ಗಡಿ ಭಾಗದ ಹಳ್ಳಿಯ ಮರಾಠಿ ಭಾಷಿಕ ಕುಟುಂಬದ ಯುವಕನೊಬ್ಬ, ವಿದ್ಯಾರ್ಥಿ ವೇತನ, ದಿನದ ಖರ್ಚು (ಪಾಕೆಟ್ ಮನಿ) ಹಣದಿಂದಲೇ ಕನ್ನಡ ಭಾಷೆ ಬೆಳೆಸುವ ಕೆಲಸ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಹುಕ್ಕೇರಿ ತಾಲೂಕಿನ ಸೋಲಾಪುರ ಎನ್ನುವ ಪುಟ್ಟ ಹಳ್ಳಿಯ ಕುಮಾರ ತಲವಾರ ಇಂಥ ಆಕರ್ಷಕ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದಾರೆ.
ಮರಾಠಿ ಭಾಷೆಯ ಕುಟುಂಬದಲ್ಲಿ ಜನಿಸಿದ್ದರೂ ಹುಟ್ಟಿದ ನೆಲದ ಋುಣ ತೀರಿಸಲು ಪಣತೊಟ್ಟು ನಿಂತಿದ್ದಾರೆ. ಮಹಾರಾಷ್ಟ್ರದ ಗಡಿಯಿಂದ ಕೂಗಳತೆಯ ದೂರದಲ್ಲಿದ್ದರೂ ಮರಾಠಿ ಭಾಷಿಕರಲ್ಲಿ ಕನ್ನಡ ಕಂಪು ಹರಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ನಡೆಸುತ್ತಿರುವ ‘ಕರಾಳ ದಿನ’ದ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಅವರು, ‘ಬೆಳಗಾವಿ ಎಂದಿಗೂ ಕನ್ನಡದ ನೆಲ. ಎಂಇಎಸ್ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದೆ’ ಎಂದರು.
ಸುಹಾಸ ತಳವಾರ ಮತ್ತು ಮಂಜುಳಾ ತಳವಾರ ದಂಪತಿಯ ಏಕೈಕ ಮಗನಾಗಿರುವ ಕುಮಾರ 9ನೇ ತರಗತಿಯಿಂದಲೇ ಕನ್ನಡಭಿಮಾನ ಬೆಳೆಸಿಕೊಂಡಿದ್ದಾರೆ. ಮಹಾರಾಷ್ಟ್ರದ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸುಹಾಸ ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲ. ಆದರೂ, ಮಗನ ಕೆಲಸಕ್ಕೆ ವಿರೋಧವಿಲ್ಲ. ತಾಯಿ ಮಂಜುಳಾ ಕನ್ನಡತಿಯಾದ್ದರಿಂದ ಕುಮಾರ ಅವರ ಕನ್ನಡದ ಕಾಯಕ ತಡೆ ಇಲ್ಲದೆ ನಡೆಯುತ್ತಿದೆ.
ಕಲಿಕೆಯೊಂದಿಗೆ ಕಾಯಕ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕುಮಾರ ಅವರು, 2011ರಲ್ಲಿ ಪದವಿ ಓದುತ್ತಿರುವಾಗಲೇ ವಿಶ್ವ ಕನ್ನಡ ರಕ್ಷಕ ದಳ ಎನ್ನುವ ಸಂಘ ಸ್ಥಾಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳೇ ಇರುವ ಸಂಘದ ಮೂಲಕ ಸುತ್ತಲಿನ ಶಾಲೆಗಳಿಗೆ ಹೋಗಿ ಕನ್ನಡದ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ಸಂಘಟನೆಯನ್ನು ಚಿಕ್ಕೋಡಿ, ಸಂಕೇಶ್ವರ, ಗೋಕಾಕ, ನಿಪ್ಪಾಣಿ ಸೇರಿದಂತೆ ಎಲ್ಲೆಡೆ ಬೆಳೆಸುತ್ತಿದ್ದಾರೆ.
