ಇತ್ತೀಚಿಗೆ ಹಿಂದೂ ಕಾರ್ಯಕರ್ತರಾದ ಪ್ರವೀಣ್ ಅವರ ಹತ್ಯೆ ಯಾಗಿತ್ತು. ಇದೆ ಸಮಯಕ್ಕೆ ಮೊಹಮ್ಮದ್ ಫಾಝೀರ್ ಎಂಬ ಮುಸ್ಲಿಂ ಯುವಕನ ಹತ್ಯೆಯು ಕೂಡ ಆಗಿತ್ತು. ಆದರೆ ಸರ್ಕಾರ ಮಾತ್ರ ಹಿಂದೂ ಯುವಕ ಪ್ರವೀಣ್ ಮನೆಗೆ ತಲುಪಿ ಪರಿಹಾರ ಘೋಷಿಸಿತು, ಇದೀಗ ಇದರ ಕುರಿತು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪ್ರವೀಣ್ ಕುಟುಂಬದವರನ್ನು ಮುಖ್ಯಮಂತ್ರಿಗಳು ಭೇಟಿಯಾಗಿ, ಪರಿಹಾರ ನೀಡಿದ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಶ್ರೀಗಳು ಉತ್ತರಿಸುತ್ತಾ ” ನಾವು ಒಂದು ವಿಚಾರವನ್ನು ಅರಿತುಕೊಳ್ಳಬೇಕು, ಪ್ರಾಣ ಕಳೆದುಕೊಂಡವರು ಮನುಷ್ಯರು, ಅವರೆಲ್ಲರೂ ಸಮಾನರು. ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡಬಾರದೆಂದು” ಎಂದು ಹೇಳಿದರು.
“ಸರ್ಕಾರಕ್ಕೆ ನಾನು ಮಾಡಿಕೊಳ್ಳುತ್ತಿರುವ ಮನವಿ ಏನೆಂದರೆ, ಹತ್ಯೆಯಾದ ಇತರ ಕುಟುಂಬಕ್ಕೂ ಪರಿಹಾರವನ್ನು ಸರ್ಕಾರ ನೀಡಲಿ. ಹತ್ಯೆಯಾದ ಕುಟುಂಬಕ್ಕೆ ಹಣಕಾಸಿನ ಸಹಾಯ ಮಾಡುವುದು ಅಥವಾ ಕೆಲಸ ನೀಡುವುದು ಖಂಡಿತ ಪರ್ಯಾಯ ಮಾರ್ಗವಲ್ಲ. ಜೀವಕ್ಕೆ ಹಣದಿಂದ ತುಲನೆ ಮಾಡುವುದು ತಪ್ಪು”ಎಂದು ಶ್ರೀಗಳು ಹೇಳಿದ್ದಾರೆ.
“ದೇಶ ಅಭಿವೃದ್ದಿ ಪಥದ ಕಡೆ ಸಾಗಬೇಕಾದರೆ, ಶಾಂತಿ, ಸಹಬಾಳ್ವೆ ಮುಖ್ಯವಾಗುತ್ತದೆ. ಒಂದು ಸಮುದಾಯದವರು ಇನ್ನೊಂದು ಸಮುದಾಯದವರ ಮೇಲೆ ಆಕ್ರಮಣ ಮಾಡುವುದು ಅಥವಾ ದಬ್ಬಾಳಿಕೆ ನಡೆಸುವುದು ತಪ್ಪು. ಇದನ್ನು ಸರ್ಕಾರ ನಿಯಂತ್ರಿಸಬೇಕು”ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
