ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡುವುದು ಅಶುಭ ಎಂದು ಹಿರಿಯರು ಹೇಳುತ್ತಾರೆ ಎಕೆಂದರೆ ಮನಸ್ಸಿನ ಚಂಚಲತೆಯು ಸುಮಾರು ಒಂದು ವರ್ಷದವರೆಗೆ ಉಳಿಯುತ್ತದೆ. ಮನಸ್ಸಿನ ಚಂಚಲತೆಯ ಪ್ರಚಂಡ ಪ್ರಭಾವದಿಂದಾಗಿ ಯಾವುದಾದರೊಂದು ಘಟನೆಯು ಘಟಿಸುವ ಮೊದಲೇ ಅದು ಘಟಿಸಿ ಹೋಗಿದೆ ಎಂಬ ತಪ್ಪುತಿಳುವಳಿಕೆ ಅಥವಾ ಗಾಳಿ ಸುದ್ದಿ ಹರಡುವ ಸಾಧ್ಯತೆ ಇರುತ್ತದೆ. ಇದನ್ನೇ ಯಾವುದಾದರೊಂದು ಅಡಚಣೆಯನ್ನು ಮೈಮೇಲೆ ಎಳೆದುಕೊಳ್ಳುವುದು ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿ ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡುವುದು ಅಶುಭವೆಂದು ತಿಳಿದುಕೊಳ್ಳುತ್ತಾರೆ. ನೀಜವಾದ ಕಾರಣ ಇಲ್ಲಿದೆ ನೋಡಿ.
ಒಂದು ದಿನ ಗಣೇಶನು ತನ್ನ ವಾಹನವಾದ ಇಲಿಯ ಮೇಲೆ ಕುಳಿತು ಲೋಕಸಂಚಾರ ಮಾಡುತ್ತಾ ಚಂದ್ರಲೋಕಕ್ಕೇ ಬಂದನು. ಚಂದ್ರನು ಅವನನ್ನು ನೋಡಿದನು. ಚಂದ್ರ ಸರ್ವಾಂಗಸುಂದರ. ಅದೇ ಅವನಿಗೆ ಜಂಬ. ಗಣಪತಿಯ ಆನೆಮುಖ, ಡೊಳ್ಳುಹೊಟ್ಟೆ ಮತ್ತು ಅವನ ಇಲಿಯನ್ನು ನೋಡಿ ಹಾಸ್ಯಮಾಡಿ ನಕ್ಕನು.
ಇದರಿಂದ ಅಪಮಾನಿತನಾದ ಗಣೇಶನಿಗೆ ಚಂದ್ರನ ಮೇಲೆ ಬಹಳ ಕೋಪ ಬಂದಿತು. ಕೂಡಲೇ ಅವನ ಕಣ್ಣುಗಳು ಕೆಂಪಾದವು. ಅವನು “ಎಲೈ ಚಂದ್ರ , ನಿನಗೆ ನಿನ್ನ ಸೌಂದರ್ಯದ ಮದ ಹೆಚ್ಚಿಹೋಗಿದೆ. ಎಲ್ಲ ಲೋಕಗಳೂ ಪೂಜಿಸುವ ನನನ್ನೇ ಹಾಸ್ಯಮಾಡಿ ನಗುತ್ತಿರುವೆಯಾ , ಮೂರ್ಖ! ಇದೊ, ನಿನ್ನ ಅಹಂಕಾರಕ್ಕೆ ತಕ್ಕ ಫಲವನ್ನು ಅನುಭವಿಸು!” ಎಂದು ಗುಡುಗಿದನು. “ನಿನ್ನ ಗರ್ವಕ್ಕೂ ಅಜ್ಞಾನಕ್ಕೂ ಕಾರಣವಾದ ನಿನ್ನ ಈ ಸೌಂದರ್ಯವು ಕುಂದಿ ಹೋಗಲಿ! ಇನ್ನು ಮುಂದೆ ನನ್ನ ಹುಟ್ಟಿದ ದಿನವಾದ ಭಾದ್ರಪದ ಶುದ್ಧ ಚೌತಿಯ ದಿನ ನಿನ್ನನ್ನು ನೋಡುವವರು ಸುಳ್ಳು ಅಪವಾದಕ್ಕೆ ಗುರಿಯಾಗಲಿ!” ಎಂದು ಶಾಪ ಕೊಟ್ಟನು.
