ಕರ್ನಾಟಕರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ ಗತಿಸಿದೆ. ಪುನೀತ್ ಅಗಲಿಕೆಯ ನೋವನ್ನು ಭರಿಸಲು ಕನ್ನಡಿಗರಿಗೆ ಈಗಲೂ ಸಾಧ್ಯವಾಗುತ್ತಿಲ್ಲ. ಅಪ್ಪು ನಮ್ಮನ್ನು ಅಗಲಿದ ನಂತರ ಜನರು ಅವರನ್ನು ದೇವರ ರೂಪದಲ್ಲಿ ಕಾಣುತ್ತಿದ್ದಾರೆ. ಇದಕ್ಕೆ ಅವರ ಪುಣ್ಯ ಭೂಮಿಯತ್ತ ಬರುತ್ತಿರುವ ಜನಸಾಗರವೇ ಸಾಕ್ಷಿ. ಸಹಜವಾಗಿಯೇ ಅಪ್ಪು ನೆನಪು ಮನಸ್ಸಿನಿಂದ ಮಾಸಿಹೋಗಲ್ಲ ಸಾಧ್ಯವೇ ಇಲ್ಲ. ಹಾಗಾಗಿ ಅಪ್ಪು ನಾಲ್ಕು ವರ್ಷದ ಹಿಂದೆ ಮಾಡಿದ್ದ ಟ್ವಿಟ್ ಇದೀಗ ವೈರಲ್ ಆಗಿದೆ.
ಇದೇ ದಿನ ಅಂದರೆ, ನಾಲ್ಕು ವರ್ಷಗಳ ಹಿಂದೆ 07 ಜೂನ್ 2018 ರಂದು ಪುನೀತ್ ರಾಜ್ ಕುಮಾರ್ ಅವರ ಕಾರು ಆಕ್ಸಿಡೆಂಟ್ ಆಗಿತ್ತು. ಅಭಿಮಾನಿಗಳು ಆತಂಕಗೊಂಡಿದ್ದರು. ಅಪ್ಪುಗೆ ಏನಾಗಿದೆ ಎನ್ನುವ ಆತಂಕ ಎಲ್ಲರದ್ದಾಗಿತ್ತು. ಹಾಗಾಗಿ ಅಪ್ಪು ಒಂದು ಟ್ವಿಟ್ ಮಾಡಿದ್ದರು. ‘ಆರಾಮಾಗಿದ್ದೀನಿ, ಯಾರೂ ಚಿಂತಿಸಬೇಡಿ. ನಿಮ್ಮ ಕಾಳಜಿಗೆ ಧನ್ಯವಾದಗಳು’ ಎಂದು ಟ್ವಿಟ್ ಮಾಡಿದ್ದರು. ಈಗ ಅದು ವೈರಲ್ ಆಗಿದೆ.
ನಾಲ್ಕು ವರ್ಷದ ಹಿಂದೆ ಇದೇ ದಿನ ನಡೆದಿದ್ದ ಘಟನೆಯನ್ನು ನೆನಪಿಸಿಕೊಂಡಿರುವ ಅಪ್ಪು ಅಭಿಮಾನಿಗಳು, ಈ ಮಾತನ್ನು ನೀವು 29ರ ಅಕ್ಟೋಬರ್ 2021ರ ಸಂಜೆ ಹೇಳಬೇಕಿತ್ತು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಮತ್ತೆ ಹುಟ್ಟಿ ಬನ್ನಿ ಎಂದು ಕಾಮೆಂಟ್ ಮೂಲಕ ಕೇಳಿಕೊಳ್ಳುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
