fbpx
ಸಮಾಚಾರ

ಧಾರವಾಡ ಪ್ರಸೂತಿ ತಜ್ಞೆಗೆ 11 ಲಕ್ಷ ದಂಡ ! ಯಾಕೆ ಗೊತ್ತೆ

ಜಿಲ್ಲೆಯ ಶ್ರೀನಗರ ಭಾವಿಕಟ್ಟಿ ಪ್ಲಾಟ್ ನಿವಾಸಿ ಪರಶುರಾಮ ಘಾಟ ಅವರು ತಮ್ಮ ಪತ್ನಿ ಪ್ರೀತಿಯವರು ಗರ್ಭವತಿಯಾದ ಹಿನ್ನೆಲೆ 3ನೇ ತಿಂಗಳಿಂದ 9ನೇ ತಿಂಗಳಿನವರೆಗೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿರುವ ಪ್ರಶಾಂತ ನರ್ಸಿಂಗ್ ಹೋಮ್ ಗೆ ತೋರಿಸಿದ್ದರು. ಈ ವೇಳೆ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಪ್ರೀತಿಗೆ ಚಿಕಿತ್ಸೆ ನೀಡಿದ್ದರು. ಅವರು 2018 ಜುಲೈ 12 ರಿಂದ 2019 ರ ಜನವರಿ 8 ವರೆಗೆ ಒಟ್ಟು 5 ಬಾರಿ ಸ್ಕ್ಯಾನ್ ಮಾಡಿದ್ದಾರೆ.

ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಅಂತಾ ತಿಳಿಸಿದ್ದರು. ಆದರೆ ಹೆರಿಗೆ ನೋವು ಆರಂಭವಾಗಿ, ಆಸ್ಪತ್ರೆಗೆ ಹೋದಾಗ‌ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲು ಡಾ. ಸೌಭಾಗ್ಯ ಕುಲಕರ್ಣಿ ಸಲಹೆ ನೀಡಿದ್ದರು. ಆದರೆ ಹಣಕಾಸಿನ ತೊಂದರೆಯಿಂದಾಗಿ ಪರಶುರಾಮ ತಮ್ಮ ಪತ್ನಿಯನ್ನು ಧಾರವಾಡದ ಎಸ್.ಡಿ.ಎಮ್. ಆಸ್ಪತ್ರೆಗೆ ಕರೆದೊಯ್ದಿದ್ದರು. 2019 ರ ಜನವರಿ 31 ರಂದು ಪ್ರೀತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ಮಗುವನ್ನು ನೋಡಿದ ತಂದೆ-ತಾಯಿಗೆ ಶಾಕ್ ಆಗಿತ್ತು. ಏಕೆಂದರೆ ಮಗುವಿನ ಎರಡೂ ಕಾಲುಗಳು ಅಂಗವಿಕಲತೆಯಿಂದ ಕೂಡಿದ್ದವು.

ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ ನಿಯಮಾವಳಿ ಪ್ರಕಾರ ಗರ್ಭಧಾರಣೆಯ 18-20 ವಾರಗಳ ಸ್ಕ್ಯಾನಿಂಗ್‍ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಅನ್ನುವ ಬಗ್ಗೆ ತಪಾಸಣೆ ಮಾಡಿದಾಗ ವೈದ್ಯರಿಗೆ ಎಲ್ಲ ವಿವರ ಗೊತ್ತಾಗುತ್ತದೆ. ಆದರೆ ಡಾ. ಸೌಭಾಗ್ಯ ಎಲ್ಲ ಗೊತ್ತಿದ್ದರೂ ಪ್ರೀತಿ ಮತ್ತು ಪರಶುರಾಮ ಅವರಿಗೆ ತಿಳಿಸಿರಲಿಲ್ಲ.