ರಾಜ್ಯೋತ್ಸವದ ಸಂದರ್ಭದಲ್ಲಿ ಮರಾಠಿಗರನ್ನೇ ಸೇರಿಸಿಕೊಂಡು ಕನ್ನಡದ ಕಾರ್ಯಕ್ರಮ ಸಂಘಟಿಸುವುದು ಇವರ ವಿಶೇಷ. ಅದಕ್ಕಾಗಿ ಸ್ವಂತ ಹಣವನ್ನೇ ಖರ್ಚು ಮಾಡುತ್ತಿದ್ದಾರೆ. ರಾಜಕುಮಾರ ಬೀದಿ: ಕನ್ನಡಿಗರ ಸಂಖ್ಯೆಗೆ ಸಮನಾಗಿ ಇರುವ ಮರಾಠಿ ಭಾಷಿಕರ ನಡುವೆಯೇ ಊರಿನ ಬೀದಿಗೆ ‘ಕರ್ನಾಟಕ ರತ್ನ ಡಾ. ರಾಜಕುಮಾರ ಬೀದಿ‘ ಎಂದು ಹೆಸರಿಡಲು ಗ್ರಾಮ ಪಂಚಾಯಿತಿಯಿಂದ ಒಪ್ಪಿಗೆ ಪಡೆದುಕೊಂಡಿದ್ದಾರೆ.
ನ. 2ರಂದು ಬೀದಿಯ ನಾಮಫಲಕ ಉದ್ಘಾಟಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆಯೂ ಕನ್ನಡದಲ್ಲಿ ರಚಿಸಿದ ಕ್ಯಾಲೆಂಡರ್ವೊಂದನ್ನು ಸಾಲ ಮಾಡಿ ಖರೀದಿಸಿ ಸುತ್ತಲಿನ ಊರುಗಳಲ್ಲಿ ವಿತರಿಸಿ ಪ್ರಚಾರ ನಡೆಸಿದ್ದರು. ಬೈಕ್ಗೆ ಕನ್ನಡ ಬಾವುಟ ಕಟ್ಟಿಕೊಂಡು ಎರಡು ವರ್ಷಗಳ ಕಾಲ ಸುತ್ತಾಡಿ ಗಮನ ಸೆಳೆದಿದ್ದರು. ಮುಂದೊಂದು ದಿನ ಕನ್ನಡ ಸಂಘಟನೆಗಳ ಒಕ್ಕೂಟ ರಚಿಸಿಕೊಂಡು ಕನ್ನಡದ ಎಲ್ಲ ಸಂಘಟನೆಗಳನ್ನು ಒಂದುಗೂಡಿಸುವ ಗುರಿ ಇದೆ ಎನ್ನುತ್ತಾರೆ ಕುಮಾರ.
‘ಜೈ ಕರ್ನಾಟಕ!’ ಕುಮಾರ ಅವರಿಗೆ ಕರೆ ಮಾಡಿದರೆ, ಅವರ ಕಡೆಯಿಂದ ಮೊದಲು ಕೇಳಿಸುವುದು ‘ಜೈ ಕರ್ನಾಟಕ’ ಎನ್ನುವ ಘೋಷಣೆ. ಅವರ ಮಾತಿನಲ್ಲಿಯೂ ಸಾಮಾನ್ಯರಿಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಂಗ್ಲ ಪದ ಬಳಕೆಯಾಗುತ್ತದೆ. ಮೊಬೈಲ್, ವ್ಯಾಟ್ಸ್ಆ್ಯಪ್ ಕಾಲದಲ್ಲಿಯೂ ಅವರಿಂದ ಅಪ್ಪಟ ಕನ್ನಡದ ಪದಗಳೇ ಹೆಚ್ಚಾಗಿ ಕೇಳಿಸುತ್ತದ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
