ಕಾಂತಾರ ಸಿನಿಮಾ ಪ್ರಪಂಚಾದ್ಯಂತ ಬಹಳಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾ ಇದೀಗ ಬಾಕ್ಸ್ ಆಫೀಸ್ ಅನ್ನು ಸಹ ಧೂಳಿಪಟ ಮಾಡಿ ಮುಂದೆ ಸಾಗುತ್ತಿದೆ. ರಿಷಬ್ ಶೆಟ್ಟಿ ಅವರ ನಟನೆಯನ್ನು ಪ್ರೇಕ್ಷಕರು ಅಭಿನಂದಿಸಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಪಕ್ಕದ ರಾಜ್ಯಗಳಲ್ಲಿ ಕೂಡ ಕಾಂತಾರ ಹವಾ ಜೋರಾಗಿದೆ. ಅಷ್ಟೇ ಅಲ್ಲದೇ, ರಿಷಬ್ ಶೆಟ್ಟಿ ಮಾಡಿರುವ ಈ ಪಾತ್ರ ತೆಲುಗು ರಾಜ್ಯದಲ್ಲಿ ಮನೆಮಾತಾಗಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಇಲ್ಲಿದೆ. ಅಲ್ಲಿನ ತಹಶೀಲ್ದಾರರೊಬ್ಬರು ‘ಕಾಂತಾರ’ ರೀತಿ ವೇಷ ಹಾಕಿಕೊಂಡು ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಆಂಧ್ರ ಪ್ರದೇಶ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಗುಂಟೂರಿನ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವಿಜಯನಗರಂ ಜಿಲ್ಲೆಯ ಕೊತವಲಸದ ತಹಶೀಲ್ದಾರ್ ಪ್ರಸಾದ್ ರಾವ್ ಅವರು ‘ಕಾಂತಾರ’ ಸಿನಿಮಾದಲ್ಲಿ ಹೀರೋ ಹಾಕಿಕೊಂಡಿದ್ದ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
ತಹಶೀಲ್ದಾರ್ ಪ್ರಸಾದ್ ರಾವ್ ಅವರಿಗೆ ಕಲೆಯಲ್ಲಿ ಹೆಚ್ಚು ಆಸಕ್ತಿ. ಹಾಗಾಗಿ ಇತ್ತೀಚೆಗೆ ವೈರಲ್ ಆಗಿರುವ ಕಾಂತಾರ ಸಿನಿಮಾದ ವೇಷ ಹಾಕಿ ಬಂದಿದ್ದರು. ಅವರನ್ನು ನೋಡಿ ಜಿಲ್ಲಾಧಿಕಾರಿಗೂ ಅಚ್ಚರಿಯಾಗಿದ್ದಲ್ಲದೇ ತಹಶೀಲ್ದಾರ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇವರ ವೇಷಭೂಷಣ ನೋಡಿದ ಜಿಲ್ಲಾಧಿಕಾರಿ ಹಾಗೂ ನೆರೆದಿದ್ದ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
