ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ವರ್ಷಗಳು ಕಳೆದರು ಸಹ ಇಂದಿಗೂ ಸಹ ಅಪ್ಪು ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದೆ. ಮುಂದಿನ ತಿಂಗಳು ಅಂದರೆ ಮಾರ್ಚ್ ನಲ್ಲಿ ಅಪ್ಪು ಹುಟ್ಟುಹಬ್ಬವಿರುವ ಕಾರಣ ಇದೀಗ ಅಭಿಮಾನಿಗಳು ಅಪ್ಪು ಮಾಲೆ ಎಂಬ ಹೊಸ ಅಭಿಯಾನವನ್ನು ಶುರುಮಾಡಿದ್ದಾರೆ. ಇದೀಗ ಇದರ ವಿರುದ್ಧ ಒಳ್ಳೆ ಹುಡುಗ ಪ್ರಥಮ್ ಕಿಡಿಕಾರಿದ್ದಾರೆ.
ಅಪ್ಪು ಅಗಲಿದ ನಂತರ ಇಂದಿಗೂ ಸಹ ಅಭಿಮಾನಿಗಳು ಅಪ್ಪು ಅವರನ್ನು ದೇವರ ರೀತಿ ಕಾಣುತ್ತಿದ್ದಾರೆ. ಅಪ್ಪು ಹೆಸರಿನಲ್ಲಿ ಅನ್ನ ದಾಸೋಹ, ಹೀಗೆ ಹಲವಾರು ಒಳ್ಳೆಯ ಕೆಲಸಗಳು ಸಹ ನಡೆಯುತ್ತಿರುತ್ತದೆ. ಆದರೆ ಇದೀಗ ಅದು ಅತಿರೇಕಕ್ಕೆ ಹೋಗಿ ಅಪ್ಪು ಮಾಲೆ ಎಂಬ ಅಭಿಯಾನ ಶುರುಮಾಡಲು ಚಿಂತಿಸುತ್ತಿದ್ದಾರೆ. ಇದೀಗ ಇದರ ಕುರಿತು ಪ್ರಥಮ್ ಟ್ವೀಟ್ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ.
ಹೌದು, ಹೊಸಪೇಟೆಯ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಅಯ್ಯಪ್ಪ ಸ್ವಾಮಿ ಮಾದರಿಯಲ್ಲಿಯೇ ಮಾರ್ಚ್ 1ರಿಂದ 17ರವರೆಗೆ ಪುನೀತ ಮಾಲೆ ಧರಿಸಿ ಪುನೀತ್ ರಾಜ್ಕುಮಾರ್ ಫೋಟೊ ಇಟ್ಟು ಪೂಜೆ ಸಲ್ಲಿಸಲು ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೇ ರಾಜ್ಯದಲ್ಲಿನ ಅಪ್ಪು ಅಭಿಮಾನಿಗಳು ಈ ರೀತಿ ಮಾಲೆ ಹಾಕಿಕೊಳ್ಳಬಹುದು ಎಂದು ಹಲವು ನಿಯಮಗಳನ್ನೂ ಸಹ ಪ್ರಕಟಿಸಿದ್ದರು. ಈ ಪ್ರಕಟಣೆ ವೈರಲ್ ಆದ ಬೆನ್ನಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಪ್ರಥಮ್ ಟ್ವೀಟ್ ಮೂಲಕ ತನ್ನ ಬೇಸರವನ್ನು ಹೊರಹಾಕಿದ್ದಾರೆ.
‘ದೇವರ ಮೇಲೆ ಭಕ್ತಿ ಇರಲಿ. ಕಲಾವಿದರ ಮೇಲೆ ಪ್ರೀತಿ, ಅಭಿಮಾನಿವಿರಲಿ..! ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ. ಬಹಳ ಶಿಸ್ತುಗಳನ್ನು ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು. ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ. ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು. ದೇವರು ದೇವರೇ ಕಲಾವಿದರು ಕಲಾವಿದರೇ’ ಎಂದು ಪ್ರಥಮ್ ಟ್ವೀಟ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
