ಕನ್ನಡದಲ್ಲಿ ಒಂದು ಗಾದೆ ಇದೆ. ಅದೇನೆಂದರೆ ಬೇಲಿಯೇ ಎದ್ದು ಹೊಲ ಮೈದಂತೆ ಎಂದು. ಈ ಕಥೆ ನೋಡಿದರು ಅದು ಸತ್ಯ ಎಂದು ಹೇಳಬಹುದು. ಪೊಲೀಸರು ಶಿಸ್ತಿನ ಸಿಪಾಯಿಗಳು, ಆದರೆ ಅಂತಹ ಶಿಸ್ತಿನ ಸಿಪಾಯಿಗಳು ಅಶಿಸ್ತಿನಿಂದ ವರ್ತಿಸಿದರೆ ಯಾರನ್ನು ದೂಷಿಸುವುದು. ನಾವು ಈ ರೀತಿ ಹೇಳಲು ಒಂದು ಮುಖ್ಯ ಕಾರಣವಿದೆ.
ಜೂಜು ಎಂಬುದು ಒಂದು ಕೆಟ್ಟ ಚಟ. ಈ ಜೂಜಾಟದಿಂದ ಅದೆಷ್ಟೋ ಮಂದಿ ತಮ್ಮ ಮನೆ ಮಠ ಕಳೆದುಕೊಂಡಿದ್ದಾರೆ. ಆದರೆ ಇದೀಗ ಸ್ವತಃ ಪೊಲೀಸರೇ ಇಂತಹ ಜೂಜಾಟವಾಡಿ ಸಿಕ್ಕಿಬಿದ್ದಿದು ಪೋಲೀಸರ ಅತಿಥಿಯಾಗಿದ್ದಾರೆ. ಈ ಘಟನೆ ನಡೆದಿರುವುದು ಹುಬ್ಬಳ್ಳಿಯಲ್ಲಿ.
ಹುಬ್ಬಳ್ಳಿಯ ಅಕ್ಷಯ ಕಾಲೋನಿಯ ಮನೆಯೊಂದರಲ್ಲಿ ಪೊಲೀಸರು ಇಸ್ಪೀಟ್ ಆಟವಾಡುತ್ತಿದ್ದರು. ಇದರ ಕುರಿತು ಮಾಹಿತಿ ಪಡೆದ ಪೊಲೀಸರು, ಪೊಲೀಸ್ ಆಯುಕ್ತ ಲಾಭೂರಾಮ ಅವರ ಸೂಚನೆ ಹಿನ್ನೆಲೆಯಲ್ಲಿ ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ದಾಳಿ ನಡೆಸಿತ್ತು. ದಾಳಿ ನಡೆಸಿದ ಪೊಲೀಸರಿಗೆ ಅಚ್ಚರಿ ಎದುರಾಗಿದ್ದು, ರಾತ್ರಿ ಕಂಠ ಪೂರ್ತಿ ಕುಡಿದು ನಾಲ್ವರು ಪೊಲೀಸರು ಇಸ್ಪೀಟ್ ಆಟದಲ್ಲಿ ತೊಡಗಿಸಿಕೊಂಡಿದ್ದರು.
ದಾಳಿ ನಡೆಸಿದ ಪೊಲೀಸರು ಸಿಎಆರ್ನ ಇಬ್ಬರು ಹೆಡ್ ಕಾನ್ಸ್ಟೆಬಲ್, ಒಬ್ಬ ನಿವೃತ್ತ ಹೆಡ್ ಕಾನ್ಸ್ಟೆಬಲ್ ಹಾಗೂ ಸಂಚಾರ ವಿಭಾಗದ ಒಬ್ಬ ಕಾನ್ ಸ್ಟೆಬಲ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಆರ್ ಇನ್ಸ್ಪೆಕ್ಟರ್ ಪರಾರಿಯಾಗಿದ್ದು, 9 ಸಾವಿರ ನಗದು ಹಾಗೂ 5 ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
