ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ಸಕತ್ ಸೌಂಡ್ ಮಾಡಿ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆದ ವಿಷಯ ನಮಗೆಲ್ಲ ಗೊತ್ತು. ಅದರಲ್ಲೂ ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ಕೂಡ ಸಕತ್ ಹಿಟ್ ಆಗಿತ್ತು. ಆದರೆ ಈ ಹಾಡಿನ ಕುರಿತು ಕೇರಳದ ‘ತೈಕುಡಂ ಬ್ರಿಡ್ಜ್’ ನಮ್ಮ ಅನುಮತಿ ಇಲ್ಲದೆ ಸಿನಿಮಾದಲ್ಲಿ ಬಳಿಸಲಾಗಿದೆ ಎಂದು ಪ್ರಕರಣ ದಾಖಲಿಸಿದ್ದು, ಇದೀಗ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರು ಭಾನುವಾರ ಕೋಯಿಕ್ಕೋಡ್ ಪೊಲೀಸ್ ಠಾಣೆಯ ತನಿಖಾಧಿಕಾರಿಗಳ ಎದುರು ಹಾಜರಾಗಿದ್ದರು.
ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದಾಗ, ‘ಈ ಪ್ರಕರಣವು ಈ ಕೋರ್ಟ್ನಲ್ಲಿ ವಿಚಾರಣೆಗೆ ಸೂಕ್ತವಾಗಿಲ್ಲ. ಆದ್ದರಿಂದ ವಾಣಿಜ್ಯ ವ್ಯಾಜ್ಯಗಳನ್ನು ವಿಚಾರಣೆ ಮಾಡುವಂಥ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ’ ಎಂದಿದ್ದವು. ಬಳಿಕ ಮಾತೃಭೂಮಿ ಪ್ರಕಾಶನ ಹಾಗೂ ತೈಕುಡಂ ಬ್ರಿಡ್ಜ್ ತಂಡವು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇದೇ 12 ಮತ್ತು 13ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯೊಳಗೆ ತನಿಖಾಧಿಕಾರಿಗಳ ಎದುರು ಹಾಜರಾಗುವಂತೆ ಇಬ್ಬರಿಗೂ ಸೂಚಿಸಿತ್ತು.
ಇದೀಗ ನ್ಯಾಯಾಲಯದ ಆದೇಶವನ್ನು ಪಾಲಿಸಿರುವ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರು ತನಿಖಾಧಿಕಾರಿಗಳ ಎದುರು ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ. ಮತೊಮ್ಮೆ ತನಿಖೆಯ ಅವಶ್ಯಕತೆ ಇದ್ದರೆ ಮತ್ತೊಮ್ಮೆ ತಮ್ಮನ್ನು ಠಾಣೆಗೆ ಕರಿಸಲಾಗುತ್ತದೆ ಎಂದು ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
