ಕನ್ನಡ ಚಿತ್ರರಂಗದ ಈ ತಲೆಮಾರಿನ ನಾಯಕ ನಟರನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮುಂಚೂಣಿಯ ನಟರ ಸಾಲಿನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ನಿಲ್ಲುತ್ತಾರೆ ಎಂದರೆ ತಪ್ಪಾಗದು. ತಮ್ಮ ವಿಭಿನ್ನ ಕಂಠ, ಮ್ಯಾನರಿಸಂ ಮತ್ತು ಮನೋಜ್ಞ ನಟನೆಯಿಂದಲೇ ಸ್ಟಾರ್ ಅನ್ನಿಸಿಕೊಂಡಿರುವ ಸುದೀಪ್ ಅವರ ಜನಪ್ರಿಯತೆ ಕೇವಲ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯ, ದೇಶಗಳಲ್ಲಿಯೂ ಆವರಿಸಿದೆ. ಚಿತ್ರರಂಗಕ್ಕೆ ಸುದೀಪ್ ಕಾಲಿರಿಸಿ 26 ವರ್ಷಗಳು ಕಳೆದಿವೆ. ಈ ಸಾಧನೆಯನ್ನು ಗುರುತಿಸಲು ಭಾರತೀಯ ಅಂಚೆ ಇಲಾಖೆಯಿಂದ ‘ವಿಶೇಷ ಅಂಚೆ ಲಕೋಟೆ’ ಬಿಡುಗಡೆ ಮಾಡಲಾಗುತ್ತಿದೆ.
ಹೌದು, ಭಾರತೀಯ ಅಂಚೆ ಇಲಾಖೆಯು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ವಿಶೇಷ ಅಂಚೆ ಲಕೋಟೆ’ಯನ್ನು ಹೊರ ತರುತ್ತಿದೆ. ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ ‘ವಿಶೇಷ ಅಂಚೆ ಲಕೋಟೆಯನ್ನು’ ಬಿಡುಗಡೆ ಮಾಡುತ್ತದೆ.
ಆ ನಿಮಿತ್ತ ಇಂದು ಅಂಚೆ ಇಲಾಖೆಯ ಅಧೀಕ್ಷಕರಾದ ಮಾದೇಶ್, ಕಿಚ್ಚ ಸುದೀಪ್ ನಿವಾಸ ಆಗಮಿಸಿ NOC ಪಡೆದರು. ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು. ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ.
ಕಿಚ್ಚ ಸುದೀಪ್ ಅವರ ಸಾಧನೆಗಳನ್ನು ಗುರುತಿಸಿ “ವಿಶೇಷ ಅಂಚೆ ಲಕೋಟೆ” ಮೂಲಕ ಗೌರವ ಸಲ್ಲಿಸುತ್ತಿರುವ ಭಾರತೀಯ ಅಂಚೆ ಇಲಾಖೆಯನ್ನು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮತ್ತು ಕನ್ನಡಿಗರು ಹೃದಯತುಂಬಿ ಅಭಿನಂದಿಸುತ್ತಿದ್ದಾರೆ.