ನಟ ಕಿಚ್ಚ ಸುದೀಪ್ ಅಭಿಮಾನಿಗಳು ಜೀವ ಬೆದರಿಕೆ ಒಡ್ಡುತ್ತಿದ್ದಾರೆಂದು ಆರೋಪಿಸಿ, ಕ್ರಮಕೈಗೊಳ್ಳುವಂತೆ ವಂದೇ ಮಾತರಂ ಸಮಾಜ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ನಾಯ್ಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ!
ಕೆಲ ದಿನಗಳ ಹಿಂದೆಯಷ್ಟೇ ಶಿವಕುಮಾರ್ ನಾಯ್ಡು ಸುದೀಪ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಆನ್ಲೈನ್ ಗೇಮ್ ರಮ್ಮಿ ಸರ್ಕಲ್ ಸಂಬಂಧಿಸಿದ ಜಾಹೀರಾತಿನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇಂತಹ ಜಾಹೀರಾತಿನಲ್ಲಿ ಮುಂದುವರೆದರೆ ಸುದೀಪ್ ಅವರನ್ನು ಚಿತ್ರರಂಗದಿಂದ ನಿಷೇಧಿಸುವಂತೆ ಶಿವಕುಮಾರ್ ನಾಯ್ಕ ಮನವಿ ಮಾಡಿದ್ದರು.
ಈ ದೂರಿನ ಬಳಿಕ ದೇಶ ವಿದೇಶಗಳ ಅಭಿಮಾನಿಗಳಿಂದ ಬೆದರಿಕೆ ಕರೆ, ವಾಟ್ಸ್ಯಾಪ್ ಸಂದೇಶಗಳು ಬರುತ್ತಿದ್ದು, ನನಗೆ ಜೀವ ಬೆದರಿಕೆ ಇದೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಅಲ್ಲದೆ ನನಗೆ ಏನೇ ಆದರೂ ಅದಕ್ಕೆ ಸುದೀಪ್ ಅವರು ನೇರ ಹೊಣೆಯಾಗುತ್ತಾರೆ. ಹೀಗಾಗಿ ತಮಗೆ ಬಂದಿರುವ ಕರೆಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಶಿವಕುಮಾರ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನನಗೆ ಮಾನಸಿಕ ಹಾಗೂ ದೈಹಿಕ ಹಲ್ಲೆಯಾದರೆ ಸುದೀಪ್ ಅವರೇ ನೇರ ಹೊಣೆ. ನನ್ನ ಪ್ರಾಣಕ್ಕೆ ಕುತ್ತು ಬಂದರೆ ಸುದೀಪ್ ಕಾರಣ. ತಕ್ಷಣ ನಟ ಸುದೀಪ್ ತಮ್ಮ ಅಭಿಮಾನಿಗಳಿಗೆ ತಿಳಿ ಹೇಳಬೇಕು. ಇದನ್ನು ನಿರ್ಲಕ್ಷ್ಯ ಮಾಡಿದ್ದಲ್ಲಿ ನಟ ಸುದೀಪ್ ಅವರ ಮನೆಯ ಮುಂದೆ ಧರಣಿ ಮಾಡುವುದಾಗಿ ಶಿವಕುಮಾರ್ ನಾಯ್ಕ್ ಪತ್ರದ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
