಾಗ ಇಂಥ ಸಣ್ಣ ಪುಟ್ಟ ವಿಚಾರಗಳನ್ನೂ ಗಮನಿಸಿ ಜವಾಬ್ದಾರಿಯುತವಾಗಿ ಪ್ರಕಟಿಸಬೇಕಿತ್ತು. ಹೀಗೆ ಮನಸೋಯಿಚ್ಚೆ ಬರೆದು ಈಗ ಎಲ್ಲರಿಂದರೂ ಛೀ…ಥೂ… ಎನ್ನಿಸಿಕೊಳ್ಳುವಂತ ಅಗತ್ಯವೇನಿತ್ತು ಎಂಬುದು ಪ್ರಜ್ಞಾವಂತ ಕನ್ನಡಿಗರ ಸರಳ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ರೋಹಿತ್ ಚಕ್ರತೀಥನ ಸಮಿತಿಯ ಅವಾಂತರಗಳು ಬಗೆದಷ್ಟು ಹೆಚ್ಚಾಗಿ ಹೊರ ಬೀಳುತ್ತಿದ್ದು ಮುಂದೆ ಇನ್ನೂ ಯಾವೆಲ್ಲಾ ವಿವಾದಗಳು ಭುಗಿಲೇಳಿವೆ ಎಂಬುದನ್ನು ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top