20 ವಾರಗಳಿಂದ 36 ವಾರಗಳಲ್ಲಿ ಮಾಡಿದ್ದ ಪ್ರೀತಿಯ ಸ್ಕ್ಯಾನಿಂಗನ್ನು ಪ್ರಸೂತಿ ತಜ್ಞರು ತೆಗೆದು ನೋಡಿದಾಗ ಅವರಿಗೆ ಮಗುವಿನ ಅಂಗವಿಕಲತೆ ಬಗ್ಗೆ ಗೊತ್ತಿದ್ದರೂ ಆ ವಿಷಯವನ್ನು ದೂರುದಾರರಿಗೆ ತಿಳಿಸದೇ ಮೋಸ ಮಾಡಿ, ವೈದ್ಯಕೀಯ ನಿರ್ಲಕ್ಷ ತೋರಿದ್ದರಿಂದ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಶುರಾಮ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ಪ್ರಸೂತಿ ತಜ್ಞರು ಕಾಲಕಾಲಕ್ಕೆ ದೂರುದಾರರ ಪತ್ನಿಯ ಸ್ಕ್ಯಾನಿಂಗ್ ತೆಗೆದು ತಪಾಸಣೆ ಮಾಡಿದಾಗ ಅವರಿಗೆ ಗರ್ಭದಲ್ಲಿರುವ ಶಿಶುವಿನ ಅಂಗವಿಕಲತೆ ಗೊತ್ತಾಗುತ್ತದೆ. ಎಮ್.ಟಿ.ಪಿ.ಕಾಯ್ದೆ ಪ್ರಕಾರ 20 ವಾರಗಳ ಗರ್ಭದ ಸಮಯದಲ್ಲಿ ಶಿಶುವಿನ ಅಂಗವಿಕಲತೆಯ ಬಗ್ಗೆ ವೈದ್ಯರಿಗೆ ತಿಳಿದಿದ್ದು, ಆ ಸಂಗತಿಯನ್ನು ಅವರು ದೂರುದಾರರ ಗಮನಕ್ಕೆ ತಂದಿದ್ದರೆ ಅವರು ಕಾನೂನಿನ ಪ್ರಕಾರ ಅಂಗವಿಕಲ ಮಗುವನ್ನು ಗರ್ಭದಲ್ಲಿ ಉಳಿಸಿಕೊಳ್ಳಬೇಕೋ ಅಥವಾ ಬೇಡವೋ ಅನ್ನುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಆದರೆ ಶಿಶುವಿನ ಅಂಗವಿಕಲತೆಯ ಮಹತ್ವದ ಸಂಗತಿಯನ್ನು ತಜ್ಞ ವೈದ್ಯರು ತಿಳಿಸದೇ, ವೈದ್ಯಕೀಯ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷತೆ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಅಭಿಪ್ರಾಯಾಪಟ್ಟಿದೆ.

ವೈದ್ಯರ ಇಂಥ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಸರ್ವೋಚ್ಚ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕರ ಆಯೋಗದ ತೀರ್ಪುಗಳನ್ನು ಆಧರಿಸಿ ಜಿಲ್ಲಾ ಗ್ರಾಹಕರ ಆಯೋಗ ಅಭಿಪ್ರಾಯಪಟ್ಟಿದೆ.

ವೈದ್ಯರ ನಿರ್ಲಕ್ಷತನದಿಂದ ಜನಿಸಿರುವ ಅಂಗವಿಕಲ ಹೆಣ್ಣು ಮಗುವಿನ ಈವರೆಗಿನ ಚಿಕಿತ್ಸೆ, ಭವಿಷ್ಯದ ಚಿಕಿತ್ಸೆ ಮತ್ತು ಅದರ ಭವಿಷ್ಯದ ಜೀವನ ನಿರ್ವಹಣೆಯ ಬಗ್ಗೆ ಆಯೋಗ ತನ್ನ ತೀರ್ಪಿನಲ್ಲಿ ಚಿಂತಿಸಿದೆ. ಜನಿಸಿದ ಹೆಣ್ಣು ಮಗುವಿನ ಈವರೆಗಿನ ವೈದ್ಯಕೀಯ ಖರ್ಚಿಗೆ ರೂ. 50,000/-, ದೂರುದಾರರ ಓಡಾಟ ಮತ್ತು ಖರ್ಚು ವೆಚ್ಚಕ್ಕೆ ರೂ. 50,000/-, ಅಂಗವಿಕಲ ಮಗುವಿನ ಪಾಲಕರಿಗೆ ಆಗಿರೋ ಮಾನಸಿಕ ನೋವು ಮತ್ತು ಹಿಂಸೆಗಾಗಿ ರೂ. 2,00,000/-, ಅಂಗವಿಕಲ ಹೆಣ್ಣುಮಗುವಿನ ಭವಿಷ್ಯದ ವೈದ್ಯಕೀಯ ಖರ್ಚು ವೆಚ್ಚಕ್ಕಾಗಿ ರೂ. 3,00,000/-, ಸದರಿ ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯದ ಜೀವನ ನಿರ್ವಹಣೆಗಾಗಿ ರೂ. 5,00,000/-, ಈ ಪ್ರಕರಣದ ಖರ್ಚು ವೆಚ್ಚ ರೂ.10,000/- ಸೇರಿ ಒಟ್ಟು ರೂ.11,10,000/- ಪರಿಹಾರವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ. ಈ ಪರಿಹಾರ ನೀಡದಿದ್ದಲ್ಲಿ ಮೊತ್ತದ ಮೇಲೆ ಶೇ. 8% ರಂತೆ ಬಡ್ಡಿ ಕೊಡುವಂತೆ ತಜ್ಞ ವೈದ್ಯರಿಗೆ ಆಯೋಗ ಆದೇಶಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top