ನಟ ಸೃಜನ್ ಲೋಕೇಶ್ ಹಾಗೂ ಸಚಿವರಾದ ವಿ. ಸೋಮಣ್ಣನ ಪುತ್ರ ಅರುಣ್ ಸೋಮಣ್ಣ ಬೆಂಬಲಿಗರ ನಡುವೆ ಘಟನೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಮುದ್ದಿನ ಪಾಳ್ಯದಲ್ಲಿರುವ ಕಿಂಗ್ಸ್ ಕ್ಲಬ್ನಲ್ಲಿ ಈ ಗಲಾಟೆ ನಡೆದಿದ್ದು ‘ಅಪ್ಪು ಬ್ಯಾಡ್ಮಿಂಟನ್ ಕಪ್’ ಪ್ರಾಕ್ಟೀಸ್ ನಂತರ ಸೃಜನ್ ಲೋಕೇಶ್ ಮತ್ತವರ ತಂಡ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಅರುಣ್ ಸೋಮಣ್ಣ ಮತ್ತವರ ತಂಡ ಗಲಾಟೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸೃಜನ್ ಮತ್ತವರ ಹುಡುಗರು ಪಾರ್ಟಿ ಮಾಡುವ ವೇಳೆ ಅರುಣ್ ಸೋಮಣ್ಣ ಟೀಮ್ ಕ್ಲಬ್ಗೆ ಬಂದಿದ್ದು, ಯಾಕೆ ಜೋರಾಗಿ ಗಲಾಟೆ ಮಾಡ್ತೀರಾ ಅಂತ ಪ್ರಶ್ನೆ ಮಾಡಿದ್ದಾರಂತೆ. ಆಗ ಮಾತಿಗೆ ಮಾತು ಬೆಳೆದು ಜಗಳ ಆಗಿದೆ ಎನ್ನಲಾಗಿದೆ. ಕೈಕೈ ಮಿಲಾಯಿಸುವ ಹಂತಕ್ಕೂ ಈ ಗಲಾಟೆ ಹೋಗಿತ್ತು ಎಂದು ಹೇಳಲಾಗಿದೆ.
ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾರೂ ದೂರು ನೀಡಿಲ್ಲ ಎಂಬ ಮಾಹಿತಿ ಸಿಕ್ಕಿದೆ. ದೂರು ಕೊಡದಂತೆ ಒತ್ತಡ ಹಾಕಿದ್ದು, ಕ್ಲಬ್ನ ಸಿಸಿಟಿವಿ ಫೂಟೇಜ್ ಅನ್ನೂ ಡಿಲೀಟ್ ಮಾಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್, ‘ಅಂದು ಗಲಾಟೆಯೇ ನಡೆದಿಲ್ಲ. ಆ ಗಲಾಟೆ ವಿಷ್ಯಕ್ಕೂ ನನನೂ ಯಾವುದೇ ಸಂಬಂಧ ಇಲ್ಲ. ನಾನು ಅಲ್ಲಿಗೆ ಹೋಗಿಯೇ ಇಲ್ಲ. ರಾಜಕೀಯ ದುರುದ್ದೇಶದಿಂದ ನನ್ನ ತಂದೆಯ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಸೃಜನ್ರನ್ನು ನಾನು ಭೇಟಿಯೇ ಮಾಡಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿರೋಧಿಗಳು ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
