ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯದಲ್ಲಿ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ರೈತರ ಹೋರಾಟಕ್ಕೆ ನಟ ದರ್ಶನ್ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಇಂದು ಸಾಥ್ ನೀಡಿದ್ದಾರೆ.
ನಗರದ ಸಂಜಯ್ ವೃತ್ತದಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಜೋಗಿ ಪ್ರೇಮ್ ರಮ್ಯಾ ವಿರುದ್ದ ಕಿಡಿಕಾರಿದರು.
ರೈತರ ಪವರ್ ಇನ್ನೂ ಗೊತ್ತಾಗಿಲ್ಲ ; ದರ್ಶನ್
ಈ ನಡುವೆ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ನಟ ಚಾಲೆಂಜಿಂಗ್ ದರ್ಶನ್,ನಾನು ನಟನಾಗಿ ಬಂದಿಲ್ಲ.ನಿಮ್ಮಲ್ಲಿ ಒಬ್ಬನಾಗಿ ಬಂದಿದ್ದೇನೆ. ಕಾವೇರಿ ನಮ್ಮ ತಾಯಿ, ರೈತರ ಉಪ್ಪು ತಿಂದಿದ್ದೇನೆ.ಹೀಗಾಗಿ ಅವರ ಋಣ ತೀರಿಸಲು ಬಂದಿದ್ದೇನೆ ಎಂದು ತಿಳಿಸಿದರು. ನಾನು ಕಾವೇರಿ ನೀರು ಕುಡಿದು ಬೆಳೆದವನು, ಹಾಗಾಗಿ ನಾನು ಇಲ್ಲಿಗೆ ನಟನಾಗಿ ಬಂದಿಲ್ಲ, ಸಾಮಾನ್ಯ ಪ್ರಜೆಯಾಗಿ ಬಂದಿದ್ದೇನೆ. ಮಂಡ್ಯ ಜಿಲ್ಲೆಯ ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಸಾಮಾನ್ಯ ಪ್ರಜೆಯಾಗಿ ರೈತರ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದು ನಟ ದರ್ಶನ್ ತಿಳಿಸಿದ್ದಾರೆ.
ಸರ್ಕಾರದ ವಿರುದ್ಧ ಮಾತನಾಡುವಷ್ಟು ದೊಡ್ಡವನಲ್ಲ ನಾನು. ರೈತರ ಪವರ್ ಇನ್ನೂ ಗೊತ್ತಾಗಿಲ್ಲ. ಮಹದಾಯಿ ವಿಚಾರದಲ್ಲೂ ನಮಗೆ ಅನ್ಯಾಯ ಆಗಿದೆ, ಕಾವೇರಿ ವಿಚಾರದಲ್ಲಿ ಪದೇ, ಪದೇ ಅನ್ಯಾಯವಾಗುತ್ತಿದೆ. ಹಾಗಾಗಿ ಕಾವೇರಿ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ರೈತರಿಗೆ ಪರಿಹಾರ ಬೇಡ, ಬೆಳೆಗೆ ನೀರು ಬೇಕು : ಜೋಗಿ ಪ್ರೇಮ್
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲೆಯ ರೈತರು ನಡೆಸುತ್ತಿರುವ ಪ್ರತಿಭಟನೆಗೆ ನಟ, ನಿರ್ದೇಶಕ ಜೋಗಿ ಪ್ರೇಮ್ ಕೂಡಾ ಸಾಥ್ ನೀಡಿದ್ದಾರೆ. ನಟಿ ರಮ್ಯಾ ಅವರ ಪೊಲೀಸ್ ಭದ್ರತೆ ಇದ್ದರೇ ಮಂಡ್ಯಕ್ಕೆ ತೆರಳುವೆ ಎಂಬ ಹೇಳಿಕೆ ನನಗೆ ತುಂಬಾ ನೋವಾಗಿದೆ.ಮಂಡ್ಯ ಜನತೆಗೆ ಅನ್ಯಾಯವಾದಾಗ ರೇಗೋದು ಸಹಜ.ಅವರಿಗೂ ಅಕ್ಕ ತಂಗಿ ತಾಯಿ ಇದ್ದಾರೆ.ಪ್ರೀತಿ ವಾತ್ಸಲ್ಯ ಗೊತ್ತಿದೆ.ಮಂಡ್ಯ ಜನತೆಗೆ ಹೆಣ್ಣು ಮಕ್ಕಳ ಬಗ್ಗೆ ಪ್ರೀತಿ ಹೆಚ್ಚು, ಮಂಡ್ಯ ಜನತೆ ತುಂಬಾಒಳ್ಳೆಯವರು. ಹೀಗಾಗಿ ರಮ್ಯಾ ಪೊಲೀಸ್ ಭದ್ರೆತೆ ಇಲ್ಲದೆ ಬಂದು ಹೋರಾಟದಲ್ಲಿ ಭಾಗವಹಿಸಲಿ ಎಂದು ತಿಳಿ ಹೇಳಿದರು.
ನಮ್ಮ ರೈತರ ಬೆಳೆಗಳಿಗೆ ಪರಿಹಾರ ಬೇಡ, ರೈತರ ಬೆಳೆಗೆ ನೀರು ಬೇಕಾಗಿದೆ. ನಾನು ಯಾವತ್ತೂ ಮಂಡ್ಯದ ರೈತರ ಹೋರಾಟಕ್ಕೆ ಬೆಂಬಲವಾಗಿರುತ್ತೇನೆ, ನಾಳೆ ನಡೆಯಲಿರುವ ಬಂದ್ ಗೆ ಎಲ್ಲರೂ ಬೆಂಬಲ ನೀಡಬೇಕು. ಕನ್ನಡ ಚಿತ್ರರಂಗದ ನಟ, ನಟಿಯರು ಮಂಡ್ಯಕ್ಕೆ ಬಂದು ಪ್ರತಿಭಟನೆ ನಡೆಸಬೇಕು ಎಂದು ಪ್ರೇಮ್ ಮನವಿ ಮಾಡಿಕೊಂಡರು.
video source : publicTV
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
