ತಿಥಿ ಕನ್ನಡ ಚಿತ್ರ ಬಿಡುಗಡೆಯಿಂದಲೇ ಸುದ್ದಿ ಮಾಡುತ್ತಿದೆ. ಪಕ್ಕಾ ಹಳ್ಳಿ ಶೈಲಿಯ ಮಾತುಗಳು, ನೈಜ ಅಭಿನಯ ಈ ಚಿತ್ರವನ್ನು ಪ್ರೇಕ್ಷಕ ಅಪ್ಪುವಂತೆ ಮಾಡಿದೆ. ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ಸೆಂಚೂರಿ ಗೌಡ, ಗಡ್ಡಪ್ಪ ಈ ಚಿತ್ರದಿಂದಲೇ ಎಲ್ಲರ ಮನಸ್ಸು ಗೆದ್ದಿದ್ದಾರೆ. ಈಗ ತಿಥಿ ಚಿತ್ರದ ಹಿರಿಮೆಗೆ ಮತ್ತೊಂದು ಗರಿ ಸಂದಿದೆ.
ಅದೇನಪ್ಪ ಗರಿ.. ಹಲವು ಪ್ರಶಸ್ತಿಗಳ ರೇಸ್ನಲ್ಲಿ ಖ್ಯಾತ ನಟರನ್ನು ಹಿಂದಿಕ್ಕಿದ್ದ ತಿಥಿ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲೂ ಸದ್ದು ಮಾಡಿತ್ತು. ಇದರ ಕಥಾ ಹಂದರ ಹಾಗೂ ಶೈಲಿಗೆ ಬಾಲಿವುಡ್ ಸ್ಟಾರ್ ನಟರು ಫೀದಾ ಆಗಿದ್ದಾರೆ. ಸಲ್ಮಾನ್ ಖಾನ್, ಅಮೀರ್ ಖಾನ್, ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ೨೦೧೬ರ ಭಾರತದ ಅತ್ಯುತ್ತಮ ಚಿತ್ರ ಎಂಬ ಗೌರವಕ್ಕೆ ಪಾತ್ರವಾಗಿದೆ.
ಮೂರು ತಲೆಮಾರಿನ ಕಥಾ ಹಂದರವನ್ನು ಹೊಂದಿರುವ ಚಿತ್ರಕ್ಕೆ ಸಾಲು ಸಾಲು ಪ್ರಶಸ್ತಿಗಳು ಲಭಿಸಿವೆ. ದುಡ್ಡಿನ ಆಸೆ, ಆಸ್ತಿಯನ್ನು ಪಡೆಯಲು ಹಳ್ಳಿ ಜನ ಮಾಡುವ ನರಳಾಟವನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿತ್ತರಿಸಲಾಗಿತ್ತು. ನಿರ್ಮಾಪಕ ರಾಮ್ ರೆಡ್ಡಿ ಹಾಗೂ ಯರೆ ಗೌಡ್ ಈ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ಚಿತ್ರವನ್ನು ವಿಶ್ವ ವ್ಯಾಪಿ ಪ್ರದರ್ಶಿಸಲು ತಯಾರಿ ನಡೆಸಿದ್ದಾಗಿ ರಾಮ್ ರೆಡ್ಡಿ ತಿಳಿಸಿದ್ದಾರೆ.
ಈ ಚಿತ್ರದ ಮೂಲಕವೇ ಗಡ್ಡಪ್ಪ ಹಾಗೂ ಸೆಂಚೂರಿ ಗೌಡ ವಿವಿಧ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶವನ್ನು ಪಡೆದಿದ್ದಾರೆ.
ಈ ಚಿತ್ರಕ್ಕೆ ೬೩ನೇ ನ್ಯಾಷನಲ್ ಫಿಲ್ಮ್ ಅವಾರ್ಡ್, ಮುಂಬೈ ಫಿಲ್ಮ್ ಫೆಸ್ಟಿವಲ್, ಪುಣೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಕರ್ನಾಟಕ ರಾಜ್ಯ, ೧೯ನೇ ಶಾಂಗೈ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಗಳು ಲಭಿಸಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