ಚಂದನವನದ ಮಳೆ ಹುಡುಗ, ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಸಕಲ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಅಷ್ಟಕ್ಕೂ ಕ್ಷಮೆ ಕೇಳುವಂತ ತಪ್ಪನ್ನು ಗಣೇಶ್ ಅಂಥದ್ದೇನು ಮಾಡಿದ್ರು ಅಂತೀರಾ? ಅಂಥದ್ದೇನು ಇಲ್ಲ.. ಜುಲೈ 2 ಗಣೇಶ್ ಹುಟ್ಟುಹಬ್ಬವಿದ್ದು ಅಂದು ಆ ದಿನವನ್ನ ಅಭಿಮಾನಿಗಳ ಜೊತೆ ಸೇರಲು ಕಾರಣಾಂತರಗಳಿಂದ ಸಾಧ್ಯವಾಗುತ್ತಿಲ್ಲವಂತೆ.. ಈ ಕಾರಣಕ್ಕೆ ಪತ್ರವೊಂದನ್ನ ಬರೆದು ಗಣೇಶ್ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ಗಣೇಶ್ ಪತ್ರದ ಸಾರಾಂಶ ಈ ರೀತಿ ಇದೆ:
‘ಅಕ್ಕರೆಯ ಅಭಿಮಾನಿ ಬಂಧುಗಳಿಗೆ. ಎಲ್ಲರೂ ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇನೆ. ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕ ನನ್ನಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಹೆಜ್ಜೆ ಹಾಕಿ, ನನ್ನ ಯಶಸ್ಸನ್ನು ನಿಮ್ಮದೇ ಯಶಸ್ಸು ಎನ್ನುವಂತೆ ಸಂಭ್ರಮಿಸಿ ನೀವೆಲ್ಲರೂ ಖುಷಿಪಟ್ಟಿದ್ದೀರಿ. ಪ್ರತೀ ವರ್ಷವೂ ನನ್ನ ಹುಟ್ಟಿದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತೀವ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡೆಗಿನ ನಿಮ್ಮ ಈ ನಿಷ್ಕಲ್ಮಶ ಪ್ರೀತಿಭರಿತ ಅಭಿಮಾನಕ್ಕೆ ನಾನು ಸದಾ ಖುಣಿ’ ಎಂದು ಗಣೇಶ್ ಪತ್ರ ದಲ್ಲಿ ಬರೆದಿದ್ದಾರೆ.
🙏🙏🙏 pic.twitter.com/leLQkgBNjY
— Ganesh (@Official_Ganesh) June 28, 2022
ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಾನು ನಿಮ್ಮನ್ನೆಲ್ಲಾ ವೈಯಕ್ತಿಕವಾಗಿ ಭೇಟಿ ಮಾಡಿ, ನಿಮ್ಮೆಲ್ಲರ ಪ್ರೀತಿಯನ್ನು ಆಸ್ವಾದಿಸುತ್ತಾ ನಿಮ್ಮೊಡನೆಯೇ ಸಂಭ್ರಮಿಸಿ, ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯುವ ಹಂಬಲ ನನಗೂ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಹ ಸಮಯ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ಅನಿವಾರ್ಯ ಕಾರಣಗಳಿಂದಾಗಿ ನಾನು ನನ್ನ ಹುಟ್ಟಿದ ದಿನದಂದು ಅಂದರೆ ಜುಲೈ 2ರಂದು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ ಎಂದು ಗಣೇಶ್ ಪತ್ರದ ಮೂಲಕ ತಿಳಿಸಿದ್ದಾರೆ.
ನೀವೆಲ್ಲರೂ ಅಭಿಮಾನದಿಂದ ಪ್ರತೀ ಬಾರಿ ನನಗಾಗಿ ತರುವ ಹಾರ, ತುರಾಯಿ, ಕೇಕ್ ಇತ್ಯಾದಿಗಳ ಬದಲಿಗೆ ಅಗತ್ಯವಿರುವ ಕಡೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನನಗೆ ತಲುಪಿಸಿಬಿಡಿ’ ಎಂದು ಗಣೇಶ್ ಮನವಿ ಮಾಡಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
