ಕನ್ನಡ ಚಿತ್ರರಂಗದ ಹಿರಿಯ ನಟ ಜೈಜಗದೀಶ್ ಅವರ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಈ ಸಂಬಂಧ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಜಯರಾಮೇಗೌಡ ಎಂಬುವವರು ದೂರು ದಾಖಲು ಮಾಡಿರುವುದಾಗಿ ತಿಳಿದುಬಂದಿದೆ.
ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಅವಾಚ್ಯಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಹಲ್ಲಿನಿಂದ ಕೈಕಚ್ಚಿರುವ ಆರೋಪ ಜೈ ಜಗದೀಶ್ ಅವರ ಮೇಲಿದೆ. ಜಯರಾಮೇಗೌಡ ಎಂಬುವವರು ಈ ದೂರು ನೀಡಿದ್ದು, ಜೂ.5 ರಂದು ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಿಂದ ಬಸ್ನಲ್ಲಿ ಬರುತ್ತಿರುವಾಗ ಬೆಳ್ಳೂರು ಕ್ರಾಸ್ನಿಂದ ಸ್ವಲ್ಪ ಹಿಂದೆ ಸುಂಕವಸೂಲಾತಿ ಕೇಂದ್ರದ ಬಳಿ ನಿಧಾನಿಸಿದಾಗ ಜಯರಾಮೇಗೌಡ ನಿರ್ವಾಹಕರಿಗೆ ತಿಳಿಸಿ ಕೆಳಗಿಳಿದರು. ಈ ವೇಳೆ ಬಸ್ ಹಿಂದೆಯಿಂದ ಜಗದೀಶ್ ಅವರ ಕಾರು ಬರುತ್ತಿತ್ತು. ಬಸ್ನಿಂದ ಇಳಿದು ಹೋಗುತ್ತಿರುವಾಗ ಜಗದೀಶ್ ಮತ್ತು ಅವರ ಕಡೆಯವರು ಜಯರಾಮೇಗೌಡರಿಗೆ ಯಾಕೋ ಬಸ್ನಿಂದ ಕೆಳಗೆ ಬಾಟಲ್ ಎಸೆಯುತ್ತೀಯೆ ಎಂದು ಕೆಟ್ಟಶಬ್ಧಗಳಿಂದ ನಿಂದಿಸಿ, ಬಟ್ಟೆಹರಿದು, ಕಪಾಳಕ್ಕೆ ಹೊಡೆದು, ಹಲ್ಲಿನಿಂದ ಕೈಯ್ಯನ್ನು ಕಚ್ಚಿ ಹಲ್ಲೆಗೆ ಯತ್ನಿಸಿದರು ಎಂದು ದೂರಿದ್ದಾರೆ. ಅವರು ಪ್ರಶ್ನಿಸುವಂತಹ ಆರೋಪವನ್ನು ನಾನು ಮಾಡದಿದ್ದರೂ ಅವಾಚ್ಯವಾಗಿ ನಿಂದಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಕುರಿತು ಜೈಜಗದೀಶ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ವರದಿಯಾಗಿದೆ. ಜೈಜಗದೀಶ್ ಮತ್ತು ಜಯರಾಮೇಗೌಡ ಅವರು ಜಗಳ ಮಾಡುವ ಸಂದರ್ಭದಲ್ಲಿ ಸ್ಥಳೀಯರು ಜೈಜಗದೀಶ್ ಅವರಿಗೆ ಸಮಾಧಾನ ಮಾಡಿದರೂ, ಅವರು ಕೋಪ ಕಡಿಮೆ ಆಗಲಿಲ್ಲ ಎಂದಿದ್ದಾರೆ ಜಯರಾಮೇಗೌಡ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
