ಇತ್ತೀಚಿನ ದಿನಗಳಲ್ಲಿ ಜನರು ಬಹಳ ದೊಡ್ಡ ಉದ್ಯಮದಲ್ಲಿದ್ದರು ಸಹ ಅದನ್ನು ಬಿಟ್ಟು ರಾಜಕೀಯಕ್ಕೆ ಪ್ರವೇಶಿಸುವುದನ್ನು ನಾವು ನೋಡಿದ್ದೇವೆ. ರಾಜಕೀಯ ಕ್ಷೇತ್ರದಲ್ಲಿ ಹಲವಾರು ಲಾಭವಿದೆ ಎಂಬುದು ಜನರ ಮನಸ್ಸಲ್ಲಿದೆ. ಆದರೆ ಇಲ್ಲೊಬ್ಬ ಮಹಿಳೆ ರಾಜಕೀಯ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿ ಶಿಕ್ಷಕಿಯಾಗಿದ್ದಾರೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಪುರಸಭೆಯ 8ನೇ ವಾರ್ಡ್ನಿಂದ ಟಿಡಿಪಿ ಪರವಾಗಿ ಗೀತಾಶ್ರೀ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. 1998ರಲ್ಲಿಯೇ ಶಿಕ್ಷಕಿ ಹುದ್ದೆಗಾಗಿ ಡಿಎಸ್ಸಿ ಪರೀಕ್ಷೆ ಬರೆದಿದ್ದು, ಆಯ್ಕೆಯಾಗಿದ್ದರು. ಆದರೆ ಕಾರಣಾಂತರದಿಂದ ಅವರು ನೇಮಕವಾಗಿರಲಿಲ್ಲ. ಆದರೆ ಇದೇ ತಿಂಗಳ ಏಪ್ರಿಲ್ 13ರಂದು ಚಿತ್ತೂರು ಡಿಇಒ ಗೀತಾಶ್ರೀ ಅವರನ್ನು ಶಿಕ್ಷಕಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ ಈಗಾಗಲೇ ಇವರು ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು.
ಒಂದು ಕ್ಷಣ ಕೂಡ ಯೋಚಿಸದೆ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿಕ್ಷಕಿ ಹುದ್ದೆಗೆ ಸೇರಿದರು. ಇವರು ಸಲ್ಲಿಸಿದ ರಾಜೀನಾಮೆ ಪತ್ರವನ್ನು ಮುನ್ಸಿಪಲ್ ಕಮಿಷನರ್ ತಕ್ಷಣವೇ ಅಂಗೀಕರಿಸಿದ್ದೂ ಆಗಿದೆ. ರಾಜೀನಾಮೆ ಅಂಗೀಕಾರವಾದ ಬಳಿಕ ಇವರು ಶಿಕ್ಷಕಿ ಕೆಲಸಕ್ಕೆ ಸೇರಿದ್ದಾರೆ. ಇದಲ್ಲದೆ ಇವರನ್ನು ಸರ್ಕಾರ ಕೇವಲ ಗುತ್ತಿಗೆ ಆದರದ ಮೇಲೆ ಶಿಕ್ಷಕಿಯಾಗಿ ನೇಮಿಸಿದ್ದು ಇವರಿಗೆ ಮಾಸಿಕ ವೇತನ ಕೇವಲ 32,670 ರೂಪಾಯಿ.
ಇನ್ನು ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ತಮ್ಮ ಮೇಲೆ ನಂಬಿಕೆ ಇಟ್ಟು ಕೌನ್ಸಿಲರ್ ಆಗಿ ಗೆಲ್ಲಿಸಿದ ತಮ್ಮ ವಾರ್ಡಿನ ಜನತೆಗೆ ಪೂರ್ಣ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ, ಕ್ಷಮಿಸಬೇಕು ಎಂದು ಗೀತಾಶ್ರೀ ತಮ್ಮ ವಾರ್ಡ್ ಜನರನ್ನು ಕೋರಿದ್ದಾರೆ. ರಾಜಕೀಯದಿಂದ ಹಿಂದೆ ಸರಿಯುತ್ತಿದ್ದರೂ ಜನತೆಗೆ ಸದಾ ಲಭ್ಯವಿರುವುದಾಗಿ ಭರವಸೆ ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
