ಚಾಕೊಲೇಟ್ ತಿನ್ನುವಾಗ ಉಸಿರುಗಟ್ಟಿ 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ನಡೆದಿದೆ. ಸಮನ್ವಿ ಮೃತಪಟ್ಟ ಬಾಲಕಿಯಾಗಿದ್ದು, ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದಳು. ಇನ್ನು ಬಾಲಕಿ ಶಾಲೆಯ ಬಸ್ಗೆ ಕಾಯುತ್ತಿರುವ ಸಮಯದಲ್ಲಿ ಘಟನೆ ನಡೆದಿದ್ದು, ಸದ್ಯ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮನ್ವಿ ಶಾಲೆಗೆ ಹೋಗಲ್ಲ ಎಂದು ಹಠ ಮಾಡುತ್ತಿದ್ದಳು. ಹೀಗಾಗಿ ಪೋಷಕರು ಚಾಕಲೇಟ್ ಕೊಟ್ಟು ಶಾಲೆಗೆ ಹೋಗಲು ಒಪ್ಪಿಸಿದ್ದಾರೆ. ಬಾಲಕಿ ಚಾಕಲೇಟ್ ಬಾಯಲಿಟ್ಟುಕೊಂಡು ತಾಯಿ ಕೈಹಿಡಿದು ಹೋಗಿ, ಶಾಲಾ ಬಸ್ ಹತ್ತಿಸುತ್ತಿದ್ದಂತೆ ಬಾಲಕಿ ಕುಸಿದು ಬಿದ್ದಿದ್ದಾಳೆ. ಬಾಲಕಿ ಬೀಳುತ್ತಿದ್ದಂತೆ ಬಾಯಿಂದ ಚಾಕಲೇಟ್ ಹೊರಗೆ ಬಿದ್ದಿದೆ. ನಂತರ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.
ಸದ್ಯ ಬಾಲಕಿಯ ಮೃತದೇಹವನ್ನು ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
