ಮಂಗಳೂರು ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಘಟಕ ಕಾಲೇಜಿನ ತರಗತಿಯೊಂದರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಫೋಟೋವನ್ನು ಮಂಗಳವಾರ ಅಳವಡಿಸಲಾಗಿತ್ತು. ಇದನ್ನು ಕಾಲೇಜಿನ ಇತರ ವಿದ್ಯಾರ್ಥಿಗಳು ತಕ್ಷಣ ಪ್ರಾಂಶುಪಾಲೆಯ ಗಮನಕ್ಕೆ ತಂದಿದ್ದು, ಬಳಿಕ ಅದನ್ನು ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಕೆಲ ವಿದ್ಯಾರ್ಥಿಗಳು ಸಾವರ್ಕರ್ ಭಾವಚಿತ್ರವನ್ನು ತರಗತಿಯೊಂದರ ಗೋಡೆಯಲ್ಲಿ ಕರಿಹಲಗೆ ಬಳಿ ಅಳವಡಿಸಿದ್ದರು. ಭಾವಚಿತ್ರ ಅಳವಡಿಸುತ್ತಿರುವ ವಿಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದರು. ಕೆಲವು ವಿದ್ಯಾರ್ಥಿಗಳು ಇದನ್ನು ಪ್ರಾಂಶುಪಾಲರಾದ ಅನಸೂಯ ರೈ ಅವರ ಗಮನಕ್ಕೆ ತಂದಿದ್ದರು ಎಂದು ಗೊತ್ತಾಗಿದೆ.
ಮಾತ್ರವಲ್ಲದೆ, ಕಾಲೇಜಿನ ಅನೇಕ ವಿದ್ಯಾರ್ಥಿಗಳು ಈ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದರು, ವಾಟ್ಸಪ್ ಸ್ಟೇಟಸ್ನಲ್ಲೂ ಹಾಕಿಕೊಂಡಿದ್ದರು. ಹೀಗಾಗಿ ಈ ಘಟನೆ ಹೊರಗೆ ಬಂದಿದ್ದು, ಬಳಿಕ ವೈರಲ್ ಆಗಿತ್ತು. ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ಹೋರಾಟಕ್ಕೆ ಪ್ರತಿಯಾಗಿ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಸಾವರ್ಕರ್ ಫೋಟೊ ಹಾಕಿದ್ದಾರೆ ಎನ್ನಲಾಗಿದೆ.
ಘಟನೆಯ ಬಳಿಕ ಕಾಲೇಜು ಮಂಗಳವಾರ ಬೆಳಗ್ಗೆ ಅನುಮತಿ ಇಲ್ಲದೆ ತರಗತಿಯೊಳಗೆ ಸಾವರ್ಕರ್ ಫೋಟೋ ಹಾಕಿದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ತಪ್ಪೊಪ್ಪಿಗೆ ಪಡೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
