ಇತ್ತೀಚಿನ ದಿನಗಳಲ್ಲಿ ಕಿರುತರೆ ಲೋಕದಲ್ಲಿ ಸಾವಿನ ಸುದ್ದಿ ನಮ್ಮ ಕಿವಿಗೆ ಅಪ್ಪಳಿಸುತ್ತಿರುವುದನ್ನು ನಾವು ನೋಡಿದ್ದೇವೆ. ಕೆಲವೊಬ್ಬರು ವೈದ್ಯರ ಎಡವಟ್ಟಿನಿಂದ ಮೃತಪಟ್ಟರೆ, ಇನ್ನು ಕೆಲವೊಬ್ಬರು ತಾವು ಮಾಡಿರುವ ತಪ್ಪಿನಿಂದ ಅಥವಾ ಬೇರೆ ಕಾರಣಗಳಿಗೆ ಸಾವನ್ನಪ್ಪಿರುವ ಬಗ್ಗೆ ಕೇಳಿದ್ದೇವೆ. ಇದೀಗ ಒಡಿಶಾದ ಕಿರುತೆರೆಯ ಖ್ಯಾತ ನಟಿ ರಶ್ಮಿರೇಖಾ ಭುವನೇಶ್ವರದ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇವರ ಸಾವಿನ ಸುತ್ತಾ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದೆ.
ಭುವನೇಶ್ವರದ ಬಾಡಿಗೆ ಮನೆಯಲ್ಲಿ ರಶ್ಮಿರೇಖಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದರು. ಆದರೆ ರಶ್ಮಿರೇಖಾ ಅವರ ತಂದೆ ನೀಡಿರುವ ದೂರಿನ ಆಧಾರದ ಮೇರೆಗೆ ಪ್ರಕರಣವನ್ನು ಧಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ರಶ್ಮಿರೇಖಾ ಅವರ ತಂದೆ ಮಾಡಿರುವ ಆರೋಪದ ಪ್ರಕಾರ “ಈ ಸಾವಿನ ಹಿಂದೆ ನನ್ನ ಮಗಳ ಬಾಯ್ಫ್ರೆಂಡ್ ಸಂತೋಷ್ ಕೈವಾಡ ಇದೆ. ಶನಿವಾರ ಬೆಳಗ್ಗೆ ನಾವು ಮಗಳಿಗೆ ಕರೆ ಮಾಡಿದ್ದೆವು. ಆದರೆ, ಅವಳು ಕರೆ ಸ್ವೀಕರಿಸಲಿಲ್ಲ. ನನ್ನ ಮಗಳ ಸಾವಿನ ವಿಷಯವನ್ನು ಸಂತೋಷ್ ನನಗೆ ಹೇಳಿದ್ದ. ಸಂತೋಷ್ ಹಾಗೂ ನನ್ನ ಮಗಳು ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ನಮಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ” ಎಂದು ಹೇಳಿದ್ದಾರೆ.
ಇದೀಗ ಇವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣವೇನೆಂಬುದು ತಿಳಿಯುತ್ತದೆ. ಅಸಲಿಗೆ ರಶ್ಮಿರೇಖಾ ಅವರು ನನ್ನ ಸಾವಿಗೆ ನಾನೆ ಕಾರಣ ಎಂದು ಡೆತ್ ನೋಟ್ ಬರೆದಿದ್ದರು, ಆದರೆ ಇವರ ತಂದೆ ನೀಡಿರುವ ಆರೋಪದ ಮೇಲೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
