ಚಂದ್ರಶೇಖರ ಗುರೂಜಿ ನಿಧನ ಹಿನ್ನೆಲೆ ಅಂತ್ಯಸಂಸ್ಕಾರ ಮುಗಿಸಿ ಮರಳುತ್ತಿದ್ದ ಸ್ವಾಮೀಜಿ ಕಾರು ಧಾರವಾಡ ತಾಲೂಕಿನ ತೇಗೂರ ಬಳಿ ಅಪಘಾತಕ್ಕೀಡಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಶಿ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಆಗಿಲ್ಲ.
ಚಂದ್ರಶೇಖರ ಗುರೂಜಿ ಅವರ ಅಂತ್ಯ ಸಂಸ್ಕಾರ ಹುಬ್ಬಳ್ಳಿಯಲ್ಲಿ ನಡೆದಿತ್ತು, ಅದರಲ್ಲಿ ಪಾಲ್ಗೊಂಡು ಹಿಂದಿರುಗುವಾಗ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕಾರು ಅಪಘಾತವಾಗಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ವಾಮೀಜಿಯ ಕಾಲಿಗೆ ಸ್ವಲ್ಪ ಏಟು ಬಿದ್ದಿದ್ದು, ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಾರಿನಲ್ಲಿದ್ದ ಚಾಲಕ ರಮೇಶ ಮಾಳಿ ಸೇರಿದಂತೆ ಇಬ್ಬರು ಆಪ್ತ ಸಹಾಯಕರು ಸಹ ಕಾರಿನಲ್ಲಿದ್ದರು. ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅದನ್ನು ಹೊರತುಪಡಿಸಿದರೆ ಯಾವುದೇ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ.
ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ದಾಖಲಾಗಿದ್ದಾರೆ. ಇನ್ನು ಈ ಬೆನ್ನಲ್ಲೇ ಆಸ್ಪತ್ರೆಯಿಂದಲೇ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ, ಕಾರು ಅಪಘಾತ ಆದರೂ ಕಾರಿನಲ್ಲಿದ್ದ ಐವರಿಗೆ ಯಾವುದೇ ಹೆಚ್ಚಿನ ತೊಂದರೆ ಆಗಿಲ್ಲ, ಕಾರಿನಲ್ಲಿದ್ದ ಎಲ್ಲರೂ ಅರಾಮಾಗಿದ್ದೇವೆ ಯಾರೂ ಚಿಂತಿಸಬೇಡಿʼ ಎಂದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
