ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ. ಇಂದಿಗೂ ಸಹ ಅಪ್ಪು ನೆನಪು ಮಾತ್ರ ಅಭಿಮಾನಿಗಳ ಮನಸಲ್ಲಿ ಅಚ್ಚೆಯಾಗಿ ಉಳಿದಿದೆ. ಈ ವೇಳೆ ಗಾಯಕ ಗುರುಕಿರಣ್ ಅವರು ಅಪ್ಪು ಜೊತೆ ತೆಗೆಸಿದ ಕೊನೆಯ ಫೋಟೋವನ್ನು ಹಂಚಿಕೊಳ್ಳುತ್ತಾ ಒಂದು ಹಾಡನ್ನು ಕೂಡ ರಚಿಸಿದ್ದಾರೆ.
2021 ಅಕ್ಟೊಬರ್ 29 ರಂದು ಅಪ್ಪು ನಮ್ಮನ್ನು ಅಗಲಿದ್ದರು. ಆದರೆ ಅಕ್ಟೊಬರ್ 28 ರಂದು ಗಾಯಕ ಗುರುಕಿರಣ್ ಅವರ ಬರ್ತಡೇ ಪಾರ್ಟಿಯಲ್ಲಿ ಅಪ್ಪು ಭಾಗವಹಿಸಿದ್ದರು. ಈ ವೇಳೆ ಗುರುಕಿರಣ್ ಅವರಿಗೆ ಅಪ್ಪು ಕೇಕ್ ತಿನ್ನಿಸುತ್ತಿದ್ದರು. ಇದರ ಫೋಟೋ ಕೂಡ ಛಾಯಾಗ್ರಾಹಕರು ಸೆರೆ ಇಡಿದಿದ್ದರು. ಆದರೆ ಇದು ಅಪ್ಪು ಅವರ ಜೊತೆ ಗುರುಕಿರಣ್ ಅವರ ಕೊನೆಯ ಫೋಟೋವಾಗುತ್ತದೆ ಎಂದು ಕನಸಲ್ಲಿಯೂ ಸಹ ಗುರುಕಿರಣ್ ಅಂದುಕೊಂಡಿರಲಿಲ್ಲ. ಇದೀಗ ಅಪ್ಪು ಅವರಿಗೋಸ್ಕರ ಗುರುಕಿರಣ್ ಒಂದು ಶೋಕಗೀತೆಯನ್ನು ರಚಿಸಿದ್ದು, ಇದರ ಕೊನೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದು, ಇದೀಗ ಈ ಹಾಡು ಎಲ್ಲರ ಕಣ್ಣಲ್ಲೂ ನೀರು ತರಿಸುತ್ತಿದೆ.
‘ಮುಗಿದಿಲ್ಲ ಇನ್ನೂ ಕವಿತೆ, ನಡುವೆ ಶಾಹಿ ಖಾಲಿ..’ ಎಂಬ ಸಾಲಿನಿಂದ ಶುರುವಾಗುವ ಈ ಹಾಡು ಪ್ರತಿಯೊಬ್ಬರ ಕಣ್ಣಲ್ಲೂ ಸಹ ನೀರನ್ನು ತರಿಸುತ್ತದೆ. ಈ ಹಾಡಿಗೆ ಹೃದಯಶಿವ ಸಾಹಿತ್ಯ ಬರೆದಿದ್ದಾರೆ. ಗುರುಕಿರಣ್ ಅವರ ಸಂಗೀತ ಸಂಯೋಜನೆ ಮತ್ತು ಗಾಯನ ಎರಡನ್ನು ಮಾಡಿದ್ದಾರೆ. ಅಪ್ಪು ಅವರ ಬಾಲ್ಯದ ಫೋಟೋದಿಂದ ಸಮಾಧಿ ಸೇರುವ ತನಕದ ಹಲವು ಭಾವಚಿತ್ರಗಳನ್ನು ಇದರಲ್ಲಿ ಹಂಚಿಕೊಳ್ಳಲಾಗಿದೆ. ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಅಳುತ್ತಿರುವ ದೃಶ್ಯಗಳು ಆ ಹಾಡಿನಲ್ಲಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