ಈಗ ಶಾಪಗ್ರಸ್ತನಾದ ಚಂದ್ರನ ಅಹಂಕಾರವೆಲ್ಲಾ ಚೂರುಚೂರಾಯಿತು. ಅವನಿಗೆ ತನ್ನ ತಪ್ಪಿನ ಅರಿವಾಯಿತು. ಪಶ್ಚಾತ್ತಾಪವೂ ಆಯಿತು. ಆಗ ಅವನು ಗಣೇಶನ ಮುಂದೆ ಭಯ-ಭಕ್ತಿಗಳಿಂದ ಕೈಮುಗಿದು ನಿಂತು, “ಸ್ವಾಮಿ, ನನ್ನ ಅಜ್ಞಾನವನ್ನು ಕ್ಷಮಿಸಿಬಿಡು ನನಗೆ ಕೊಟ್ಟ ಶಾಪವನ್ನು ಹಿಂತೆಗೆದುಕೊಂಡು ನನ್ನನ್ನು ಉದ್ಧರಿಸು” ಎಂದು ಅಂಗಲಾಚಿ ಬೇಡಿಕೊಂಡನು.
ಆಗ ಕ್ಷಮಾಶೀಲನಾದ ಗಣೇಶನು ಶಾಂತನಾದನು. ಅವನು ಸಂಕಟದಲ್ಲಿದ್ದ ಚಂದ್ರನನ್ನು ಸಂತೈಸುತ್ತಾ, “ಚಂದ್ರ ನೀನು ನಿನ್ನ ತಪ್ಪನ್ನು ತಿಳಿದುಕೊಂಡೆ. ನಿನ್ನ ಗರ್ವ ಹೋಗುವುದೇ ಮುಖ್ಯ. ಏನಾದರೂ ನನ್ನ ಶಾಪ ಎಂದಿಗೂ ಸುಳ್ಳಾಗದು. ಆದರೆ ಚೌತಿಯ ದಿನ ನಿನ್ನನ್ನು ನೋಡಿ ಮಿಥ್ಯಾಪವಾದಕ್ಕೆ ಗುರಿಯಾದವರು ಶುದ್ಧ ಬಿದಿಗೆಯ ದಿನವು ನಿನ್ನ ದರ್ಶನ ಮಾಡಿದರೆ ಅಥವಾ ಸ್ಯಮಂತಕ ಮಣಿಯ ಕಥೆಯನ್ನು ಕೇಳಿದರೆ ಅಂಥವರು ಅಪವಾದದಿಂದ ಮುಕ್ತರಾಗಲಿ” ಎಂದು ಹೇಳಿದನು. ಆಗ ಚಂದ್ರನಿಗೆ ಸಮಾಧಾನವಾಯಿತು.
ಸೌರಮಂಡಲದಲ್ಲಿನ ಎಲ್ಲ ಗ್ರಹಗಳಲ್ಲಿ ಚಂದ್ರಗ್ರಹವು ಅತ್ಯಂತ ಚಂಚಲವಾಗಿದೆ. ಆದುದರಿಂದ ಚಂಚಲ ಸ್ವಭಾವವಿರುವವರ ಮನಸ್ಸಿನ ಮೇಲೆ ಚಂದ್ರನ ಸ್ಪಂದನಗಳು ಹೆಚ್ಚು ಕಾರ್ಯ ಮಾಡುತ್ತವೆ. ೨. ಪೃಥ್ವಿಯಿಂದ ಚಂದ್ರಗ್ರಹದ ದರ್ಶನವನ್ನು ನಾವು ಸಹಜವಾಗಿ ಪಡೆದುಕೊಳ್ಳಬಹುದು ಮತ್ತು ಅದನ್ನು ನಾವು ಮನಸ್ಸಿನಲ್ಲಿ ಅತ್ಯಂತ ಸಹಜವಾಗಿ ಯಾವಾಗ ಬೇಕಾದರೂ ನೋಡಬಹುದು. ೩. ಪರಿಣಾಮ: ಗಣೇಶ ಚತುರ್ಥಿಯ ದಿನ ಬ್ರಹ್ಮಾಂಡದಲ್ಲಿ ನಿರ್ಮಾಣವಾಗುವ ರಜೋಗುಣದ ಸ್ಪಂದನಗಳು ಚಂದ್ರನ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗಿ ಚಂಚಲ ಮನಸ್ಸಿರುವ ಮನುಷ್ಯರ ಕಡೆಗೆ ಆಕರ್ಷಿಸಲ್ಪಡುತ್ತವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
