ಗೃಹ ಪ್ರವೇಶದ ವೇಳೆ ಮನೆಗೆ ನುಗ್ಗಿದ ಮಂಗಳಮುಖಿಯರ ಗುಂಪೊಂದು ಕೇಳಿದಷ್ಟು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಿನ್ನೆ ಬೆಂಗಳೂರಿನ ಕಲ್ಕೆರೆ ಚೆನ್ನಸಂದ್ರದಲ್ಲಿ ಲೋಕೇಶ್ ಎನ್ನುವವರ ಮನೆಯ ಗೃಹ ಪ್ರವೇಶ ಪೂಜೆ ನಡೆಯುತ್ತಿದ್ದ ವೇಳೆ ಮನೆಗೆ ನುಗ್ಗಿದ ಮುಗಳ ಮುಖಿಯರು 25 ಸಾವಿರ ಹಣ ನೀಡುವಂತೆ ಪೀಡಿಸಿದ್ದಾರೆ. ಆದರೆ ಮನೆಯವರು ಅಷ್ಟು ಕೊಡಲು ಸಾಧ್ಯವಿಲ್ಲ ಎಂದಾಗ ಗೃಹ ಪ್ರವೇಶದ ಮನೆಯಲ್ಲಿ ದಾಂಧಲೆ ನಡೆಸಿದ್ದರು.
ತೃತೀಯ ಲಿಂಗಿಗಳು ಶುಭ ಸಮಾರಂಭಗಳಿಗೆ ಬಂದರೆ ಶುಭ ಎಂಬುದು ಉತ್ತರ ಭಾರತೀಯರ ನಂಬಿಕೆ. ಅದು ನಮ್ಮಲ್ಲಿಲ್ಲ. ತಮ್ಮ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಬಂದು ದಬ್ಬಾಳಿಕೆ ನಡೆಸಿದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ. pic.twitter.com/IyFE3xfbNC
— ಸಾಮಾನ್ಯ ಕನ್ನಡಿಗ SAmanya KAnnadiga (@sakannadiga) June 25, 2022
ಹೋಗಲಿ ಶುಭಕಾರ್ಯ ಎನ್ನುವ ಕಾರಣದಿಂದ ಮೊದಲು ೧ ಸಾವಿರ ರೂಗಳನ್ನು ಲೋಕೇಶ್ ನೀಡಿದ್ದಾರೆ. ಆದರೆ ನಮಗೆ ೨೫ ಸಾವಿರ ರೂ. ನೀಡಲೇಬೇಕೆಂದು ಮಂಗಳಮುಖಿಯರು ಹಠಹಿಡಿದಿದ್ದಾರೆ. 25 ಸಾವಿರ ಕೊಡದಿದ್ದರೆ ಇನ್ನಷ್ಟು ಜನ ಬಂದು ಗಲಾಟೆ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ. ಈ ವೇಳೆ ಮನೆ ಮಾಲೀಕರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿದ್ದಾರೆ. ಅಶ್ಲೀಲ ಪದಗಳ ಬೈದು ಮನೆಯವರ ಮೇಲೆ ಹಲ್ಲೆ ಮಾಡುವ, ಚೇರ್ ಗಳನ್ನ ಒಡೆದು ಹಾಕಿ ಗಲಾಟೆ ಮಾಡುವ ದೃಶ್ಯ ಕ್ಯಾಮರಾದಲ್ಲಿ ಸರೆಯಾಗಿದೆ.
ಮುಂಗಳಮುಖಿಯರು ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಸಹಿಸಲಾಗದೇ ಲೋಕೇಶ್ ಅವರ ಪತ್ನಿ ಆಶಾ ಎಲ್ಲರನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಂಗಳಮುಖಿಯರು ಲೋಕೇಶ್ ಪತ್ನಿ ಆಶಾ ಅವರ ಕೆನ್ನೆಗೆ ಹೊಡೆದಿದ್ದಾರೆ. ನಂತರ ಗಲಾಟೆ ಮಾಡದಂತೆ ಬುದ್ಧಿ ಹೇಳಲು ಬಂದ ಸಂಬಂಧಿ ಮಹೇಂದ್ರ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲಿ ಲೋಕೇಶ್ ಸಂಬಂಧಿಯೊಬ್ಬರು ಹೊಯ್ಸಳ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಮನೆಯಿಂದ ಹೊರಬಂದು ಹೊರಗಿದ್ದ ಕುರ್ಚಿ ಒಡೆದು ಹಾಕಿ ಆಟೋದಲ್ಲಿ ಪರಾರಿಯಾಗಿದ್ದಾರೆ.
ಅಂದಹಾಗೆ ಮಂಗಳಮುಖಿಯರು ಮದುವೆ, ಗೃಹ ಪ್ರವೇಶ ಮತ್ತು ಇತರೆ ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ತೆರಳಿ ಹಣ ನೀಡುವಂತೆ ಬೇಡಿಕೆ ಇಡುತ್ತಾರೆ. ತಾವು ಕೇಳಿದಷ್ಟು ಹಣ ನೀಡುವಂತೆ ಕಾಟ ಕೊಡುತ್ತಾರೆ. ಮರ್ಯಾದೆಗೆ ಅಂಜಿಯಾದರೂ ಅವರು ಹಣ ನೀಡುತ್ತಾರೆ ಎಂದು ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
