ಎಲ್ಲ ದೇವರಂತೆ ಬ್ರಹ್ಮನಿಗೆ ಪೂಜೆಯಿಲ್ಲ, ಸೃಷ್ಟಿಕರ್ತ ಎನ್ನಲಾದ ಬ್ರಹ್ಮನ ಪೂಜೆ ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ನಿಷಿದ್ಧ, ಭಾರತದಲ್ಲಿ ಹುಡುಕಿದರೆ ಬೆರಳೆಣಿಕೆಯಷ್ಟು ಬ್ರಹ್ಮ ದೇಗುಲಗಳಿವೆ, ದೇಗುಲಗಳಿದ್ದರೂ ಅಲ್ಲಿ ಪೂಜೆಗಳು ಸಲ್ಲದ ಉದಾಹರಣೆಗಳಿವೆ, ಭಾರತದ ಪ್ರಾಚೀನ ಬ್ರಹ್ಮದೇಗುಲ ಎನ್ನಲಾದ ಗುಜರಾತಿನಲ್ಲಿದೆ ಅದನ್ನ ಬಿಟ್ಟರೆ ಕಾಣಸಿಗೋದು ಲಾಡಿ ಎಂಬ ಈ ಊರಿನಲ್ಲಿ!
ಸುಮಾರು ಒಂದುಸಾವಿರದ ಮುನ್ನೂರು ವರ್ಷದ ಇತಿಹಾಸ ಹೊಂದಿರುವ ಈ ಬ್ರಹ್ಮ ದೇಗುಲ ಇದೀಗ ರಿನೋವೇಟ್ಗೊಳ್ತಿದೆ. ಬ್ರಹ್ಮನ ಜೊತೆ ಜೊತೆಗೆ ನಾಗ ಬ್ರಹ್ಮನೂ ಇಲ್ಲಿದ್ದು ಇದು ನಾಗಕ್ಷೇತ್ರ ಕೂಡ ಹೌದು.
ಮಂಗಾರದ ರಾಜ ಚಂದ್ರಶೇಖರ ಅರಸರಿಗೆ ದೋಣಂಚಿ ಗುತ್ತಿನ ಸತ್ಯ ಬನ್ನಾಯ ಎಂಬ ಮಂತ್ರಿ ಇದ್ದ, ಮಕ್ಕಳಿಲ್ಲದ ಸತ್ಯ ಬನ್ನಾಯ ಹಾಗೂ ಆತನ ಹೆಂಡತಿ ಲಕ್ಷ್ಮಿ ಬ್ರಹ್ಮನ ಬೇಡಿಕೊಂಡಾಗ ಮಕ್ಕಳಾದ ಹಿನ್ನೆಲೆಯಲ್ಲಿ ಜನಿಸಿದ ಮಗುವಿಗೆ ನಾಡು ಎಂಬ ನಾಮಕರಣ ಮಾಡಲಾಗಿತ್ತು, ಮುಂದೆ ಆತ ಸದರ್ನಾಡು ಎಂದು ಪ್ರಸಿದ್ಧನಾಗ್ತಾನೆ, ಮಂಗಳಪುರಕ್ಕೆ ದಾಳಿಯಾದಾಗ ಸತ್ಯ ಬನ್ನಾಯನನ್ನ ಮೋಸದಿಂದ ಕೊಲ್ಲುವ ಕಾರಣದಿಂದಾಗಿ ಹೆಂಡತಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ತಾಳೆ ಇದರಿಂದ ಮನ ನೊಂದ ಮಹಾನ್ ಬ್ರಹ್ಮ ಭಕ್ತ ನಾಡು ನಾಸ್ತಿಕನಾಗುತ್ತಾನೆ, ಒಮ್ಮೆ ಅರಸನ ಜೊತೆ ಅಂಗರಕ್ಷಣೆಗಾಗಿ ವೇಣೂರಿನ ಮಹಲಿಂಗ ದೇಗುಲಕ್ಕೆ ತೆರಳುವಾಗ ಬ್ರಾಹ್ಮಣ ವೇಷದಲ್ಲಿ ಬಂದ ಬ್ರಹ್ಮನು ನಾಡುವನ್ನ ಪರೀಕ್ಷಿಸಲು ಪ್ರಸಾದ ಕೊಟ್ಟಾಗ ತಿರಸ್ಕರಿಸುವ ನಾಡುವಿನ ಉದ್ಧಟತನಕ್ಕೆ ಕೋಪಗೊಂಡ ಬ್ರಹ್ಮ ಆತನನ್ನ ಶಿಲೆಯನ್ನಾಗಿಸುತ್ತಾನೆ, ಹೀಗೆ ಶಿಲೆಯಾದ ನಾಡು ಮುಂದೆ ಬ್ರಹ್ಮ ಬಲಾಂಡಿ ಎಂಬ ದೈವವಾಗ್ತಾನೆ.
ಮೂಡುಬಿದಿರೆಯ ಈ ದೇಗುಲ ಚತುರ್ಮುಖ ಬ್ರಹ್ಮನಿದ್ದು, ಆತನ ಅಕ್ಕಪಕ್ಕದಲ್ಲಿ ರಕ್ತೇಶ್ವರಿ ಹಾಗೂ ಕೊಡಮಣಿತ್ತಾಯ ದೇಗುಲಗಳಿದ್ದು ದೇಗುಲದ ಪೂರ್ವಭಾಗದ ಅಂಜಲ್ ಭರ್ಕೆಯಲ್ಲಿ ಶಾಂಭವಿ ನದಿ ಉಗಮಗೊಂಡು ದೇಗುಲದ ಪಕ್ಕದಲ್ಲಿ ಸಣ್ಣ ಕಾಲುವೆಯಾಗಿ ಹರಿದು ಬಪ್ಪನಾಡು ದೇಗುಲದ ಬಳಿಯ ಸಮುದ್ರ ಸೇರುವುದು ವಿಶೇಷ.
ಒಟ್ಟಿನಲ್ಲಿ ಬ್ರಹ್ಮ ದೇವನ ದೇಗುಲಕ್ಕೂ ಇದೀಗ ಮತ್ತೆ ಕಳೆ ಬಂದಿದ್ದು ಭಾರತದ ಪ್ರಮುಖ ಬ್ರಹ್ಮ ದೇಗುಲಗಳಲ್ಲೊಂದಾದ ಲಾಡಿ ಚತುರ್ಮುಖ ಬ್ರಹ್ಮ ತನ್ನ ಹೊಸ ನಿವಾಸವನ್ನ ಸಿದ್ಧಗೊಳಿಸಿಕೊಳ್ತಿದ್ದಾನೆ ಅನ್ನೋದು ಸಂತಸದ ವಿಷಯ!
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
