ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರ ವಿರುದ್ಧ ಹೈದರಾಬಾದ್ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಟ ಕರಾಟೆ ಕಲ್ಯಾಣಿ ಅವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 153 (ಎ) ಐಪಿಸಿ ಮತ್ತು 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೇವಿ ಶ್ರೀ ಪ್ರಸಾದ್ ಇತ್ತೀಚೆಗಷ್ಟೇ ಹಲವು ಭಾಷೆಗಳಲ್ಲಿ ‘ಓ ಪರಿ’ ಎನ್ನುವ ಹಾಡೊಂದನ್ನು ಹೊರ ತಂದಿದ್ದರು. ಈ ಹಾಡಿನ ಸಾಹಿತ್ಯದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಹಾಗೂ ಧಾರ್ಮಿಕ ಪಠಣಗಳಿರುವ ಹಾಡಿನಲ್ಲಿ ನೃತ್ಯ ಮಾಡುವವರು ಅರೆಬರೆ ಬಟ್ಟೆ ಧರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಕರಾಟೆ ಕಲ್ಯಾಣಿ ಅನ್ನುವವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ದೇವಿ ಶ್ರೀ ಪ್ರಸಾದ್ ಬಿಡುಗಡೆ ಮಾಡಿರುವ ಹಾಡಿನಲ್ಲಿ ತುಂಡುಡುಗೆ ತೊಟ್ಟು ಮಹಿಳೆಯರು ನೃತ್ಯ ಮಾಡಿದ್ದಾರೆ. ಬಿಕಿನಿ ಧರಿಸಿ ಹುಡುಗಿಯರು ಶ್ಲೋಕ ಪಠಿಸಿದ್ದಾರೆ. ಇದು ಹಿಂದೂ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಇಂಥ ಪ್ರಚೋದನಾಕಾರಿ ಹಾಡುಗಳನ್ನು ಚಿತ್ರೀಕರಿಸುವ ಮೊದಲು ನಮ್ಮ ಭಾವನೆಗೆ ನೋವಾಗುತ್ತದೆ ಎನ್ನುವ ಯೋಚನೆ ಬೇಕು. ಹಿಂದೂ ಧರ್ಮ ಉಳಿಸಲು ಸಾಧ್ಯವಾಗದಿದ್ದರೂ ಅದನ್ನು ಅವಮಾನಿಸಬೇಡಿ. ಹಾಗಾಗಿ ನೀವು ಕ್ಷಮೆ ಕೇಳಲೇ ಬೇಕು. ಇಲ್ಲದಿದ್ದರೆ ನಿಮ್ಮ ಸ್ಟುಡಿಯೋಗೆ ನುಗ್ಗಿ ಪ್ರತಿಭಟನೆ ಮಾಡುತ್ತೇವೆ’ ಎಂದು ಕರಾಟೆ ಕಲ್ಯಾಣಿ ಎಚ್ಚರಿಕೆ ನೀಡಿದ್ದಾರೆ.
ದೇವಿ ಶ್ರೀ ಪ್ರಸಾದ್ ಅವರ ಹಾಡಿನ ಕುರಿತು ನವೆಂಬರ್ 2 ರಂದು ಲಲಿತ್ ಕುಮಾರ್ ಹಾಗೂ ನಟ ಕರಾಟೆ ಕಲ್ಯಾಣಿ ಅವರಿಂದ ನಮಗೆ ದೂರು ಬಂದಿದ್ದು, ಕಾನೂನು ಸಮಸ್ಯೆಯಾಗಿರುವುದರಿಂದ ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದು ಎಸಿಪಿ ಪ್ರಸಾದ್ ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
