ಐತಿಹಾಸಿಕ ಹಿನ್ನಲೆಯುಳ್ಳ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಬಗೆಗಿನ ಕುತೂಹಲಕಾರಿ ಸಂಗತಿಗಳು ಇಲ್ಲಿದೆ.
ಪರಶುರಾಮ ಸೃಷ್ಠಿಯ ತುಳುನಾಡು ದೈವ-ದೇವರುಗಳ ನೆಲೆಬೀಡು. ತನ್ನ ಕೊಡಲಿಯನ್ನು ಎಸೆದು ತುಳುನಾಡು ಸೃಷ್ಠಿಸಿದ ಪರಶುರಾಮರು ಕದ್ರಿಯ ಮಂಜನಾಥನ ಆಲಯವನ್ನೂ ಸ್ಥಾಪಿಸಿದರು ಎಂಬ ಐತಿಹ್ಯ ಕದ್ರಿ ಕ್ಷೇತ್ರಕ್ಕೆ ಇದೆ.
ಸಹ್ಯಾದ್ರಿಯಲ್ಲಿ ನೆಲೆಸಿದ್ದ ಪರಶುರಾಮನು ಕ್ರೂರಿಗಳಾದ ಕ್ಷತ್ರಿಯರನ್ನು ಕೊಂದು ಕಶ್ಯಪನಿಗೆ ಭೂಮಿಯನ್ನು ದಾನ ಮಾಡಿದರೆಂದು ನಂಬಲಾಗಿದೆ.
ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದ ಪರಶುರಾಮರು ತನಗೆ ವಾಸಿಸಲು ಸ್ಥಳಕ್ಕಾಗಿ ಶಿವನನ್ನು ಪ್ರಾರ್ಥಿಸಿದರು. ಈ ವೇಳೆ ಶಿವನು ಪರಶುರಾಮನ ಎದುರು ಪ್ರತ್ಯಕ್ಷರಾಗಿ, ಕದಳಿ ಕ್ಷೇತ್ರದಲ್ಲಿ ತಪಸ್ಸು ಮಾಡಿದರೆ, ಲೋಕ ಕಲ್ಯಾಣಕ್ಕಾಗಿ ಮಂಜುನಾಥನಾಗಿ ಪುನರ್ಜನ್ಮ ನೀಡುತ್ತೇನೆ ಎಂದು ಭರವಸೆ ನೀಡಿದರು. ಶಿವನ ಆಜ್ಞೆಯಂತೆ ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರಕ್ಕೆ ಎಸೆದು ತನ್ನ ತಪಸ್ಸಿಗೆ ಸ್ಥಳವನ್ನು ಸೃಷ್ಟಿಸಿದನು. ಪರಶುರಾಮನ ಪ್ರಾರ್ಥನೆಗೆ ಮಣಿದ ಶಿವನು, ಪಾರ್ವತಿ ದೇವಿಯೊಡನೆ ಮಂಜುನಾಥ ಲಿಂಗ ರೂಪಿಯಾಗಿ ಕಾಣಿಸಿಕೊಂಡನು ಮತ್ತು ಲೋಕದ ಒಳಿತಿಗಾಗಿ ಕದ್ರಿಯಲ್ಲಿ ತಂಗಿದನು. ಮಂಜುನಾಥನ ಆಜ್ಞೆಯಂತೆ ಸಪ್ತಕೋಟಿ ಮಂತ್ರಗಳು ಏಳು ತೀರ್ಥಗಳಾಗಿ ಬದಲಾಗಿವೆ ಎಂಬ ಐತಿಹ್ಯ ಶ್ರೀ ಕ್ಷೇತ್ರ ಕದ್ರಿಗಿದೆ.
10ನೇ ಶತಮಾನದಲ್ಲಿ ನಿರ್ಮಾಣವಾದ ಕದ್ರಿ ಮಂಜುನಾಥ ಕ್ಷೇತ್ರವನ್ನು,14 ನೇಯ ಶತಮಾನದಲ್ಲಿ ಸಂಪೂರ್ಣ ಕಲ್ಲಿನ ರಚನೆಯನ್ನಾಗಿ ಪರಿವರ್ತಿಸಲಾಯಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
